ಕನ್ನಡ ಚಿತ್ರರಂಗ ಕಂಡಂತಹ ಅಪರೂಪದ ಹಾಸ್ಯ ಬ್ರಹ್ಮ ನರಸಿಂಹರಾಜು ಅವರ ಕೊಡುಗೆ ಅಪಾರ. ಹಾಸ್ಯದ ಮಹತ್ವ ಸಾರಿದ ಕನ್ನಡದ ಚಾರ್ಲಿ ಚಾಪ್ಲಿನ್ ನರಸಿಂಹರಾಜು ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಡಾ.ಗುಬ್ಬಿ ವೀರಣ್ಣ ಟ್ರಸ್ಟ್ ಅವರ ಸಂಯುಕ್ತಾಶ್ರಯದಲ್ಲಿ ಇದೇ ತಿಂಗಳ 25 ರಿಂದ 29 ರವರೆಗೆ ಐದು ದಿನಗಳ ಕಾಲ ಹಾಸ್ಯ ಪ್ರಾಮುಖ್ಯತೆ ಪಡೆದ ನಾಟಕಗಳು ಪ್ರದರ್ಶನ ಆಗಲಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸಂಚಾಲಕ ಸದಸ್ಯ ಉಗಮ ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ಪಟ್ಟಣದ ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಪ್ಪು ಬಿಳುಪಿನ ಚಲನಚಿತ್ರ ಕಾಲದಲ್ಲಿ ಸಿನಿಮಾದಲ್ಲಿ ಹಾಸ್ಯದ ಮಹತ್ವ ಸಾರಿದ ನರಸಿಂಹರಾಜು ಅವರ ಜನ್ಮ ಶತಮಾನೋತ್ಸವ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿ ಅವರ ಹುಟ್ಟೂರು ತಿಪಟೂರು ಹೊರತಾಗಿ ಅವರ ವೃತ್ತಿ ಬದುಕು ಕಟ್ಟಿಕೊಟ್ಟ ಗುಬ್ಬಿ ವೀರಣ್ಣ ಕಂಪೆನಿಯ ಹೆಸರು ಉಳಿಸಲು ವೃತ್ತಿ ಭೂಮಿ ಗುಬ್ಬಿಯಲ್ಲೇ ನಾಟಕೋತ್ಸವ ಆಯೋಜನೆ ಮಾಡಲಾಗಿದೆ ಎಂದರು.

ಡಿ.25 ರ ಸಂಜೆ 5.30 ಕ್ಕೆ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಕಲಾವಿದರು ನಾಟಕ ಚಾರು ವಸಂತ ಪ್ರದರ್ಶಿಸಲಿದ್ದಾರೆ. 26 ರ ಸಂಜೆ 6.30 ಕ್ಕೆ ಬೆಂಗಳೂರಿನ ರಂಗಸಿರಿ ತಂಡದಿಂದ ಬ್ಲಾಕ್ ಔಟ್ ನಾಟಕ ಪ್ರದರ್ಶನ ಆಗಲಿದೆ. ಡಿ.27 ಸಂಜೆ ಹುಣಸೆಕಟ್ಟೆ ಶ್ರೀ ಕುಮಾರೇಶ್ವರ ಕೃಪಾ ಪೋಷಿತ ನಾಟಕ ಸಂಘದ ನಟರು ಸೋತು ಗೆದ್ದ ಸಾದ್ವಿ (ಚನ್ನಪ್ಪ ಚನ್ನೇಗೌಡ) ನಾಟಕ ಅಭಿನಯಿಸಲಿದ್ದಾರೆ. ಡಿ.28 ರ ಸಂಜೆ ಹುಬ್ಬಳ್ಳಿ ಪುಟ್ಟಮಣಿ ನಾಟ್ಯ ಸಂಘದಿಂದ ಬಸ್ ಹಮಾಲಾ (ಗೌಡ ಮೆಚ್ಚಿದ ಹುಡುಗಿ) ನಾಟಕ ನಡೆಯಲಿದೆ. ಕೊನೆಯ ದಿನ
ಡಿ.29 ರ ಸಂಜೆ 6 ಗಂಟೆಗೆ ಬೆಂಗಳೂರಿನ ದೃಶ್ಯ ತಂಡದಿಂದ ತಾಜ್ ಮಹಲ್ ಟೆಂಡರ್ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ವಿವರಿಸಿದರು.
ಗುಬ್ಬಿ ವೀರಣ್ಣ ಟ್ರಸ್ಟ್ ಸದಸ್ಯ ಡಾ.ಲಕ್ಷ್ಮಣದಾಸ್ ಮಾತನಾಡಿ ಗುಬ್ಬಿ ವೀರಣ್ಣ ರಂಗ ಗರಡಿಯಲ್ಲಿ ಹೊರ ಬಂದ ಮೇರು ನಟರ ಪಟ್ಟಿಯಲ್ಲಿ ನರಸಿಂಹರಾಜು ಅವರು ಅಗ್ರಗಣ್ಯರು. ವೀರಣ್ಣ ಅವರ ಕಲೆಯ ಅಪರಾವತಾರ ಎಂದೆನಿಸಿ ನರಸಿಂಹರಾಜು ಹಾಸ್ಯ ನಟನಾಗಿ ಯಾವ ಸಿನಿಮಾದಲ್ಲಿ ಪಾತ್ರ ನಿರ್ವಹಿಸಿದರೆ ಅದು ಗೆಲ್ಲುತ್ತಿತ್ತು. ಸಾಮಾಜಿಕ ಬದಲಾವಣೆಗೆ ಪೂರಕ ಸಂದೇಶ ನೀಡುವ ನರಸಿಂಹರಾಜು ಅವರ ಜನ್ಮ ಶತಮಾನೋತ್ಸವ ಗುಬ್ಬಿಯಲ್ಲಿ ಆಚರಿಸಲು ಅವಕಾಶ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ ಎಂದು ಭಾವಿಸಬೇಕಿದೆ ಎಂದರು.
ಇದನ್ನು ಓದಿದ್ದೀರಾ? ಉಡುಪಿ | ಪಂಚರ್ ಹಾಕುವ ವೇಳೆ ಟೈರ್ ಸ್ಫೋಟ: ಗಾಳಿಯಲ್ಲಿ ಹಾರಿಬಿದ್ದ ಯುವಕ; ವಿಡಿಯೋ ವೈರಲ್
ಐದು ದಿನದ ನಾಟಕೋತ್ಸವ ಮೊದಲ ದಿನ ಡಿ.25 ರಂದು ಸಂಜೆ 5 ಗಂಟೆಗೆ ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ವಿ ಸೋಮಣ್ಣ ಮುಖ್ಯ ಅತಿಥಿಯಾಗಿ ಶಾಸಕ ಎಸ್.ಆರ್.ಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಹಾಸ್ಯಬ್ರಹ್ಮ ನರಸಿಂಹರಾಜು ಭಾವಚಿತ್ರ ಅನಾವರಣವನ್ನು ಹಿರಿಯ ನಟ ದೊಡ್ಡಣ್ಣ ನಡೆಸಲಿದ್ದಾರೆ. ವಿಶೇಷ ಅತಿಥಿಯಾಗಿ ಸುಧಾ ನರಸಿಂಹರಾಜು ಆಗಮಿಸಲಿದ್ದಾರೆ. ಡಿ.29 ರಂದು ಸಮಾರೋಪ ಸಮಾರಂಭದಲ್ಲಿ ಹಿರಿಯ ನಟರಾದ ಮುಖ್ಯಮಂತ್ರಿ ಚಂದ್ರು, ಸಾಧು ಕೋಕಿಲ, ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಅಕಾಡೆಮಿ ಸದಸ್ಯ ರವೀಂದ್ರನಾಥ್ ಸಿರಿವರ ಆಗಮಿಸಲಿದ್ದಾರೆ. ಉಳಿದಂತೆ ಐದು ದಿನಗಳ ಕಾಲ ಸ್ಥಳೀಯ ಮುಖಂಡರು, ಗಣ್ಯರು ಅತಿಥಿಗಳಾಗಿ ಬರಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗುಬ್ಬಿ ವೀರಣ್ಣ ಟ್ರಸ್ಟ್ ಸದಸ್ಯ ರಾಜೇಶ್ ಗುಬ್ಬಿ, ಪಪಂ ಸದಸ್ಯ ಜಿ.ಸಿ.ಕೃಷ್ಣಮೂರ್ತಿ ಇದ್ದರು.