ರಾಜ್ಯದಲ್ಲಿ ಇತ್ತೀಚೆಗಷ್ಟೇ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಫಲಿತಾಂಶಗಳು ಪ್ರಕಟಗೊಂಡಿದ್ದು, ಫಲಿತಾಂಶ ಪ್ರಮಾಣದಲ್ಲಿ ಕಳೆದ ವರ್ಷಕ್ಕಿಂತ ತೀರಾ ಇಳಿಕೆ ಕಂಡುಬಂದಿದೆ. ಅದರಲ್ಲೂ ಹೆಚ್ಚಾಗಿ ಸರ್ಕಾರಿ ಶಾಲಾ ಕಾಲೇಜುಗಳ ಫಲಿತಾಂಶ ನೆಲಕಚ್ಚಿದಂತಾಗಿದೆ. ಇದಕ್ಕೆ ಹಲವು ಕಾರಣ, ಕೊರತೆಗಳಿರುಬಹುದು. ಆದರೆ, ಎಲ್ಲಾ ಕೊರತೆಗಳನ್ನು ಮೆಟ್ಟಿ ನಿಂತ ಹಾಸನದ ಸರ್ಕಾರಿ ಶಾಲೆಯೊಂದ ಸತತ 8 ವರ್ಷಗಳಿಂದ ನೂರಕ್ಕೆ ನೂರರಷ್ಟು ಫಲಿತಾಂಶ ನೀಡಿ ರಾಜ್ಯಕ್ಕೇ ಮಾದರಿಯಾಗಿದೆ.
ಹೌದು, ಹಾಸನ ತಾಲೂಕಿನ ಅಟ್ಟಾವರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಸತತ ಎಂಟು ವರ್ಷಗಳಿಂದ ನೂರಕ್ಕೆ ನೂರರಷ್ಟು ಫಲಿತಾಂಶ ನೀಡುತ್ತಲೇ ಬಂದಿದ್ದು, ಕೊರತೆಗಳ ಕೆಸರಿನಲ್ಲಿ ಅರಳಿದ ಕಮಲದಂತೆ ಬೆಳೆಯುತ್ತಿದೆ. ಸರ್ಕಾರಿ ಶಾಲೆಯೊಂದರ ಈ ಮಟ್ಟದ ಯಶಸ್ಸಿನ ನಿರಂತರತೆಯು ತೀರಾ ಪ್ರಶಂಸನೀಯವಾದದ್ದು. ಅನಿವಾರ್ಯವಾಗಿ ಖಾಸಗಿ ಶಾಲೆಗಳತ್ತ ಮುಖಮಾಡಿದ್ದ ಮಧ್ಯಮ ವರ್ಗದ ಪೋಷಕರನ್ನ ಮತ್ತೆ ಸರ್ಕಾರಿ ಶಾಲೆಗಳತ್ತ ತಿರುಗುವಂತೆ ಮಾಡಿರುವುದು ಸುಳ್ಳಲ್ಲ.

ಮೂಲಭೂತ ಸೌಲಭ್ಯಗಳಿಲ್ಲದೇ ಸೊರಗುತ್ತಿರುವ ಸರ್ಕಾರಿ ಶಾಲೆಗಳ ಮಧ್ಯೆ, ಕೊರತೆಗಳನ್ನೆಲ್ಲ ಮೆಟ್ಟಿ ಸದಾ ಯಶಸ್ಸಿನತ್ತ ಚಿತ್ತ ನೆಟ್ಟಿರುವ ಈ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದ ಪರಿಶ್ರಮ ಪ್ರಶಂಸಾರ್ಹ.
ಶಾಲೆಯಿಂದ 2017-18ರ ಶೈಕ್ಷಣಿಕ ವರ್ಷದಿಂದ ಇಲ್ಲಿಯವರೆಗೆ ಎಸ್ ಎಸ್ ಎಲ್ ಸಿಯಲ್ಲಿ ಒಟ್ಟು 210 ವಿದ್ಯಾರ್ಥಿಗಳು ಯಶಸ್ವಿಯಾಗಿ ತೇರ್ಗಡೆಯಾಗಿದ್ದರು. ಪ್ರಸಕ್ತ ಸಾಲಿನಲ್ಲಿ 11 ವಿದ್ಯಾರ್ಥಿಗಳು ಹಾಗೂ 14 ವಿದ್ಯಾರ್ಥಿನಿಯರ ಸಹಿತ ಒಟ್ಟು 25 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 7 ಡಿಸ್ಟಿಂಕ್ಷನ್, 14 ಫಸ್ಟ್ ಕ್ಲಾಸ್ ಸಹಿತ ಎಲ್ಲರೂ ಪಾಸಾಗಿ ನೂರಕ್ಕೆ ನೂರರಷ್ಟು ಫಲಿತಾಂಶ ದಾಖಲಿಸಿದೆ. 625ಕ್ಕೆ 599 ಅಂಕ ಪಡೆದ ಲಕ್ಷೀ ಈ ವರ್ಷದ ಶಾಲಾ ಟಾಪರ್ ಆಗಿದ್ದಾರೆ.
ಎಂಟು ವರ್ಷಗಳ ಹಿಂದೆ ಶಿಕ್ಷಕ ವೃಂದ ಆರಂಭಿಸಿದ ಹೆಚ್ಚುವರಿ ಪಠ್ಯ ಚಟುವಟಿಕೆಗಳಿಂದಾಗಿ ಶಾಲೆಯು ಉತ್ತಮ ಶೇಕಡಾವಾರು ಉತ್ತೀರ್ಣತೆಯನ್ನು ಕಾಯ್ದುಕೊಳ್ಳುತ್ತಿದೆ. ಪ್ರಸ್ತುತ ಅರಕಲಗೂಡು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿರುವ ಕೆ. ಪಿ ನಾರಾಯಣ್ ಆಗ ಮುಖ್ಯೋಪಾಧ್ಯಾಯರಾಗಿದ್ದರು. ಇವರಿಂದ ಆರಂಭಗೊಂಡ ಈ ಪ್ರಗತಿ ಈಗಲೂ ಮುಂದುವರೆದಿದೆ.

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಅದರಲ್ಲೂ ಸರ್ಕಾರಿ ಶಾಲಾ ಮಕ್ಕಳಿಗೆ ಇಂಗ್ಲಿಷ್, ಹಿಂದಿ ಮತ್ತು ಗಣಿತ ಕಬ್ಬಿಣದ ಕಡಲೆಯಂತಾಗಿರುತ್ತವೆ. ಅಂತಹ ವಿಷಯಗಳ ಬಗ್ಗೆ ಹೆಚ್ಚಿನ ಓತ್ತು ಕೊಟ್ಟು, ಪ್ರತಿ ವಿದ್ಯಾರ್ಥಿಯತ್ತ ಗಮನ ಹರಿಸಲಾಗುತ್ತಿದ್ದು, ಘಟಕ ಪರೀಕ್ಷೆ, ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ಸೇರಿದಂತೆ ಹಲವಾರು ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಸರಳವಾಗಿ ವಿಷಯ ಅರ್ಥೈಸುವ ಕಾರ್ಯ ಮಾಡಲಾಗುತ್ತದೆ.
ಅರಕಲಗೂಡು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ. ನಾರಾಯಣ ಮಾತನಾಡಿ, “ನಾನು ಆ ಶಾಲೆಯ ಮುಖ್ಯಶಿಕ್ಷಕನಾಗಿ ಹೋದಾಗ ವಿದ್ಯಾರ್ಥಿಗಳಿಗೆ ಕಠಿಣ ಎನಿಸುವ ವಿಷಯಗಳ ಬಗ್ಗೆ ಹೆಚ್ಚಿನ ಗಮನಹರಿಸಲಾಯಿತು. ಘಟಕ ಪರೀಕ್ಷೆ, ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ, ಪಾಲಕರ ಸಭೆ, ನಿಧಾನ ಕಲಿಕೆಯ ವಿದ್ಯಾರ್ಥಿಗಳತ್ತ ಹೆಚ್ಚಿನ ಗಮನ, ಗುಂಪು ಬೋಧನೆ, ರಜಾ ದಿನಗಳಲ್ಲೂ ವಿಶೇಷ ತರಗತಿ, ರಾತ್ರಿ ತರಗತಿಗಳು, ಘಟಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದವರಿಗೆ ಪ್ರಶಸ್ತಿ ಸೇರಿದಂತೆ ಹಲವಾರು ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಸರಳವಾಗಿ ವಿಷಯ ಅರ್ಥೈಸುವ ಕಾರ್ಯ ಮಾಡಲಾಯಿತು. ಹೀಗಾಗಿ ಈ ಫಲಿತಾಂಶ ಪಡೆಯಲು ಸಾಧ್ಯವಾಗಿದೆ. ಇದು ಹೀಗೇ ಮುಂದುವರೆಯಲು ಕ್ರಮ ವಹಿಸಲಾಗುವುದು” ಎಂದರು.
“ಈ ವರ್ಷವೂ ಶೇ.100 ಫಲಿತಾಂಶ ತಂದು ಕೊಟ್ಟಿರುವುದು ಸಂತಸದ ವಿಷಯ. ಇದಕ್ಕೆ ಎಲ್ಲಾ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಶ್ರಮವಿದೆ. ಘಟಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಬಹುಮಾನ ನೀಡಿದ್ದು, ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಹುಮ್ಮಸ್ಸು ತುಂಬಿತ್ತು. ಅಂತಹ ಪ್ರಯತ್ನಗಳು ಒಂದು ಒಳ್ಳೆಯ ಫಲಿತಾಂಶವನ್ನು ನೀಡಿತು ಎಂದು ಮುಖ್ಯೋಪಾಧ್ಯಯ ಹೆಚ್ ಪಿ ರಾಜಶೇಖರ್ ತಿಳಿಸಿದ್ದು, ಸರ್ಕಾರಿ ಶಾಲೆಗಳಿಗೆ ಪೋಷಕರು ಧೈರ್ಯವಾಗಿ ತಮ್ಮ ಮಕ್ಕಳನ್ನು ದಾಖಲಿಸಬಹುದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರವರು.

“ಶೇ.100 ಫಲಿತಾಂಶ ಪಡೆಯಲು ಕೆಲ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಈ ಎಲ್ಲ ಹಂತಗಳನ್ನು ನಾವು ಈಗಲೂ ಮುಂದುವರಿಸಿದ್ದೇವೆ. ಅದೇ ಹಿಂದಿನ ಫಲಿತಾಂಶವನ್ನು ಉಳಿಸಿಕೊಳ್ಳುವಲ್ಲಿ ನಮಗೆ ಸಹಾಯ ಮಾಡಿದೆ. ಮುಖ್ಯಶಿಕ್ಷಕ ರಾಜಶೇಖರ್ ಮತ್ತು ಇತರ ಸಿಬ್ಬಂದಿ, ಸದಸ್ಯರು ಪ್ರಸ್ತುತ ಫಲಿತಾಂಶಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ” ಎನ್ನುತ್ತಾರೆ ಶಾಲಾ ಇಂಗ್ಲಿಷ್ ಶಿಕ್ಷಕ ಜಿ ಎಂ ಪ್ರಕಾಶ್.
ಪ್ರಮುಖವಾಗಿ ಈ ಶಾಲೆಯಲ್ಲಿ ‘ತಿಂಗಳ ಗುರಿ 5’ ಎಂಬ ಯೋಜನೆ ರೂಪಿಸಲಾಗಿದೆ. ಅಂದರೆ ಪ್ರತಿ ಪಾಠದಲ್ಲಿ ಬರುವಂತಹ ಪ್ರಮುಖ ಪ್ರಶ್ನೆಗಳನ್ನು ಶಿಕ್ಷಕರಿಂದ ಸಿದ್ಧಪಡಿಸುವುದು. ಆ ಪ್ರಶ್ನೆಗಳನ್ನು ಮಕ್ಕಳಿಗೆ ಟೆಸ್ಟ್ ರೀತಿ ಬರೆಸುವುದು. ಅದಕ್ಕೆ ಪ್ರತಿ ಮಕ್ಕಳು ಐದು ಅಂಕಗಳನ್ನು ಪಡೆಯುವ ಸವಾಲನ್ನು ಅವರ ಮುಂದೆ ಇರಿಸಲಾಗಿತ್ತು. ಒಂಬತ್ತು ತಿಂಗಳ ಅವಧಿಯಲ್ಲಿ ಪ್ರತಿ ಮಕ್ಕಳು 45 ಅಂಕಗಳನ್ನು ಪಡೆಯುವಷ್ಟು ತಯಾರಿ ಮಾಡಲಾಗುತ್ತಿತ್ತು. ಹೀಗಾಗಿ ಒಬ್ಬ ವಿದ್ಯಾರ್ಥಿ ಕೂಡ ಅನುತ್ತೀರ್ಣನಾಗಲು ಸಾಧ್ಯವೇ ಇಲ್ಲ. ಇನ್ನು ಪ್ರತಿಭಾವಂತರು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಅಂಕಗಳನ್ನು ಪಡೆಯಬಹುದಾಗಿತ್ತು.
ಇದನ್ನೂ ಓದಿ: ಹಾಸನ | ಗುಡುಗು ಸಹಿತ ಮಳೆ; ಇನ್ನೂ ನಾಲ್ಕೈದು ದಿನ ಮಳೆ ಬರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ
“ಪ್ರತಿ ವಿದ್ಯಾರ್ಥಿಯ ಫಲಿತಾಂಶದಲ್ಲೂ ಶಿಕ್ಷಕರು ಪ್ರಮುಖ ಪಾತ್ರ ವಹಿಸಿದ್ದಾರೆ. ಕೆಲವೊಮ್ಮೆ ಪರಿಕಲ್ಪನೆಗಳು ಸರಿಯಾಗಿ ಅರ್ಥವಾಗಲೆಂದು ಕಿರು ಪರೀಕ್ಷೆ ನಡೆಸಿ, ಕಠಿಣ ವಿಷಯಗಳತ್ತ ಹೆಚ್ಚಿನ ಗಮನ ಹರಿಸಲು ಸಹಕಾರಿಯಾಗುವಂತೆ ನಮ್ಮನ್ನು ತಯಾರು ಮಾಡುತ್ತಿದ್ದರು. ಇದು ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಲು ಮುಖ್ಯ ಕಾರಣ” ಎಂದರು ಶಾಲೆಯ ಟಾಪರ್ ಲಕ್ಷ್ಮೀ.

ಕಟ್ಟಡದ ಕೊರತೆ, ಶಿಕ್ಷಕ ಸಿಬ್ಬಂದಿ ಕೊರತೆ, ಮೂಲ ಸೌಕರ್ಯ ವಂಚಿತ ಎಂದೆಲ್ಲ ದೂಷಿಸಿ, ಸರ್ಕಾರಿ ಶಾಲೆಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ಮುಖಮಾಡಿ ವರ್ಷದ ಶುಲ್ಕ ಕಟ್ಟಲು ಪರದಾಡಿ ಕೊನೆಗೆ ಮಕ್ಕಳನ್ನು ಓದಿನಿಂದ ವಂಚಿತರನ್ನಾಗಿಸುವ ಮಧ್ಯಮ ವರ್ಗದ ಜನರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಿ, ಉಚಿತ ಶಿಕ್ಷಣದ ಸದುಪಯೋಗ ಪಡೆದುಕೊಳ್ಳಬೇಕಿದೆ. ಶಿಕ್ಷಣವೆಂಬುದು ಮಾನವನ ಬದುಕಿನ ಮೂಲ ಅವಶ್ಯಕತೆಗಳಲ್ಲೊಂದಾಗಿ ಬೆಳೆದಿದ್ದು, ಸಾಮಾನ್ಯ ವರ್ಗದ ಮಕ್ಕಳಿಗೆ ಶಿಕ್ಷಣದ ಮಹತ್ವ ತಿಳಿಸಿ, ಅವರಿಗೆ ಶಿಕ್ಷಣ ಹಂಚಿ, ಸದೃಢ ಭಾರತ ನಿರ್ಮಾಣ ಮಾಡುವಲ್ಲಿ ಸರ್ಕಾರಿ ಶಾಲೆಗಳ ಪಾತ್ರ ಅಮೋಘವಾದಂತದ್ದಾಗಿದೆ.
ವರದಿ: ವರ್ಷಿತ ಎಂ. ನಾಗರಾಜ್
ಹಾಸನ
