ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕು ತಾಳಕೆರೆ ಗ್ರಾಮದ ಈರಯ್ಯ ಮತ್ತು ಮಕ್ಕಳು ಹಾಗೂ ಕೃಷ್ಣಪ್ಪ ಎಂಬ ರೈತರು ಸಾಲ ಮಾಡಿದ್ದನ್ನು ತೀರಿಸಲಾಗದ್ದಕ್ಕೆ ರೈತನ ಜಮೀನನ್ನು ಬ್ಯಾಂಕ್ ಹರಾಜುಗೊಳಿಸಿದ್ದನ್ನು ಗುಬ್ಬಿ ರೈತ ಸಂಘದ ಮುಖಂಡರು ಖಂಡಿಸಿದ್ದಾರೆ.
ತಾಳಕೆರೆ ಗ್ರಾಮದ ಈರಯ್ಯ ಮತ್ತು ಮಕ್ಕಳು ಹಾಗೂ ಕೃಷ್ಣಪ್ಪ ಎಂಬ ರೈತರು 6 ಎಕರೆ ಜಮೀನು ಮೇಲೆ ಪಡೆದ 4.5 ಲಕ್ಷ ಸಾಲಕ್ಕೆ ಬಡ್ಡಿ ವಗೈರಿ ಸೇರಿಸಿ 34.80 ಲಕ್ಷ ರೂಗಳಿಗೆ ಡಿಕ್ರಿ ಮಾಡಿಸಿ ಸಾಲಗಾರ ರೈತರಿಗೆ ಆಧಾರವಾಗಿದ್ದ ಬೆಲೆ ಬಾಳುವ ಜಮೀನು ಹರಾಜು ನಡೆಸಿರುವುದು ಪೂರ್ವ ನಿಯೋಜಿತ ಎನಿಸಿ ರೈತ ಸಂಘ ಉಗ್ರ ಹೋರಾಟಕ್ಕೆ ಮುಂದಾಗಿದೆ. ಈ ಪ್ರತಿಭಟನೆಗೆ ಗುಬ್ಬಿ ತಾಲೂಕು ಸಂಪೂರ್ಣ ಸಹಕಾರ ನೀಡಲಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ ತಿಳಿಸಿದರು.
ಗುಬ್ಬಿ ಪಟ್ಟಣದ ಎಪಿಎಂಸಿ ರೈತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೈತರ ಸಾಲ ವಸೂಲಾತಿ ಬಲವಂತದಲ್ಲಿ ಮಾಡಬಾರದು ಎಂದು ಸರ್ಕಾರ ಆದೇಶಿಸಿದ್ದರೂ ತುರುವೇಕೆರೆ ಕರ್ನಾಟಕ ಬ್ಯಾಂಕ್ ರೈತರ ಸಾಲಕ್ಕೆ ಅಂದಾಜು ಮೂರು ಕೋಟಿ ಬೆಲೆಬಾಳುವ ಜಮೀನನ್ನು 4.5 ಲಕ್ಷ ಸಾಲಕ್ಕೆ 34.80 ಲಕ್ಷಕ್ಕೆ ಡಿಕ್ರಿ ಮಾಡಿಸಿರುವುದು ಬಿಡ್ಡುದಾರರ ಜೊತೆ ಶಾಮೀಲು ಆಗಿರುವ ಶಂಕೆ ವ್ಯಕ್ತವಾಗಿದೆ. ಈ ರೀತಿ ಬ್ಯಾಂಕ್ ಮಾಡಿದ್ದು ಖಂಡನೀಯ. ಈ ನಿಟ್ಟಿನಲ್ಲಿ ಇದೇ ತಿಂಗಳ 12 ರಂದು ತುರುವೇಕೆರೆ ಬ್ಯಾಂಕ್ ಮುಂದೆ ಬೃಹತ್ ಪ್ರತಿಭಟನೆ ನಡೆಯಲಿದೆ. ಗುಬ್ಬಿ ತಾಲೂಕಿನಿಂದ 300 ಕ್ಕೂ ಅಧಿಕ ರೈತರು ತೆರಳಲಿದ್ದಾರೆ ಎಂದು ಹೇಳಿದರು.

ಬರ ಪೀಡಿತ ಪ್ರದೇಶಗಳಲ್ಲಿರುವ ಜಿಲ್ಲೆಯಲ್ಲಿ ಸಾಲ ವಸೂಲಿಗೆ ಮುಂದಾದ ಖಾಸಗಿ ಸಹಕಾರಿ ಬ್ಯಾಂಕ್ ಗಳು ಮಾಡಿರುವ ತಂತ್ರ ಡಿಕ್ರಿ ಮಾಡಿಸಿ ಜಮೀನು ಹರಾಜು ಮಾಡುವುದು ದೊಡ್ಡ ದಂಧೆ ಎನಿಸಿದೆ. ಮಾಫಿಯಾ ರೀತಿ ಭೂ ಕಬಳಿಕೆಗೆ ಈ ಹರಾಜು ಪ್ರಕ್ರಿಯೆ ಕಾನೂನು ರೀತಿ ಮಾಡುವ ದಂಧೆಯಾಗಿದೆ. ಸರ್ಕಾರ ಈ ರೀತಿಯ ವಸೂಲಿ ಬಗ್ಗೆ ಚಕಾರ ಎತ್ತುತ್ತಿಲ್ಲ. ಕಾರ್ಪೊರೇಟ್ ಕಂಪನಿಯ ಸಾಲ ಮನ್ನಾ ಮಾಡುವ ಸರ್ಕಾರ, ರೈತರ ಸಾಲ ಮನ್ನಾ ಮಾಡುತ್ತಿಲ್ಲ. ನಾಗರಿಕ ಸಮಾಜದ ಸಾಲಕ್ಕಾಗಿ ರೈತರ ಭೂಮಿ ಕಿತ್ತುಕೊಳ್ಳುವ ಪ್ರಕ್ರಿಯೆಗೆ ಧಿಕ್ಕಾರ ಕೂಗುತ್ತೇವೆ ಎಂದು ಎಚ್ಚರಿಸಿದ ಅವರು, ವಾಣಿಜ್ಯ ಮತ್ತು ಸಹಕಾರ ಬ್ಯಾಂಕ್ ನಾನಾ ರೀತಿಯ ಕಿರುಕುಳ ನೀಡುತ್ತಿವೆ. ರೈತ ಸಾಲಗಾರನಲ್ಲ, ಸರ್ಕಾರವೇ ರೈತನಿಗೆ ಬಾಕಿದಾರ ಎಂಬ ವೈಜ್ಞಾನಿಕ ಆಧಾರದ ಮೇಲೆ ರೈತ ಸಂಘ ಚಳುವಳಿ ನಡೆಸಲಿದೆ ಎಂದರು.
“ಇಡೀ ಜಿಲ್ಲೆಗೆ ಸಾಲ ನೀಡಿರುವ ಡಿಸಿಸಿ ಬ್ಯಾಂಕ್ ಮಧುಗಿರಿ ತಾಲೂಕಿಗೆ ಇಡೀ ಜಿಲ್ಲೆಗೆ ನೀಡಿದ ಸಾಲದಷ್ಟೇ ಸಾಲ ವಿತರಿಸಲಾಗಿದೆ. ಸಚಿವ ಕೆ.ಎನ್.ರಾಜಣ್ಣ ಬಹಳ ಬುದ್ಧಿವಂತರು. ಎಲ್ಲ ರೈತರನ್ನು ಒಂದೇ ರೀತಿ ಕಾಣಬೇಕಿತ್ತು. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೆರೆಸಿದ್ದು ಸರಿಯಲ್ಲ. ಮೊದಲು ಈ ಹರಾಜು ಪ್ರಕ್ರಿಯೆ ನಡೆಸಿ ಭೂಮಿ ಕಬಳಿಸುವ ದಂಧೆಗೆ ಬ್ರೇಕ್ ಹಾಕಿ ಎಂದು ರೈತರ ಸಂಘದ ಗುಬ್ಬಿ ತಾಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ಯುವ ಘಟಕದ ಅಧ್ಯಕ್ಷ ಶಿವಕುಮಾರ್, ತಾಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್, ಪದಾಧಿಕಾರಿಗಳಾದ ಲೋಕೇಶ್, ಸತ್ತಿಗಪ್ಪ, ಯತೀಶ್, ಶಿವಣ್ಣ, ಸುರೇಶ್, ಕೃಷ್ಣಶೆಟ್ಟಿ, ಪ್ರಕಾಶ್, ಹನುಮಂತರಾಜು, ಕನ್ನಿಗಪ್ಪ, ವೆಂಕಟೇಶ್, ಈಶ್ವರಪ್ಪ ಇತರರು ಇದ್ದರು.

ಗುಬ್ಬಿ ತಾಲ್ಲೂಕಿನ ಎಂಎಲ್ಎ ಮಲಗಿದ್ದಾರ ಅವರನ್ನ ಎದ್ದಿಳಿಸಿ
ಜೊತೆಯಲ್ಲಿ ಕರೆದು ಕೊಂಡು ತುಮಕೂರಿನ ಟೌನ್ ಹಾಲ್ ಸರ್ಕಲ್ಗ್ ಬಂದು ವಾಹನ ಸಂಚಾರವನ್ನ ನಿಲ್ಲಿಸಿ ಡಿಸಿ ಮತ್ತು
ಸಿದ್ದರಾಮಯ್ಯ ನವರನ್ನು ಕರೆಸಿ ಅವರ ಬರುವಿಕೆಯ ವರೆಗು ಧರಣಿ ಕೈ ಬಿಡ ಬೇಡಿ ಪೊಲೀಸರ್ ದವರ್ಜನ್ಯಕ್ಕೆ ಹೆದರಬೇಡಿ
ವಿಷ ಕುಡಿದರು ಅಲ್ಲಿಂದ ಕಾಲು ತೆಗೆಯಬೇಡಿ
ನ್ಯಾಯ ಪಡೆಯುವ ಹಕ್ಕು
ನ್ಯಾಯ ಕೇಳುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ ಜೈ ಕರ್ನಾಟಕ ಮಾತೆ