ರಾಷ್ಟ್ರಕವಿ ಕುವೆಂಪು ಅವರ ಸ್ಮರಣಾರ್ಥ ಸ್ಥಾಪಿಸಲಾಗಿರುವ ರಾಷ್ಟ್ರೀಯ ಪ್ರಶಸ್ತಿಯಾದ ‘ಕುವೆಂಪು ರಾಷ್ಟ್ರೀಯ ಪುರಸ್ಕಾರ’ಕ್ಕೆ 2024ನೇ ಸಾಲಿನ ಪ್ರಶಸ್ತಿಗೆ ಗುಜರಾತಿ ಲೇಖಕಿ ಹಿಮಾಂಶಿ ಇಂದುಲಾಲ್ ಶೆಲತ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ) ತಿಳಿಸಿದೆ.
ಭಾರತದ ಸಂವಿಧಾನದಿಂದ ಮಾನ್ಯತೆ ಪಡೆದ ಯಾವುದೇ ಭಾಷೆಗೆ ಕೊಡುಗೆ ನೀಡಿದ ಸಾಹಿತಿಗಳನ್ನು ಗುರುತಿಸಲು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಟ್ರಸ್ಟ್ 2013 ರಲ್ಲಿ ಕುವೆಂಪು ಅವರ ಹೆಸರಿನಲ್ಲಿ ಈ ರಾಷ್ಟ್ರೀಯ ವಾರ್ಷಿಕ ಸಾಹಿತ್ಯ ಪ್ರಶಸ್ತಿಯನ್ನು ಸ್ಥಾಪಿಸಿತ್ತು. ಪ್ರಶಸ್ತಿಯು ₹ 5 ಲಕ್ಷ ನಗದು, ಬೆಳ್ಳಿ ಪದಕ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಹಿಮಾಂಶಿ ಇಂದುಲಾಲ್ ಶೆಲತ್ ಅವರು ಭಾರತದ ಸಮಕಾಲೀನ ಸಂದರ್ಭದ ಪ್ರಮುಖ ಬರಹಗಾರರಲ್ಲಿ ಒಬ್ಬರಾಗಿದ್ದಾರೆ. ಇವರು ಗುಜರಾತಿ ಭಾಷೆಯಲ್ಲಿ ಹಲವು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ.
ಹನ್ನೆರಡು ಸಣ್ಣಕಥಾ ಸಂಕಲನಗಳು ಎರಡು ಕಾದಂಬರಿಗಳು, ಎರಡು ನೀಳತೆಗಳು, ಮೂರು ಅನುವಾದಿತ ಮತ್ತು ಎರಡು ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ. ಹಾಗೆಯೇ ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ‘ಮುಕ್ತಿ ವೃತ್ತಾಂತ್’ ಇವರ ಆತ್ಮಕಥೆಯಾಗಿದೆ.

‘ಅಂತರಾಲ್’ ಇವರ ಮೊದಲ ಕಥಾ ಸಂಕಲನ. ಇವರ ಸಾಹಿತ್ಯದಲ್ಲಿ ಪ್ರಗತಿಪರ ಆಲೋಚನೆಗಳು ಮತ್ತು ಆಶಯಗಳು ಅಭಿವ್ಯಕ್ತಿಗೊಂಡಿವೆ. ಸಾಮಾಜಿಕ ಬದ್ಧತೆ ಮತ್ತು ಸಾಹಿತ್ಯ ಪ್ರೀತಿಯ ವಿಶಿಷ್ಟತೆ ಇವರ ಬದುಕು ಮತ್ತು ಬರಹಗಳಲ್ಲಿ ಸಮೀಕರಣಗೊಂಡಿದೆ. ‘ಕುವೆಂಪು ರಾಷ್ಟ್ರೀಯ ಪ್ರಶಸ್ತಿ’ಗೆ ಪುರಸ್ಕೃತರಾದ ಇವರ-ಬರಹಗಳಲ್ಲಿ ಕುವೆಂಪು ಅವರ ದೃಷ್ಟಿ ಧೋರಣೆಗಳು ಅಭಿವ್ಯಕ್ತಗೊಂಡಿರುವುದು ಅವರ ಸಾಹಿತ್ಯದ ಅನನ್ಯತೆ ಎಂದು ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ತಿಳಿಸಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು 2025ರ ಫೆಬ್ರವರಿ 22ರ ಶನಿವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 6 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಪುರಸ್ಕಾರವನ್ನು ಪ್ರದಾನ ಮಾಡಲಿದ್ದಾರೆ ಎಂದು ಟ್ರಸ್ಟ್ ತಿಳಿಸಿದೆ.
ಇದನ್ನು ಓದಿದ್ದೀರಾ? ಮಂಗಳೂರು | ಸಲೂನ್ಗೆ ನುಗ್ಗಿ ದಾಂಧಲೆ ಪ್ರಕರಣ; ಬಂಧಿತರಲ್ಲಿ ಓರ್ವ ಸ್ಥಳೀಯ ಪತ್ರಕರ್ತ!
ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮೊದಲು ಅಂದು ಬೆಳಗ್ಗೆ 9.30ರಿಂದ ಕುವೆಂಪು ಸಮಗ್ರ ಸಾಹಿತ್ಯವನ್ನು ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ, ಕವಿಗೋಷ್ಠಿಯನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಹಾಗೆಯೇ ಹಿಮಾಂಶಿ ಇಂದುಲಾಲ್ ಶೆಲತ್ ಅವರ ಸಾಹಿತ್ಯ ಕುರಿತ ವಿಶೇಷ ಉಪನ್ಯಾಸವೂ ಇರಲಿದೆ ಎಂದು ಪ್ರತಿಷ್ಠಾನ ತಿಳಿಸಿದೆ.
ಸಮಾರಂಭದಲ್ಲಿ ನಾಡಿನ ವಿದ್ವಾಂಸರು, ಸಾಹಿತ್ಯಾಸಕ್ತರು ಭಾಗವಹಿಸಲಿದ್ದಾರೆ. ಅಂದು ಭಾಗವಹಿಸುವ ಸಾಹಿತ್ಯಾಸಕ್ತರಿಗೆ ಲಘು ಉಪಾಹಾರದ ವ್ಯವಸ್ಥೆ ಇರುತ್ತದೆ. ಈ ವಿಚಾರ ಸಂಕಿರಣಕ್ಕೆ ವಿಶ್ವವಿದ್ಯಾಲಯಗಳ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಯುವಜನತೆ ಮತ್ತು ಸಾರ್ವಜನಿಕರು ಭಾಗವಹಿಸಲು ಅವಕಾಶವಿರುತ್ತದೆ ಎಂದು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ತಿಳಿಸಿದೆ.
