ಕರ್ನಾಟಕ ರಾಜ್ಯದ 15ನೇ ಮುಂಗಡ ಪತ್ರವನ್ನು ಮಂಡಿಸಿರುವ ಸಿದ್ದರಾಮಯ್ಯನವರು ಕರ್ನಾಟಕ ಮಾದರಿ ಅಭಿವೃದ್ಧಿಯ ಹೊಸ ದೃಷ್ಠಾಂತವನ್ನು ರೂಪಿಸಿ, ಪುರೋಗಾಮಿ ಮುಂಗಡ ಪತ್ರವನ್ನು ರಾಜ್ಯಕ್ಕೆ ನೀಡಿ ಗುಣಾತ್ಮಕ ಬದಲಾವಣೆಯ ಪರ್ವವನ್ನು ಪ್ರಾರಂಭಿಸಿದ್ದಾರೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ ಹೇಳಿದ್ದಾರೆ.
ರಾಜ್ಯದ 1.2ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲಕ್ಕೇತ್ತಿ ಕೆಳ ಮಧ್ಯಮ ವರ್ಗ ಮತ್ತು ಮಧ್ಯಮ ವರ್ಗದ ಮಟ್ಟಕ್ಕೆ ತಂದು ನಿಲ್ಲಿಸಿ, ಸರ್ವೋದಯ ಸಮಾಜದ ಕಲ್ಪನೆಯನ್ನು ಯಥಾವತ್ತಾಗಿ ನೈಜ ರೂಪದಲ್ಲಿ ಅನುಷ್ಠಾನಗೊಳಿಸುವ ಗ್ಯಾರಂಟಿ ಯೋಜನೆಗಳು ಫಲ ನೀಡಲಾರಂಭಿಸಿದ್ದು, ಶ್ಲಾಘನೀಯ ಬೆಳವಣಿಗೆಯಾಗಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳು ಪ್ರಶಂಸೆಗೆ ಪಾತ್ರವಾಗಿರುವುದರಿಂದ ದಕ್ಷ ಮತ್ತು ಸಂಕಲ್ಪ ಶಕ್ತಿಯುಳ್ಳ ಕರ್ನಾಟಕ ಸರ್ಕಾರದ ಪ್ರಯತ್ನಗಳು ಕೈಗೂಡಿವೆ. ವಿರೋಧ ಪಕ್ಷಗಳ ಟೀಕೆಗೆ ಸರ್ಕಾರದ ಗ್ಯಾರಂಟಿಗಳ ಪರಿಣಾಮಕಾರಿ ಅನುಷ್ಠಾನವೇ ಗ್ಯಾರಂಟಿಯಾಗಿದೆ.
ಮುಂಗಡ ಪತ್ರದಲ್ಲಿ ಎಲ್ಲಾ ವರ್ಗಗಳ, ಎಲ್ಲಾ ವಲಯಗಳ, ಎಲ್ಲಾ ಭೌಗೋಳಿಕ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಯನ್ನು ಪ್ರತಿಪಾದಿಸುವ ಪರಿಣಾಮಕಾರಿ ಅರ್ಥವ್ಯವಸ್ಥೆಯನ್ನು ಅನಾವರಣಗೊಳಿಸಲಾಗಿದೆ.
ಗದಗ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೂ.10.00 ಕೋಟಿಗಳ ವೆಚ್ಚದ ಶೀತಲ ಗೃಹ ನಿರ್ಮಾಣ ಮಾಡುವ ಮೂಲಕ ಹಣ್ಣು-ತರಕಾರಿ ಮಾರುಕಟ್ಟೆಗೆ ದೊಡ್ಡ ಬೆಂಬಲ ದೊರಕಲಿದೆ.
ಗದಗ ಜಿಲ್ಲೆಯ ಜಾಲವಾಡಗಿ ಏತ ನೀರಾವರಿಯನ್ನು ರೂ.7.28 ಕೋಟಿಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲು, ಶಿರಹಟ್ಟಿ ತಾಲ್ಲೂಕು ಆಸ್ಪತ್ರೆಯನ್ನು ಮೇಲ್ದರ್ಜೇಗೇರಿಸಲು, ಗದಗ ಜಿಲ್ಲೆಯಲ್ಲಿ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ, ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ರೂ.10.00 ಕೋಟಿಗಳ ವೆಚ್ಚದಲ್ಲಿ ಕ್ಯಾತಲ್ಯಾಬ್ ಸೌಲಭ್ಯದೊಂದಿಗೆ ʼಸೂಪರ್ ಸ್ಪೇಷಾಲಿಟಿ ಕಾರ್ಡಿಯಾಕ್ ಯೂನಿಟ್ʼ ಸ್ಥಾಪಿಸುವ ನಿರ್ಣಯ, ಗದಗದಲ್ಲಿ 450 ಹಾಸಿಗೆಯ ಆಸ್ಪತ್ರೆಗೆ ವೈದ್ಯಕೀಯ ಉಪಕರಣ ಮತ್ತು ಪೀಠೋಪಕರಣ ಖರೀದಿಗೆ ಹಣ ಒದಗಿಸಿರುವುದು, ಗದಗದಲ್ಲಿ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲು ನಿರ್ಣಯಿಸಲಾಗಿರುವುದ.
ಗದಗ ಜಿಲ್ಲೆಯ ಕಪ್ಪತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮ ಉತ್ತೇಜಿಸಿರುವುದು, ಗದಗ ಜಿಲ್ಲೆಯ ರೋಣದಲ್ಲಿ ನಬಾರ್ಡ್ ಸಹಯೋಗದೊಂದಿಗೆ ಹೊಸ ಜಿ.ಟಿ.ಟಿ.ಸಿ ಪ್ರಾರಂಭಿಸುವ ಮೂಲಕ, ರೋಣದ ಮಲ್ಲಾಪುರ ರೈಲ್ವೆ ಮೇಲುಸೇತುವೆ ಕಾಮಗಾರಿ ಘೋಷಿಸಿರುವುದು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಹತ್ವದ ಮತ್ತು ಪರಿಣಾಮಕಾರಿಯಾದ ಅಭಿವೃದ್ಧಿಯ ಶಕೆಯನ್ನು ಪುನರಾರಂಭಿಸುವ ದಿಕ್ಸೂಚಿಯಾಗಿವೆ. ಅತ್ಯಂತ ಅಭಿವೃದ್ಧಿ ಪರ ಮುಂಗಡ ಪತ್ರವನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಎಂದಿದ್ದಾರೆ.