“ಜಿಲ್ಲೆಯ ಅಭಿವೃದ್ಧಿಗಾಗಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಅನೇಕ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೇವೆ. ಹೋರಾಟಕ್ಕೆ ತಕ್ಕ ಪ್ರತಿಫಲ ಕೂಡ ಸಿಕ್ಕಿದೆ. ಮುಂದೆಯೂ ಕೂಡ ಗದಗ ಜಿಲ್ಲೆಯ ಅಭಿವೃದ್ಧಿಗಾಗಿ ನಮ್ಮ ಹೋರಾಟ ನಿರಂತರವಾಗಿ ಇರುತ್ತದೆ. ಇದರಲ್ಲಿ ಯಾವುದೇ ರಾಜಿ ಇಲ್ಲ” ಎಂದು ಕರವೇ ಜಿಲ್ಲಾಧ್ಯಕ್ಷ ಹನುಮಂತಪ್ಪ ಅಬ್ಬಿಗೇರಿ ಹೇಳಿದರು.
ಗದಗ ಪಟ್ಟಣದ ಖಾಸಗಿ ಹೋಟೆಲ್ ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಮಟ್ಟದ ಸಭೆಯಲ್ಲಿ ಮಾತನಾಡಿದರು.
“ಗದಗ-ಬೆಟಗೇರಿ ಅವಳಿ ನಗರದ ೩೫ ವಾರ್ಡುಗಳು ಅಭಿವೃದ್ಧಿಯಿಂದ ಹಿಂದೆ ಬಿದ್ದಿವೆ. ಉದ್ಯಾನವನ, ರಸ್ತೆ, ಚರಂಡಿ ಸೇರಿದಂತೆ ಹಲವಾರು ಕಡೆಗಳಲ್ಲಿ ಅವ್ಯವಸ್ಥೆ ತಾಂಡವಾಡುತ್ತಿದೆ. ಈ ಬಗ್ಗೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಮುಂಬರುವ ದಿನಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರಸಭೆಗೆ ಮುತ್ತಿಗೆ ಹಾಕುವ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ತಿಳಿಸುತ್ತೇವೆ” ಎಂದು ಹೇಳಿದರು.
“ಗದಗ ಜಿಲ್ಲೆಯಾಧ್ಯಂತ ಈ ಕೂಡಲೇ ಎಲ್ಲ ಬಡವರಿಗೆ ಆಶ್ರಯ ಮನೆಗಳನ್ನು ಮಂಜೂರು ಮಾಡಬೇಕು. ಹಾಗೂ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರದ ನಿಯಮಾನುಸಾರ ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಅಳವಡಿಸಬೇಕು. ಸಾರ್ವಜನಿಕವಾಗಿ ಪ್ರಕಟಿಸುವ ಜಾಹೀರಾತುಗಳನ್ನು ಕೂಡ ಕನ್ನಡದಲ್ಲಿಯೇ ಪ್ರಕಟಿಸಬೇಕು. ಇಲ್ಲದಿದ್ದರೆ ಅಂತಹ ಸಂಸ್ಥೆಗಳಿಗೂ ಮುತ್ತಿಗೆ ಹಾಕಬೇಕಾಗುತ್ತದೆ. ಗದಗ ಜಿಲ್ಲೆಗೆ ಡಿಸಿಸಿ ಬ್ಯಾಂಕ್ ಮಂಜೂರಾತಿ ಮಾಡುವ ಕುರಿತು ಹೋರಾಟದ ರೂಪರೇಶ ತಯಾರಿಸುತ್ತೇವೆ” ಎಂದು ಹೇಳಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವನಗೌಡ ಪೊಲೀಸ್ ಪಾಟೀಲ್ ಮಾತನಾಡಿ, “ಜಿಲ್ಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬಲಿಷ್ಠವಾಗಿದೆ. ಜಿಲ್ಲಾಮಟ್ಟದ ಸಭೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದು ಸಂತಸ ತಂದಿದೆ” ಎಂದು ಹೇಳಿದರು.
ರಾಜ್ಯ ಸಮಿತಿ ಸದಸ್ಯ ಹನುಮಂತಪ್ಪ ಮೇಟಿ ಮಾತನಾಡಿ, “ಉತ್ತರ ಕರ್ನಾಟಕದಲ್ಲಿ ಕರವೇ ಗದಗ ಜಿಲ್ಲಾ ಘಟಕ ಬೆಂಗಳೂರಿನಂತೆಯೇ ಸಂಘಟನೆಯಲ್ಲಿ ಶಿಸ್ತಿನಿಂದ ತೊಡಗಿದೆ. ಜಿಲ್ಲೆಯಲ್ಲಿ ಸಂಘಟನೆ ಗಟ್ಟಿಯಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ನದಿ ಜೋಡಣೆಗೆ ಎಲ್ಲ ಜನಪ್ರತಿನಿದಿನಗಳು ಒಟ್ಟುಗೂಡಿ ಒತ್ತಡ ತರೋಣ: ಸಂಸದ ಬಸವರಾಜ ಬೊಮ್ಮಾಯಿ
ಈ ವೇಳೆ ರಾಜ್ಯ ಕಾರ್ಯದರ್ಶಿ ಕರಬಸಯ್ಯ ಬಸರಿಹಳ್ಳಿಮಠ, ರಾಜ್ಯ ಸಂಚಾಲಕ ರೆಹಮಾನ್ ಹೋಳಿ, ಧಾರವಾಡ ಜಿಲ್ಲಾಧ್ಯಕ್ಷ ಸಾಗರ ಗಾಯಕವಾಡ, ಜಿಲ್ಲಾ ಪ್ರ. ಕಾರ್ಯದರ್ಶಿ ಬಸವರಾಜ ಹೊಗೆಸೊಪ್ಪಿನ, ಜಿಲ್ಲಾ ಗೌರವಾಧ್ಯಕ್ಷ ಉಮೇಶ ಮೇಟಿ, ವಿನಾಯಕ ಬದಿ, ಕುಮಾರ ರೇವಣ್ಣನವರ, ಹನಮಂತಪ್ಪ ಪೂಜಾರ, ಕೃಷ್ಣ ಲಮಾಣಿ, ಮುತ್ತಣ್ಣ ಚೌಡಣ್ಣನವರ, ಲಕ್ಷ್ಮೇಶ್ವರ ತಾಲ್ಲೂಕಾಧ್ಯಕ್ಷ ಲೋಕೆಶ್ ಸೂತಾರ, ನರಗುಂದ ತಾಲ್ಲೂಕಾಧ್ಯಕ್ಷ ನಬಿ ಕಿಲ್ಲೇದಾರ, ಶಿವು ಮಠದ, ಅಶೋಕ ಜಗಳೂರ, ರಾಮನಗೌಡ ಹಳೇಮನಿ, ಮಹಿಳಾ ಘಟಕದ ಪ್ರ ಕಾರ್ಯದರ್ಶಿ ಮಹದೇವ ದೊಡ್ಡಗೌಡ್ರ, ಜಿಲ್ಲಾ ಉಪಾಧ್ಯಕ್ಷೆ ಲಕ್ಷ್ಮೀ ಹಿತ್ತಲಮನಿ ಸೇರಿದಂತೆ ತಾಲೂಕ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.