ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಸಿ.ಎಸ್.ಪುರ ಹೋಬಳಿ ಸಾಲಗಾರರ ಕ್ಷೇತ್ರ ಸಾಮಾನ್ಯ ಮೀಸಲು ನಿರ್ದೇಶಕರಾಗಿ ಬುಕ್ಕಸಾಗರ ಮಹದೇವಯ್ಯ 40 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಸಿ.ಎಸ್.ಪುರ ಹೋಬಳಿಯ ಸಾಮಾನ್ಯ ಮೀಸಲು ಸಾಲಗಾರರ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ಮಹದೇವಯ್ಯ ಹಾಗೂ ಕಾಳೇಗೌಡ ನಾಮಪತ್ರ ಸಲ್ಲಿಸಿ ಕಣದಲ್ಲಿ ನೇರ ಹಣಾಹಣಿ ನಡೆಸಿದರು.
ಚುನಾವಣಾ ಮತದಾನ ಪ್ರಕ್ರಿಯೆ ನಡೆದು ನಂತರ ಎಣಿಕೆ ಕಾರ್ಯ ನಡೆಯಿತು. ಒಟ್ಟು 58 ಮತಗಳ ಪೈಕಿ 56 ಮತಗಳು ಚಲಾವಣೆಗೊಂಡಿತ್ತು. ಚಲಾವಣೆ ಪೈಕಿ ಒಂದು ಮತ ತಿರಸ್ಕೃತ ಮತವಾಗಿ ಉಳಿದ 55 ಮತಗಳಲ್ಲಿ ಬುಕ್ಕಸಾಗರ ಮಹದೇವಯ್ಯ 40 ಮತಗಳನ್ನು ಪಡೆದು ಬಾರಿ ಅಂತರದಲ್ಲಿ ಗೆಲುವು ಸಾಧಿಸಿದರು. ಪ್ರತಿಸ್ಪರ್ಧಿ ಕಾಳೇಗೌಡ 15 ಮತಗಳ ಪಡೆದು ಪರಾಜಯಗೊಂಡರು.
ನೂತನ ನಿರ್ದೇಶಕ ಬುಕ್ಕಸಾಗರ ಮಹದೇವಯ್ಯ ಸುದ್ದಿಗಾರರ ಜೊತೆ ಮಾತನಾಡಿ ಕೃಷಿಕರ ಪರ ಕೆಲಸ ಮಾಡುವ ಪಿಎಲ್ ಡಿ ಬ್ಯಾಂಕ್ ಅಭಿವೃದ್ಧಿಗೆ ಸದಾ ಕಾಲ ಶ್ರಮಿಸುತ್ತೇವೆ. ವಿಶ್ವಾಸವಿಟ್ಟು ಮತದಾರರ ಇಚ್ಚೆಯಂತೆ ಕೆಲಸ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ದುಡಿದು ಬ್ಯಾಂಕ್ ಸರ್ವತೋಮುಖ ಅಭಿವೃದ್ಧಿ ಪಡಿಸಲು ಎಲ್ಲಾ ಸದಸ್ಯರ ವಿಶ್ವಾಸದಲ್ಲಿ ಸಾಗುತ್ತೇವೆ ಎಂದ ಅವರು ನನ್ನ ಗೆಲುವಿಗೆ ಶ್ರಮಿಸಿದ ಮುಖಂಡ ಎಂ.ವಿ.ಶ್ರೀನಿವಾಸ್ ಅವರ ತಂಡಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಎಂ.ವಿ.ಶ್ರೀನಿವಾಸ್, ಶಶಿಕಿರಣ್, ಸತೀಶ್ ಕುಮಾರ್, ಹೊನ್ನವಳ್ಳಿ ಕುಮಾರ್, ಮೋಹನ್, ವಕೀಲ ಕಾಂತರಾಜ್ ಇತರರು ಇದ್ದರು.