ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ಬೇಸಿಗೆ ಆರಂಭದ ಹಿನ್ನೆಲೆಯಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ. ಕಳೆದ 15 ದಿನಗಳಿಂದ ಕುಡಿಯುವ ನೀರಿಲ್ಲದೆ ಗ್ರಾಮಸ್ಥರು ಸಿಟ್ಟಿಗೆದ್ದು, ಗ್ರಾಮಸ್ಥರು ಗ್ರಾಮ ಪಂಚಾಯತಿಗೆ ಬಿಂದಿಗೆ ಹಿಡಿದು ಮತ್ತಿಗೆ ಹಾಕಿದ ಘಟನೆ ನಡೆಯಿತು.
“ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನ ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿ ಆಡಳಿತ ಎದ್ದು ಕಾಣುತ್ತಿದೆ. ಜನರ ಗೋಳು ಕೇಳುವವರು ಇಲ್ಲದಂತಾಗಿದೆ. ಅಧಿಕಾರಿಗಳು ಹಾಗೂ ಪ್ರತಿನಿಧಿಗಳು ಜನರ ಜೀವನದ ಜತೆಗೆ ಚೆಲ್ಲಾಟ ಆಡುತ್ತಿದ್ದಾರೆ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
5ನೇ ವಾರ್ಡಿನ ನಿವಾಸಿ ಕುಬೇರಪ್ಪ ಕೊಡಗಾನೂರ ಮಾತನಾಡಿ, “ನಮ್ಮ ವಾರ್ಡಿನಲ್ಲಿ ಕಳೆದ ಆರು ತಿಂಗಳಿಂದ ಕುಡಿಯುವ ನೀರಿಗಾಗಿ ಕಠಿಣ ಪರಿಸ್ಥಿತಿ ನಿರ್ಮಾಣವಾಗಿದೆ. ಚರಂಡಿ ಸ್ವಚ್ಛತೆ ಇಲ್ಲದೆ ಅನಾರೋಗ್ಯದಿಂದ ಸೋತು ಬೆಂದು ಹೋಗುವಂತ ಜೀವನ ನಮ್ಮದಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಕೂಡಾ ಉಡಾಫೆ ಉತ್ತರ ನೀಡುತ್ತಾ ಬಂದಿದ್ದು, ನಮ್ಮ ಕಾಲೋನಿಯ ಮುಖ್ಯ ರಸ್ತೆ ಬದಿ ಪೈಪ್ ಸೋರಿಕೆಯ ಗುಂಡಿ ತೆಗೆದು 15 ದಿನವಾದರೂ ಆ ಗುಂಡಿ ಪೈಪ್ ಕೂಡ ಸರಿ ಹೋಗುತ್ತಿಲ್ಲ. ಗುಂಡಿ ಮುಚ್ಚದೇ ಇರುವುದರಿಂದ ಆ ಗುಂಡಿಯಲ್ಲಿ ವೃದ್ಧರು ಹಾಗೂ ಚಿಕ್ಕಮಕ್ಕಳು ಬೀಳುವ ಆತಂಕದಲ್ಲಿದ್ದಾರೆ. ನೀರಿನ ಸಮಸ್ಯೆ ಬಗೆಹರಿಸುವವರೆಗೂ ತೀವ್ರ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.
“ಗ್ರಾಮದಲ್ಲಿ ಚುನಾಯಿತ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ತಿಳಿಸಿದರೂ ಕೂಡಾ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಗ್ರಾಮದ ಜನರಿಗೆ ಕುಡಿಯುವ ನೀರಿಲ್ಲ. ಅವರು ಯಾವ ಕೆಲಸ ಮಾಡಿ ಊರು ಉದ್ದಾರ ಮಾಡುತ್ತಾರೋ? ಅವರಿಗೆ ಗೊತ್ತು” ಎಂದು ನೊಂದ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರಿಗೆ ಹಿಡಿ ಶಾಪ ಹಾಕಿ ಪ್ರತಿಭಟಿಸುತ್ತಿದ್ದಾರೆ.

ಪಂಚಾಯಿತಿ ಎದುರು ಪ್ರತಿಭಟನೆ ಮಾಡುವ ಮೂಲಕ ʼನೀರು ಬಿಡಿ, ನೀರು ಬಿಡಿʼ ಎಂದು ಘೋಷಣೆ ಕೂಗಿದರು.
ಪ್ರತಿಭಟನೆ ವೇಳೆ ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್ ಎಸ್ ರಿತ್ತಿ ಅವರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿ ತೀವ್ರ ತರಾಟೆಗೆ ತೆಗೆದುಕೊಂಡರು. “ನಿಮಗೆ ಅಭಿವೃದ್ಧಿ ಮಾಡಲು ಆಗದಿದ್ದರೆ ರಾಜೀನಾಮೆ ಕೊಡಿ, ಬೇಜವಾಬ್ದಾರಿತನದ ಆಡಳಿತದಿಂದ ಜನರ ಜೀವನದಲ್ಲಿ ಚೆಲ್ಲಾಟವಾಡಬೇಡಿ” ಎಂದು ತರಾಟೆಗೆ ತೆಗೆದುಕೊಂಡು
ಮೌಲುಸಾಬ ನದಾಫ್ ಮಾತನಾಡಿ, ಇತ್ತೀಚೆಗೆ ಮಾಡಿದ ಜಲಜೀವನ್ ಮಷಿನ್ ಕಾಮಗಾರಿ ಕಳಪೆ ಮಟ್ಟದ ಕಾಮಗಾರಿಯಾಗಿ ಕಂಡುಬರುತ್ತಿದೆ. ಆ ಯೋಜನೆಯೂ ಕೂಡ ಗ್ರಾಮಕ್ಕೆ ನಿರಾಸೆಯುಂಟು ಮಾಡಿದೆ. ಸಂಪೂರ್ಣವಾಗಿ ಹೇಳಬೇಕೆಂದರೆ ನಮ್ಮ ಗ್ರಾಮದಲ್ಲಿ ದುರ್ಬಿನ್ ಹಾಕಿ ನೋಡಿದರೂ ನಮ್ಮ ಗ್ರಾಮದಲ್ಲಿ ಅಭಿವೃದ್ಧಿ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಗ್ರಾಮದ ಸಮಸ್ಯೆಗಾಗಿ ಸಾರ್ವಜನಿಕರು ಪಂಚಾಯಿತಿ ಅಧ್ಯಕ್ಷೆ ಗಂಗವ್ವ ಜಂಗಣ್ಣವರ ಹಾಗೂ ಸದಸ್ಯರಿಗೆ ದೂರವಾಹಿನಿ ಮೂಲಕ ಕರೆ ಮಾಡಿದರೆ ಮದುವೆ ಮುಂಜಿ ಹಬ್ಬಗಳಿಗೆ ಬಂದಿದ್ದೇನೆಂದು ಉಡಾಫೆ ಉತ್ತರ ನೀಡುತ್ತಾರೆ. ಅಭಿವೃದ್ಧಿ ಮಾಡುವಂತಹ ಜನಪ್ರತಿನಿಧಿಗಳು ಗ್ರಾಮದ ಅಭಿವೃದ್ಧಿ ಕಡೆ ಗಮನ ಕೊಡದೆ ತಮ್ಮ-ತಮ್ಮ ಮನೆ ಮತ್ತು ವ್ಯಯಕ್ತಿಕ ಅಭಿವೃದ್ಧಿ ಕಡೆ ಗಮನ ಇದೆಯೇ ವಿನಹ ಗ್ರಾಮದ ಅಭಿವೃದ್ಧಿ ಕಡೆ ಗಮನವಿಲ್ಲವೆಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದು, ಈ ಬೇಜವಾಬ್ದಾರಿ ಆಡಳಿತವನ್ನು ಗಮನಿಸಿ ಚುನಾವಣೆ ಆಯೋಗವು ಮರುಚುನಾವಣೆ ಮಾಡಬೇಕು” ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
“ಜಕ್ಕಲಿ ಗ್ರಾಮದ ಸಮಸ್ಯೆಯನ್ನು ನಾಲ್ಕೈದು ಬಾರಿ ಪತ್ರಿಕಾ ಮಾಧ್ಯಮಗಳಲ್ಲಿ ಪ್ರಕಟ ಮಾಡಿದರೂ ಕೂಡಾ ಸಂಬಂಧಪಟ್ಟ ಅಧಿಕಾರಿ ಇತ್ತೀಚೆಗೆ ವರ್ಗಾವಣೆಯಾದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರವಿ ಎ ಎನ್ ಹಾಗೂ ಈಗಿರುವ ಅಧಿಕಾರಿ ಶ್ಯಾಮಸುಂದರ್ ಇನಾಮದಾರ ಹಾಗೂ ಜಿಲ್ಲಾ ಪಂಚಾಯಿತಿ ಸಿಒ ಅವರ ಗಮನಕ್ಕೆ ತಂದರೂ ಕೂಡಾ ಕ್ಯಾರೇ ಎನ್ನುತ್ತಿಲ್ಲ. ಜಕ್ಕಲಿ ಗ್ರಾಮದ ಸುವ್ಯವಸ್ಥೆ ಇನ್ನು ಯಾವಮಟ್ಟಕ್ಕೆ ಹೋಗುವುದೋ ಎಂದು ಕುತೂಹಲ ಉಂಟುಮಾಡಿದೆ” ಎಂದು ಕಳವಳ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಗ್ಯಾರಂಟಿ ಯೋಜನೆ ಟೀಕಿಸುವ ಬಿಜೆಯವರಿಗೆ ಜನರ ಕಷ್ಟಗಳ ಅರಿವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ
ಫಾತೀಮಾ ಬಾಲೇಸಾಬನವರ, ಬಸವ್ವ ಕೊಡಗಾನೂರ, ಸಜನಾ ಜಕ್ಕಲಿ, ಯಲ್ಲಮ್ಮ ಡಂಬಳ, ಮಾಬಮ್ಮ ಕಳಕಾಪೂರ, ಮಮತಮ್ಮ ಬಾಲೇಸಾಬನವರ, ಖಾಶಿಂಬಿ ಜಾಲಿಹಾಳ, ದಾವಲಮ್ಮ ಗಡಾದ, ಮಮ್ಮ ಸಲೀಂ ಜಕ್ಕಲಿ, ಕುಬೇರಪ್ಪ ಕೊಡಗಾನೂರ, ಇಸ್ಮಾಯಿಲ್ ಗಡಾದ, ಹನುಮಂತ ಕೊಡಗಾನೂರ, ಮೌಲುಸಾಬ ನದಾಫ್, ಆನಂದ ಬಾರಕೇರ, ಯಲ್ಲಪ್ಪ ಮುಕಣ್ಣವರ, ಯಮನೂರ ಮಾದರ, ಯಲ್ಲಪ್ಪ ಬಾರಕೇರ, ರಾಜಾಸಾಬ್ ನಮಾಜಿ, ಬಾಬು ಯಲಬುರ್ಗಿ ಸೇರಿದಂತೆ ಇತರರು ಇದ್ದರು.
