ಬಹುಶಿಸ್ತೀಯ ವಸ್ತು ಪ್ರದರ್ಶನಗಳ ಮೂಲಕ ವಿದ್ಯಾರ್ಥಿಗಳಲ್ಲಿನ ಕ್ರೀಯಾಶೀಲತೆ, ಸೃಜನಶೀಲತೆ, ಜ್ಞಾನದ ಹರಿವು ಹೆಚ್ಚುತ್ತದೆ. ಜೊತೆಗೆ ವೀಕ್ಷಕರಿಗೆ ಪ್ರದರ್ಶನದ ವಿವರಣೆ ನೀಡುವ ಮೂಲಕ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಮತ್ತು ಸಂವಹನ ಕೌಶಲ್ಯ ಹೆಚ್ಚುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್ ವಿ ಸಂಕನೂರು ತಿಳಿಸಿದರು.
ಗದಗ ನಗರದ ಕೆಎಲ್ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜರುಗಿದ ಬಹುಶಿಸ್ತೀಯ ವಸ್ತು ಪ್ರಾತ್ಯಕ್ಷಿಕೆ ‘ದರ್ಶನ-2023’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ವಿಜ್ಞಾನಕ್ಕೆ ಸಂಬಂಧಿಸಿದಂತೆ ಈವರೆಗೆ ಅನೇಕ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗಿದೆ. ಸಮಾಜ ವಿಜ್ಞಾನ, ಭಾಷೆ, ತಂತ್ರಜ್ಞಾನಗಳ ಕುರಿತಾಗಿ ಬಹುಶಿಸ್ತೀಯ ಪ್ರಾತ್ಯಕ್ಷಿಕೆ ಏರ್ಪಡಿಸಿರುವುದು ಅತ್ಯುತ್ತಮವಾದ ಕೆಲಸ. ಇಂತಹ ಪ್ರಯೋಗವು ಬೇರೆ ಬೇರೆ ಮಹಾವಿದ್ಯಾಲಯಗಳಿಗೆ ನಿಜಕ್ಕೂ ಮಾದರಿಯಾದುದು. ಈ ಮೂಲಕ ಪುಸ್ತಕದ ಜ್ಞಾನವು ಪ್ರಾಯೋಗಿಕತೆಯ ಮೂಲಕ ವಿದ್ಯಾರ್ಥಿಗಳಿಗೆ ಹೆಚ್ಚು ಮನವರಿಕೆಯಾಗುವುದು” ಎಂದು ತಿಳಿಸಿದರು.
“ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆಯನ್ನು ಬೆಳಸುವಲ್ಲಿ, ಅವರಲ್ಲಿ ಹುದುಗಿರುವ ಸುಪ್ತ ಪ್ರತಿಭೆಯನ್ನು ಹೊರಹಾಕಲು ಇಂತಹ ವೇದಿಕೆಗಳು ಅತ್ಯುತ್ತಮವಾಗಿವೆ. ಇಂತಹ ಪ್ರದರ್ಶನಗಳು ವಿಜ್ಞಾನ್ಕಕೆ ಸೀಮಿತಗೊಳ್ಳದೇ, ಬಹುಶಿಸ್ತೀಯ ನೆಲೆಯಲ್ಲಿ ಯಶಸ್ವಿಯಾಗಿ ನಡಸಬಹುದು ಎಂಬುದಕ್ಕೆ ಕೆಎಲ್ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಉತ್ತಮ ಹಾದಿ ನಿರ್ಮಿಸಿದೆ” ಎಂದು ಎಂದು ಹೇಳಿದರು.
ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಶಂಕ್ರಣ್ಣ ಮುನವಳ್ಳಿಯವರು ಮಾತನಾಡಿ, “ಜ್ಞಾನಾರ್ಜನೆ ಮಾಡುವ ವಿದ್ಯಾರ್ಥಿಗಳ ಜ್ಞಾನವನ್ನು ಹೊರ ಹಾಕಲು ಪ್ರದರ್ಶನವು ಉತ್ತಮ ವೇದಿಕೆಯಾಗಿದ್ದು, ತಾವು ಮಾಡಿದ ವಸ್ತುವಿನ ಮಾದರಿಯನ್ನು ವಿವರಿಸುವ ಪರಿ ನಿಜವಾದ ಜ್ಞಾನದ ಅನ್ವಯಿಕತೆ. ಇಂತಹ ಅತ್ಯುತ್ತಮ ಕಾರ್ಯ ಮಾಡಿದ ಮಹಾವಿದ್ಯಾಲಯವು ಇನ್ನೂ ಹೆಚ್ಚು ಬೆಳವಣಿಗೆಯಾಗಲಿ” ಎಂದು ಹಾರೈಸಿದರು.
“ಬಹುಶಿಸ್ತೀಯ ಪ್ರಾತ್ಯಕ್ಷಿಕೆಯಲ್ಲಿ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ 54 ತಂಡಗಳು ಭಾಗವಹಿಸಿದ್ದವು. ಹಂಪಿಯ ಕಲ್ಲಿನ ರಥ, ಕುತುಬ್ ಮೀನಾರ್, ಅನುಭವ ಮಂಟಪ, ಮಹಾಭಾರತ, ನೂತನ ಸಂಸತ್ ಭವನ, ಸುಪ್ರೀಂ ಕೋರ್ಟ್ ಸೇರಿದಂತೆ ಹಿಂದಿನ ಕಾಲದಿಂದ ಪ್ರಸ್ತುತದವರೆಗಿನ ಅನೇಕ ಶಾಸನಗಳು ಇನ್ನೂ ಅನೇಕ ಪ್ರಾತ್ಯಕ್ಷಿಕೆಗಳು ನೋಡುಗರ ಗಮನ ಸೆಳೆದವು. ಅವುಗಳ ಕುರಿತಾಗಿ ವಿದ್ಯಾರ್ಥಿಗಳು ನೋಡುಗರಿಗೆ ಮಾಹಿತಿ ನೀಡಿದರು” ಎಂದು ಶ್ಲಾಘಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ |ಸಮಾಜೋಧಾರ್ಮಿಕ ಕ್ರಾಂತಿಗೈದ ಬಸವಣ್ಣ ಕರ್ನಾಟಕದ ಮಾರ್ಟಿನ್ ಲೂಥರ್
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ ಕೆ ಮಠ ಅವರು ಮಾತನಾಡಿ, ಪ್ರದರ್ಶನದ ಯಶಸ್ಸಿಗೆ ದುಡಿದ ಎಲ್ಲ ಮಹಾವಿದ್ಯಾಲಯದ ಸಿಬ್ಬಂದಿಗೆ, ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಆಡಳಿತ ಮಂಡಳಿಯ ಅಧ್ಯಕ್ಷೆ ರಜನಿ ಪಾಟೀಲ, ಸದಸ್ಯ ಮೃತ್ಯುಂಜಯ ಸಂಕೇಶ್ವರ, ಐಕ್ಯೂಎಸಿ ಸಂಚಾಲಕಿ ಡಾ. ವೀಣಾ ಹಾಗೂ ಮಹಾವಿದ್ಯಾಲಯದ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಬೇರೆ ಬೇರೆ ಮಹಾವಿದ್ಯಾಲಯಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.