ಅಪ್ರಾಪ್ತೆ ಮೇಲೆ ಅಪ್ರಾಪ್ತ ಬಾಲಕನೊಬ್ಬ ಅತ್ಯಾಚಾರ ಎಸಗಿರುವ ದುರ್ಘಟನೆ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಭಾನುವಾರ ನಡೆದಿದ್ದು, ಸೋಮವಾರ ಪ್ರಕರಣ ದಾಖಲಾಗಿದೆ.
ಸಂತ್ರಸ್ತ ಬಾಲಕಿಯನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಪ್ರಕರಣದ ತನಿಖೆ ತ್ವರಿತವಾಗಿ ನಡೆಯುತ್ತಿಲ್ಲ. ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ನೀಡುತ್ತಿಲ್ಲ. ಪ್ರಕರಣವನ್ನು ನಿಧಾನವಾಗಿ ಮುಚ್ಚಿ ಹಾಕುವ ಹುನ್ನಾರ ನಡೆಯುತ್ತಿರುವ ಅನುಮಾನವಿದೆ ಎಂದು ಸಂತ್ರಸ್ತೆಯ ಪೋಷಕರು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈದಿನ.ಕಾಮ್ ಜೊತೆ ಮಾತನಾಡಿರುವ ಸಾಮಾಜಿಕ ಹೋರಾಟಗಾರ ದಾವಲಸಾಬ ತಾಳಿಕೋಟಿ, “ಸತ್ರಸ್ತೆಯ ತಾಯಿ ಕಡು ಬಡತನ ಎದುರಿಸುತ್ತಿದ್ದಾರೆ. ತನ್ನ ಮೂರು ಮಕ್ಕಳೊಂದಿಗೆ ವಾಸವಿದ್ದಾರೆ. ಕೃತ್ಯ ಎಸಗಿದ ಅಪ್ರಾಪ್ತನ ತಂದೆಯಿಂದ ರಾಜಕೀಯ ಒತ್ತಡ ತಂದಿದ್ದು, ಸತ್ರಸ್ತೆಯ ತಾಯಿಗೆ ಪರಿಹಾರವಾಗಿ ಹಣ ಕೊಟ್ಟು ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ” ಎಂದು ಹೇಳಿದರು.
“ಈ ಕುರಿತು ಸತ್ರಸ್ತೆಯ ತಾಯಿ, ʼನಮ್ಮ ಮಗಳಿಗೆ ಆದ ಈ ಕೃತ್ಯ ಮತ್ತೆ ಬೇರೆ ಯಾವುದೇ ಮಕ್ಕಳಿಗೆ ಆಗದಿರಲ್ಲಿ. ಕೃತ್ಯ ಎಸಗಿದವನಿಗೆ ಶಿಕ್ಷೆ ಕೊಡಬೇಕು. ನಮಗೆ ನ್ಯಾಯ ಒದಗಿಸಿ ಕೊಡಬೇಕು. ಸಂತ್ರಸ್ತೆಗೆ ಕೂಡಲೇ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡುವುದರ ಜೊತೆಗೆ ಸಂಪೂರ್ಣ ಶಿಕ್ಷಣದ ವ್ಯವಸ್ಥೆ ಮಾಡಬೇಕುʼ ಎಂದು ಸತ್ರಸ್ತೆಯ ತಾಯಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ” ಎಂದರು.
“ಇದೊಂದು ಅಮಾನವೀಯ ನಾಗರಿಕ ಸಮಾಜ ತಲೆ ತಗ್ಗಿಸುವಂತ ಘಟನೆಯಾಗಿದ್ದು, ಸಂತ್ರಸ್ತರಿಗೆ ಸೂಕ್ತ ರಕ್ಷಣೆ ಹಾಗೂ ಸರ್ಕಾರ ಪರಿಹಾರ ನೀಡುವುದರ ಜೊತೆಗೆ ನ್ಯಾಯವನ್ನೂ ಒದಗಿಸಬೇಕು. ಈ ಘಟನೆ ನಡೆದು ನಾಲ್ಕೈದು ದಿನಗಳಾದರೂ ಈವರೆಗೆ ಜಿಲ್ಲೆಯ ಯಾವುದೇ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಂತ್ರಸ್ತರ ಮನೆಗೆ ಭೇಟಿ ನೀಡಿ ಸಾಂತ್ವನ ತಿಳಸದೇ ಇರುವುದು ನಾಚೀಕೆಗೇಡಿನ ಸಂಗತಿ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕರ್ನಾಟಕ ಉಚ್ಚ ನ್ಯಾಯಾಲಯ ಹೆಚ್ಚುವರಿ ನ್ಯಾಯಮೂರ್ತಿಗಳ ಪ್ರಮಾಣ ವಚನ ಸ್ವೀಕಾರ
ಘಟನೆಗೆ ಸಂಬಂಧಿಸಿದಂತೆ ಈ ದಿನ.ಕಾಮ್ ಗದಗ ಎಸ್ಪಿ ಅವರನ್ನು ಸಂಪರ್ಕಿಸಿದಾಗ, “ಸಂತ್ರಸ್ತ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯವಾಗಿದ್ದಾರೆ. ಆರೋಪಿಯ ವಿರುದ್ಧ ಐಪಿಸಿ 376 ಎಬಿ ಮತ್ತು ಪೋಕ್ಸೊ ಕಾಯಿದೆ ಅಡಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಾಲಕನು ಈ ಸದ್ಯ ಬಾಲಕರ ಬಾಲ ಮಂದಿರಲ್ಲಿದ್ದಾನೆ” ಎಂದು ಪ್ರತಿಕ್ರಿಯಿಸಿದರು.
“ಪ್ರಕರಣವು ತನಿಖೆಯ ಹಂತದಲ್ಲಿದೆ. ಪೂರ್ಣ ಪ್ರಮಾಣದ ತನಿಖೆಯ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ತಿಳಿಸಿದರು.