ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಶಕ್ತಿಯಿಂದ ಸಮಾನತೆ ಬರುತ್ತಿದೆ. ಮಾನಸಿಕ ಮೈಲಿಗೆಯ ಜನರ ಮಧ್ಯೆ ದೃಢ ಬದುಕು ಕಟ್ಟಲು ಮೊದಲು ಶಿಕ್ಷಣಕ್ಕೆ ಒತ್ತು ನೀಡಬೇಕು. ದೀನ ದಲಿತರಿಗೆ ಹಾಗೂ ಶೋಷಿತ ವರ್ಗಗಳಿಗೆ ಶಿಕ್ಷಣ ಒಂದೇ ಮುಖ್ಯವಾಹಿನಿಯ ಮಾರ್ಗ ಎಂದು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಅಭಿಯಂತರ ಕೃಷ್ಣಕಾಂತ್ ತಿಳಿಸಿದರು.
ಗುಬ್ಬಿ ಪಟ್ಟಣದ ಗುರುಭವನದಲ್ಲಿ ಆದಿ ಜಾಂಬವ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸನ್ಮಾನಿಸಿ ಮಾತನಾಡಿದ ಅವರು ಅರ್ಥಿಕವಾಗಿ ಹಾಗೂ ರಾಜಕೀಯ ಶಕ್ತಿ ನಮ್ಮಲ್ಲಿ ಬೆಳೆಯಬೇಕಿದೆ. ಬಹು ಸಂಖ್ಯೆ ಇದ್ದರೂ ಸಮಾಜದಲ್ಲಿ ಗುರುತರ ಕೆಲಸ ಮಾಡಲು ಸಾಧ್ಯವಾಗಿಲ್ಲ. ಸಂವಿಧಾನ ಬದ್ಧ ಸರ್ವರಿಗೂ ಸಮಪಾಲು, ಸಮಬಾಳು ನಾವೇ ಅರಿತು ಮುಂದಿನ ಪೀಳಿಗೆಗೆ ಶಿಕ್ಷಣದ ಅವಶ್ಯಕತೆ ಮಹತ್ವ ತಿಳಿ ಹೇಳಬೇಕಿದೆ. ಮೀಸಲಾತಿ ಬಳಕೆ ನಿರಂತರ ಇರಲೇಬೇಕಿದೆ. ಪರಿಶಿಷ್ಟ ಜಾತಿಯಲ್ಲಿ ಮಾದಿಗ ಜನಾಂಗ ಒಳಮೀಸಲಾತಿ ಪಡೆದು ಎಲ್ಲಾ ರಂಗದಲ್ಲೂ ಮುಂಚೂಣಿಯಾಗಿ ಬೆಳೆಯಬೇಕು ಎಂದು ಕರೆ ನೀಡಿದರು.
ಈಗಾಗಲೇ ಚಾಲ್ತಿಯಲ್ಲಿರುವ ಮೀಸಲಾತಿಯಲ್ಲಿ ನಮ್ಮ ಸಮುದಾಯ ಹೆಚ್ಚು ಪಡೆದಿಲ್ಲ. ಎಸ್ಸಿ ಪಟ್ಟಿಗೆ ಬರುವ ಇತರೆ ಜನಾಂಗ ಮೀಸಲಾತಿ ಬಳಸಿಕೊಂಡಿದೆ. ಈ ಹಿನ್ನಲೆ ಒಳ ಮೀಸಲಾತಿ ಜಾರಿಗೆ ಬರುತ್ತಿದೆ. ಈಗಲಾದರೂ ನಮ್ಮ ಮಕ್ಕಳಿಗೆ ಉತ್ತಮ ಬದುಕು ಕಟ್ಟಿಕೊಡೋಣ. ನೂರಕ್ಕೆ ಆರು ಮಂದಿ ಮಾತ್ರ ಅರ್ಹತೆ ಪಡೆಯಲು ಸಾಧ್ಯವಾಗಿತ್ತು. ನಂತರದಲ್ಲಿ ಹಕ್ಕು ಪಡೆದು ಹನ್ನೆರಡು ಮಂದಿ ಮೀಸಲಾತಿ ಲಾಭ ಪಡೆಯುತ್ತಾರೆ ಎಂದರು.

ಪ್ರಸ್ತುತ ರಾಜ್ಯದಲ್ಲಿ 36 ಮಂದಿ ಪರಿಶಿಷ್ಟ ಜಾತಿ ಶಾಸಕರಿದ್ದಾರೆ. ಆದರೆ ಬಹು ಸಂಖ್ಯೆ ಮಾದಿಗ ಸಮುದಾಯ ಕೇವಲ ಆರು ಮಂದಿ ಶಾಸಕರನ್ನು ಪಡೆದಿದೆ. ಉಳಿದ 30 ಇನ್ನಿತರ ಜನಾಂಗ ಪಡೆದುಕೊಂಡಿದೆ. ಜಿಲ್ಲೆಯಲ್ಲಿ 2.80 ಲಕ್ಷ ಜನಸಂಖ್ಯೆ ಇರುವ ನಮ್ಮಗಳ ಜನರಿಗೆ ಮೀಸಲಾತಿ ದೊರಕಿಲ್ಲ. 80 ಸಾವಿರದ ಬೋವಿ, 70 ಸಾವಿರದ ದ್ರಾವಿಡ ಜನರು ಲಾಭ ಪಡೆದಿದ್ದಾರೆ. ತಾಲ್ಲೂಕಿನಲ್ಲಿ 36 ಸಾವಿರಕ್ಕೂ ಅಧಿಕ ಸಂಖ್ಯೆಯ ಮಾದಿಗ ಸಮುದಾಯ ಒಗ್ಗಟ್ಟಿನ ಪ್ರದರ್ಶನ ಮಾಡಬೇಕಿದೆ ಎಂದು ಕರೆ ನೀಡಿದರು.
ಸೈಬರ್ ಕ್ರೈಂ ಪೊಲೀಸ್ ನಿರೀಕ್ಷಕಿ ಮಹಾಲಕ್ಷ್ಮಮ್ಮ ಮಾತನಾಡಿ ಪೈಪೋಟಿ ಯುಗದಲ್ಲಿ ನಮ್ಮ ಮಕ್ಕಳಿಗೆ ನೂರಕ್ಕೆ ನೂರು ಅಂಕ ಗಳಿಸುವ ಕೌಶಲ್ಯ ಬೆಳೆಸಬೇಕಿದೆ. ಮೀಸಲಾತಿ ಎಂಬುದು ಸರ್ಕಾರಿ ವಲಯದಲ್ಲಿ ಮಾತ್ರವಿದೆ. ಖಾಸಗಿ ವಲಯದಲ್ಲಿ ಕಾಣದ ಮೀಸಲಾತಿ ನಡುವೆ ನಮ್ಮ ಮಕ್ಕಳು ಶೈಕ್ಷಣಿಕ ಪ್ರಗತಿ ಕಂಡಲ್ಲಿ ಮಾತ್ರ ಸ್ವಂತ ಶಕ್ತಿಯ ಪ್ರದರ್ಶನ ಕಾಣುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಪ್ರೋತ್ಸಾಹ ನೀಡಿ ಶಿಕ್ಷಣ ಒದಗಿಸಿ ಎಂದ ಅವರು ಜಾತಿ ನಿಂದನೆ ಪ್ರಕರಣಗಳು ನೂರಾರು ರಾಜೀ ಸಂಧಾನ ಆಗುತ್ತಿವೆ. ಶೇಕಡಾ 1 ರಷ್ಟು ಮಾತ್ರ ಶಿಕ್ಷೆಗೆ ಗುರಿಯಾಗಿರುವ ಉದಾಹರಣೆ ಇದೆ. ಗ್ರಾಮದಲ್ಲಿ ಭಯದ ವಾತಾವರಣ ಅಥವಾ ಆಸೆ ಆಮಿಷ ಈ ರಾಜಿಗೆ ಕಾರಣವಾಗಿದೆ. ಈ ಜೊತೆ ದುಶ್ಚಟ ನಮ್ಮ ಜನರ ಬದುಕು ಹಾಳು ಮಾಡಿದೆ ಎಂದು ವಿಷಾದಿಸಿದರು.
ಉಪನ್ಯಾಸಕ ಕೆಂಪರಾಜು ಮಾತನಾಡಿ ಅಂಬೇಡ್ಕರ್ ಅವರ ಕನಸು ಶೋಷಿತ ವರ್ಗಗಳಿಗೆ ನ್ಯಾಯ ಒದಗಿಸಬೇಕು ಎಂಬುದಾಗಿತ್ತು. ಅವರ ಕನಸು ಈಡೇರಿಸುವ ಕೆಲಸ ನಮ್ಮ ಮುಂದಿನ ಪೀಳಿಗೆ ಮಾಡಬೇಕಿದೆ. ಉನ್ನತ ವ್ಯಾಸಂಗಕ್ಕೆ ಸಮುದಾಯ ಸಹಕಾರ ನೀಡುವ ಕೆಲಸ ಮಾಡಬೇಕು. ಶಿಕ್ಷಣ ಸಂಘಟನೆ ಹೋರಾಟ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮಕ್ಕಳಿಗೆ ಶಿಕ್ಷಣ ಒದಗಿಸೋಣ ಎಂದು ತಿಳಿಸಿದರು.
ದಸಂಸ ಮುಖಂಡ ಚೇಳೂರು ಶಿವನಂಜಪ್ಪ ಮಾತನಾಡಿ ಒಳ ಮೀಸಲಾತಿ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ ಆಡಳಿತ ಒಪ್ಪಿಗೆ ನೀಡಿದೆ. ಇದರ ಮಹತ್ವ ಮುಂದಿನ ದಿನದಲ್ಲಿ ತಿಳಿಯುತ್ತದೆ. ಮಾದಿಗ ಸಮುದಾಯದ ತಬ್ಬಲಿ ಸಂಸ್ಥೆಯಾಗಿ ನೌಕರರ ಸಂಘ ನಡೆದಿದೆ. ಶಿಕ್ಷಕರು ಹೆಚ್ಚಿರುವ ಈ ಸಂಘಕ್ಕೆ ಇನ್ನಿತರ ಇಲಾಖೆಯ ನೌಕರರು ಸದಸ್ಯರಾಗಿ ನಮ್ಮ ಮಕ್ಕಳ ಭವಿಷ್ಯ ಕಟ್ಟಬೇಕಿದೆ ಎಂದ ಅವರು ಮೀಸಲಾತಿ ಪಡೆಯಲು ಮಾದಿಗ ದಂಡೋರ ಕಟ್ಟಿಕೊಂಡು ದುಡಿದ ಮುಖಂಡರನ್ನು ಸ್ಮರಿಸುವ ಕಾರ್ಯಕ್ರಮ ನಡೆಯಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಗಳಿಸಿದ ಮಾದಿಗ ಸಮುದಾಯದ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮುಖಂಡರಾದ ತೊರೆಹಳ್ಳಿ ಚಂದ್ರಯ್ಯ, ದೊಡ್ಡಮ್ಮ, ಆದಿ ಜಾಂಬವ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಶಾಂತರಾಜು, ಗೌರವ ಅಧ್ಯಕ್ಷ ನರಸಿಂಹಮೂರ್ತಿ, ಉಪಾಧ್ಯಕ್ಷ ಶಿವನಂಜಯ್ಯ, ಪ್ರಧಾನ ಕಾರ್ಯದರ್ಶಿ ಟಿ.ಆರ್.ಕುಮಾರ್, ಸಂಘಟನಾ ಕಾರ್ಯದರ್ಶಿ ರಂಗನಾಯಕಮ್ಮ, ಖಜಾಂಚಿ ಕೆ.ನರಸಿಂಹಮೂರ್ತಿ, ನಿರ್ದೇಶಕರಾದ ಕೃಷ್ಣಮೂರ್ತಿ, ಮಂಜುಳಾ, ಲಕ್ಷ್ಮಿದೇವಮ್ಮ, ಪುರುಷೋತ್ತಮ್, ಪ್ರಸಾದ್, ಲಕ್ಷ್ಮಣ್, ಗಂಗಾಧರ್, ಮಹೇಶ್ ಇತರರು ಇದ್ದರು.