ಗುಲಬರ್ಗಾ ವಿಶ್ವವಿದ್ಯಾಲಯದ ಉನ್ನತ ಶಿಕ್ಷಣ ಗುಣಮಟ್ಟ ಹೆಚ್ಚಿಸುವುದು ಹಾಗೂ ಮೂಲ ಸೌಕರ್ಯಗಳಿಂದ ಬಳಲುತ್ತಿರುವ ಬೋಧಕ ಸಿಬ್ಬಂದಿಯ ಕೊರತೆಯ ಬಗ್ಗೆ ಗಮನ ಹರಿಸದೇ ವಿಶ್ವವಿದ್ಯಾಲಯಕ್ಕೆ ಸೇರಿದ 250 ಎಕರೆ ಜಮೀನು ಲಪಟಾಯಿಸಲು ಹೊಂಚು ಹಾಕುತ್ತಿರುವ ಸರಕಾರದ ಕ್ರಮವನ್ನು ದಲಿತ ಸಂಘರ್ಷ ಸಮಿತಿ ಉಗ್ರವಾಗಿ ಖಂಡಿಸುತ್ತದೆ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ಹೇಳಿದರು.
ಕಲಬುರಗಿ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ʼಸ್ಪೋರ್ಟ್ ಸಿಟಿ, ಸ್ಪೋರ್ಟ್ ಹಬ್ ಮತ್ತು ಇತರೆ ಸರ್ಕಾರದ ಕಟ್ಟಡಗಳಿಗೆ ಸುಮಾರು 70 ಎಕರೆ ಜಮೀನು ಕೊಡಲು ವಿಶ್ವವಿದ್ಯಾಲಯ ಆಡಳಿತ ಮಂಡಳಿಗೆ ಸರ್ಕಾರದ ಹಿರಿಯ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆʼ ಎಂದು ಆರೋಪಿಸಿದರು.
ʼಜಿಲ್ಲೆಯ ಕೆಲವು ಪ್ರಭಾವಿ ವ್ಯಕ್ತಿಗಳು, ಜನಪ್ರತಿನಿಧಿಗಳು ಮತ್ತು ಸಿಂಡಿಕೇಟ್ ಸದಸ್ಯರು ಕೂಡಾ ವಿಶ್ವವಿದ್ಯಾಲಯ ಜಮೀನು ಎನ್ಒಸಿಗೆ ಒತ್ತಾಯಿಸುತ್ತಿರುವುದು ತೀರಾ ನಾಚಿಗೇಡಿ ವಿಷಯ. ವಿಶ್ವವಿದ್ಯಾಲಯದ ಶಿಕ್ಷಣದ ಗುಣಮಟ್ಟ ಮತ್ತು ಅಭಿವೃದ್ಧಿ ಪರವಾಗಿರಬೇಕು ಹೊರತಾಗಿ ವಿಶ್ವವಿದ್ಯಾಲಯದ ಆಸ್ತಿಗೆ ಕನ್ನ ಹಾಕುವ ಕೆಲಸ ಸಿಂಡಿಕೇಟ್ ಸದಸ್ಯರು ಮಾಡಬಾರದುʼ ಎಂದು ಮನವಿ ಮಾಡಿದರು.
ʼವಿಶ್ವವಿದ್ಯಾಲಯದ 800 ಎಕರೆ ಜಮೀನಿನಲ್ಲಿ ಈಗಾಗಲೇ 50 ಎಕರೆ ಇಎಸ್ಐ ಆಸ್ಪತ್ರೆಗೆ, ಪಂಡಿತ ದಿನದಯಾಳ ಉಪಾಧ್ಯಾಯ ವಸತಿ ನಿಲಯ ಹಾಗೂ ಜೆಟಿಟಿಸಿಯ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ 20 ಎಕರೆ ಜಮೀನು ನೀಡಲಾಗಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನಕ್ಕೆ 70 ಎಕರೆ, ಸ್ಫೋರ್ಟಸಿಟಿ ಮತ್ತು ಸ್ಫೋರ್ಟಹಬೆಗೆ 50 ಎಕರೆ, ಕಲ್ಯಾಣ ಕರ್ನಾಟಕ ಮಾನವ ಅಭಿವೃದ್ಧಿ ಮಂಡಳಿ ಕೃಷಿ, ಸಾಂಸ್ಕೃತಿಕ ಸಂಘ ಹಾಗೂ ಇಂಜಿನೀಯರ್ ಕಾಲೇಜಿಗೆ 20 ಎಕರೆ, ಅಗ್ನಿ ಶಾಮಕ ಠಾಣೆ ಹಾಗೂ ವಿಜ್ಞಾನೇಶ್ವರ ಕಾನೂನಿನ ಕಾಲೇಜಿಗೆ ತಲಾ 15 ಎಕರೆ, ಗಾಂಧಿ ಭವನಕ್ಕೆ 10 ಎಕರೆ. ಪೊಲೀಸ್ ಠಾಣೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ, ವಚನ ಮಂಟಪ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಗೆ ತಲಾ 5 ಎಕರೆ, ಜಿಲ್ಲಾ ಪಂಚಾಯತಿ ನಿರ್ಮಾಣಕ್ಕೆ, ಸ್ಯಾಟ್ ಲೈಟ್, ಬಸ ನಿಲ್ದಾಣಕ್ಕೆ, ಜಿಲ್ಲಾ ಪಂಚಾಯತಿ ಕಚೇರಿ ನಿರ್ಮಾಣಕ್ಕೆ ಮತ್ತು ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ ಹೀಗೆ ವಿವಿಧ ಇಲಾಖೆಗೆ 250 ಎಕರೆಗೂ ಹೆಚ್ಚಿನ ಜಮೀನು ಕೊಡುವಂತೆ ಒತ್ತಡ ಹೇರುತ್ತಲಿದ್ದಾರೆ. ಸರಕಾರ ಇಂಥಹ ಒತ್ತಡಕ್ಕೆ ಮಣಿಯದೇ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಮತ್ತು ಸಿಂಡಿಕೇಟ್ ಸದಸ್ಯರು ವಿವಿ ಒಂದಿಂಚೂ ಜಾಗ ಕೊಡಬಾರದುʼ ಎಂದ ಆಕ್ಷೇಪಿಸಿದರು.
ʼಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ದಲಿತ, ಹಿಂದುಳಿದ ಮತ್ತು ಬಡವರ, ರೈತರ ಮಕ್ಕಳಾಗಿದ್ದಾರೆ. ಸರಕಾರಕ್ಕೆ ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚಿಸುವುದರಲ್ಲಿ ಉತ್ಸಾಹವಿದೆಯೇ ಹೊರತು. ಇರುವ ವಿಶ್ವವಿದ್ಯಾಲಯಗಳು ಗುಣಮಟ್ಟ ಸುಧಾರಣೆಯ ಬಗ್ಗೆ ಹೆಚ್ಚಿನ ಆಸಕ್ತಿ ಇಲ್ಲ. ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಖಾಯಂ ಸಿಬ್ಬಂದಿಯ ಕೊರತೆ ಎದುರಿಸುತ್ತಿದೆ. ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರು ಮತ್ತು ಅತಿಥಿ ಉಪನ್ಯಾಸಕರನ್ನು ನೆಚ್ಚಿಕೊಂಡು ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಕೆಲವು ವಿಶ್ವವಿದ್ಯಾಲಯಗಳಲ್ಲಿ ಕೆಲವು ವಿಭಾಗಗಳಲ್ಲಿ ಮುಖ್ಯಸ್ಥರೇ ಇಲ್ಲ. ಅತಿಥಿ ಉಪನ್ಯಾಸಕರಿಗೆ ವೇತನ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಆಗುತ್ತಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಸಂವಾದ ಮತ್ತು ಸಾಂಸ್ಕೃತಿಕವಾದ ವಿಚಾರ ಧಾರೆಗಳನ್ನು ರೂಪಿಸುವ ವಿಶ್ವವಿದ್ಯಾಲಯಗಳ ಪರಂಪರೆ ಇಂದು ಕಳೆದುಕೊಂಡಿವೆ. ಈಗ ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಳು ಒಂದಿಲ್ಲೊಂದು ವಿವಾದಗಳಿಂದ ಮತ್ತು ಭ್ರಷ್ಟಾಚಾರದ ಸುದ್ದಿಯಲ್ಲಿವೆʼ ಎಂದರು.
ʼಗುಲಬರ್ಗಾ ವಿಶ್ವವಿದ್ಯಾಲಯದ ಜಮೀನು ಸರಕಾರ ಬೇರೆ-ಬೇರೆ ಇಲಾಖೆಗಳಿಗೆ ವರ್ಗಾಯಿಸಬಾರದು. ಒಂದು ವೇಳೆ ಜಮೀನು ನೀಡಿದರೆ ದೊಡ್ಡ ಪ್ರಮಾಣದ ಚಳುವಳಿ ರೂಪಿಸಬೇಕಾಗುತ್ತದೆ. ಸರಕಾರವು ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ವಿಶ್ವವಿದ್ಯಾಲಯದ ಭೂಮಿ ಕಬಳಿಸುವ ಕೆಲಸ ಬಿಡದಿದ್ದರೆ ಹಂತ-ಹಂತವಾದ ಉಗ್ರ ಹೋರಾಟವನ್ನು ಕೈಗೊಳ್ಳಲಾಗುವುದುʼ ಎಂದು ಎಚ್ಚರಿಸಿದರು.
ದಲಿತ ಸಂಘರ್ಷ ಸಮಿತಿಯ ಎಮ್.ಎಮ್. ಮೇತ್ರಿ, ಡಾ.ಜಯಕುಮಾರ್ ನೂಲಕರ್, ಸಂತೋಷ ತೆಗನೂರ, ರಮೇಶ ಕವಡೆ ಮತ್ತಿತರು ಹಾಜರಿದ್ದರು.