ತೆಂಗು ಕೃಷಿಯಲ್ಲಿ ಇಳುವರಿ ಹೆಚ್ಚಿಸಲು ಹಲವು ಕ್ರಮಗಳನ್ನು ರೈತರು ಕೈಗೊಂಡಾಗ ಮಾತ್ರ ಇಳುವರಿಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಬಹುದು ಎಂದು ಸಸ್ಯರೋಗಶಾಸ್ತ್ರ ಪ್ರಾಧ್ಯಾಪಕ ಡಾ.ಬಿ.ಆಂಜನೇಯ ರೆಡ್ಡಿ ತಿಳಿಸಿದರು
ಗುಬ್ಬಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ, ಪ್ರಾದೇಶಿಕ ತೋಟಗಾರಿಕಾ ಸಂಶೋದನಾ ಮತ್ತು ವಿಸ್ತರಣಾ ಕೇಂದ್ರ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ಭಾರತೀಯ ಸಾಂಬಾರು ಸಂಶೋಧನಾ ಸಂಸ್ಥೆ, ಕೋಝಿಕ್ಕೋಡು ಹಾಗೂ ಐಡಿಎಫ್ ಸುಜೀವನ ಒಕ್ಕೂಟ ಇವರ ಸಹಯೋಗದಲ್ಲಿ ಆಯೋಜಿಸಿದ್ದ ತೋಟಗಾರಿಕೆಯಲ್ಲಿ ನೂತನ ತಾಂತ್ರಿಕತೆಗಳ ಮೂಲಕ ಪರಿಶಿಷ್ಟ ಜಾತಿ ರೈತರ ಬಲವರ್ಧನೆ ಕುರಿತು ತರಬೇತಿ ಮತ್ತು ಪರಿಕರಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ತೆಂಗು ಬೆಳೆಯಲ್ಲಿ ಹಲವು ರೋಗಗಳಿದ್ದು ಅವುಗಳ ನಿರ್ವಹಣೆಗೆ ಸರಿಯಾಗಿ ನೀರು ಮತ್ತು ಗೊಬ್ಬರವನ್ನು ನೋಡಿದಾಗ ಮಾತ್ರ ಹಲವು ರೋಗಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.
ತೆಂಗಿನಲ್ಲಿ ಸುಳಿ ಕೊಳೆ ರೋಗ ತಡೆಗಟ್ಟಲು ಶೇ.1ರ ಬೋರ್ಡೋ ದ್ರಾವಣ ಅಥವಾ ಶೇ.0.3 ತಾಮ್ರದ ಆಕ್ಸ್ ಕ್ಲೋರೈಡ್ ದ್ರಾವಣದಿಂದ ರೋಗಗ್ರಸ್ತ ಭಾಗವನ್ನ ಉಪಚರಿಸಲು ಸಲಹೆ ನೀಡಿದ ಅವರು ನುಸಿ ಕೊಳೆ ರೋಗಕ್ಕೆ ಹುಳು ತಡೆಯಲು ಬೇವಿನ ಹಿಂಡಿ ಬಳಸಿ ತೆಂಗಿನಮರಗಳ ಸುತ್ತ ಹಾಕುವ ಮೂಲಕ ಕೊಳೆ ರೋಗಕ್ಕೆ ಕಡಿವಾಣ ಹಾಕಬಹುದು ಎಂದರು.
ಅರಸಿಕೆರೆ ಸಹ ಪ್ರಾಧ್ಯಾಪಕ ಡಾ.ಎಸ್.ಕೆ.ಜಗದೀಶ್ ಮಾತನಾಡಿ ರೈತರು ತೆಂಗಿನ ತೋಟಗಳಿಗೆ ಮಣ್ಣನ್ನು ಒಡೆಯ ಬಾರದು, ಹೊಸ ಮಣ್ಣು ಹಾಕುವುದರಿಂದ ತೆಂಗಿನಲ್ಲಿ ರೋಗಗಳು ಹೆಚ್ಚುತ್ತವೆ. ತೋಟದಲ್ಲಿ ನೀರು ನಿಲ್ಲದಂತೆ ಬಸಿಗಾಲುವೆ ಮಾಡಬೇಕು. ವಿಜ್ಞಾನಿಗಳು ಶಿಫಾರಸ್ಸು ಮಾಡಿದ ರಸಗೊಬ್ಬರ ಮತ್ತು ಸಾವಯವ ಗೊಬ್ಬರಗಳನ್ನು ಹಾಕಬೇಕು ಎಂದು ತಿಳಿಸಿದರು.
ಬೆಂಗಳೂರು ಕೇಂದ್ರದ ಕೃಷಿ ಕೀಟಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ.ಬಿ. ದೊಡ್ಡಬಸಪ್ಪ ತೆಂಗಿನಲ್ಲಿ ಬರುವ ಕೀಟಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿ, ತೆಂಗಿನಲ್ಲಿ ಪ್ರಮುಖವಾಗಿ ಕಪ್ಪು ತಲೆ ಹುಳು, ಕೆಂಪು ಮೂತಿ ಹುಳು, ನುಸಿ ಕೀಟಗಳ ನಿರ್ವಹಣೆಗೆ ಸೂಕ್ತ ಸಲಹೆ ನೀಡಿದರು.
ಕಾರ್ಯಕ್ರಮ ಸಂಯೋಜಕರಾದ ಪ್ರಾಧ್ಯಾಪಕ ಡಾ.ಪಿ.ಎಂ.ಮುನಿಕೃಷ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಬಡತನ ರೇಖೆಗಿಂತ ಕಡಿಮೆ ಇರುವ ಪರಿಶಿಷ್ಟ ಜಾತಿ ಯವರಿಗೆ ಸೇರಿದ ರೈತರ ಬಲವರ್ಧನೆಗಾಗಿ ಇಂತಹ ಕಾರ್ಯಕ್ರಮಗಳು ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಮ್ಮ ಒಕ್ಕೂಟದ 50 ಜನ ಪರಿಶಿಷ್ಟ ಜಾತಿಯ ಸಣ್ಣ ರೈತರಿಗೆ ತಲಾ 50 ತೆಂಗಿನ ಗಿಡ ಮತ್ತು ತಲಾ 50 kg ಯ 3 ಚೀಲ ಎರಹುಳು ಗೊಬ್ಬರವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಐಡಿಎಫ್ ಸಹಜೀವನ ಒಕ್ಕೂಟದ ಅಧ್ಯಕ್ಷ ಎಂ.ಎನ್.ಕುಂಭಯ್ಯ, ಜೀವನೋಪಾಯ ಅಧಿಕಾರಿ ಬಿ.ಟಿ.ಗಿರೀಶ್ ಕುಮಾರ್, ಮುದ್ದಗಂಗಯ್ಯ, ರೈತ ಉತ್ಪಾದಕರ ಕಂಪನಿಯ ಸಿಇಒ ಕುಮಾರ್, ಬಸವರಾಜು, ಲೋಕೇಶ್, ಸಿಬ್ಬಂದಿಗಳು ಹಾಗೂ ತುಮಕೂರು ಮತ್ತು ಗುಬ್ಬಿ ತಾಲ್ಲೂಕಿನ ರೈತ ಫಲಾನುಭವಿಗಳು ಇದ್ದರು.