ಶಾಸಕ ಎಚ್ ಎಂ ಗಣೇಶ್ ಪ್ರಸಾದ್ ಅವರ ಅಧ್ಯಕ್ಷ್ಯತೆಯಲ್ಲಿ ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಪ್ರಗತಿ ಪರಿಶೀಲನಾ ಸಭೆಯು ನಡೆಯಿತು.
ಈ ವೇಳೆ ಮಾತನಾಡಿದ ಶಾಸಕ ಎಚ್ ಎಂ ಗಣೇಶ್ ಪ್ರಸಾದ್, “ಗುಂಡ್ಲುಪೇಟೆ ತಾಲೂಕಿನ ಮಾದಾಪಟ್ಟಣ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದು ಉತ್ತಮ ಸೇವೆಯನ್ನು ಮಾಡಿದೆ. ಹಾಗೆಯೇ ಹೊರರೋಗಿ ಚಿಕಿತ್ಸೆಗೆ ಟೋಕನ್ ಜನರೇಶನ್ ಮಾಡುವುದರಲ್ಲಿ ಗುಂಡ್ಲುಪೇಟೆ ದೇಶಕ್ಕೆ ಮೊದಲಾಗಿದೆ” ಎಂದು ತಿಳಿಸಿದರು.
“ಆರೋಗ್ಯ ಇಲಾಖೆಯಲ್ಲಿ ಉತ್ತಮ ಸೇವೆಗಳನ್ನು ನೀಡಿ, ಪ್ರಶಸ್ತಿ ಗರಿಗಳನ್ನು ಹೊಂದಿರುವುದು ನಮ್ಮ ತಾಲೂಕಿನ ಹಿರಿಮೆ” ಎಂದು ಆರೋಗ್ಯ ಇಲಾಖೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ವಿಚಾರವಾಗಿ ಸಾಕಷ್ಟು ದೂರುಗಳು ಬಂದಿದ್ದು, ಇದನ್ನು ಸರಿಪಡಿಸುವಂತೆ ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಲಾಯಿತು.
ತಾಲೂಕಿನಲ್ಲಿ ಯಾವುದೇ ರೀತಿಯ ಡೆಂಘೀ ಪ್ರಕರಣಗಳು ಇಲ್ಲ. ಹೂರಗಡೆ ಬಂದ ನಾಲ್ಕು ಜನ ಡೆಂಘೀ ಪ್ರಕರಣ ದಾಖಲಾಗಿದೆ. ಯಾವುದೇ ತೊಂದರೆ ಇಲ್ಲ, ಚಿಕಿತ್ಸೆ ಪಡೆಯುತ್ತಿದ್ದಾರೆ. ನಾವು ಸಾಕಷ್ಟು ಅರಿವು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ” ಎಂದು ತಾಲೂಕು ಆಡಳಿತ ವೈದ್ಯಾಧಿಕಾರಿ ಸಭೆಯಲ್ಲಿ ಮಾಹಿತಿ ನೀಡಿದರು.
ಮಾನವ ಮತ್ತು ಪ್ರಾಣಿಗಳ ಸಂಘರ್ಷ ತಡೆಯುವ ನಿಟ್ಟಿನಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಕಾರ್ಯ ಮಂಚಹಳ್ಳಿ ಗ್ರಾಮದವರೆಗೆ ಮಾಡಲಾಗಿದೆ ಮತ್ತು ಹೆಚ್ಚಿನ ಅನುದಾನ ನೀಡುವಂತೆ ಅರಣ್ಯಾಧಿಕಾರಿ ಶಾಸಕರಲ್ಲಿ ಮನವಿ ಮಾಡಿಕೊಂಡರು. ಶಾಸಕರು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅನುದಾನ ಬಿಡುಗಡೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಕಾಡು ಪ್ರಾಣಿಗಳ ತೊಂದರೆಗೆ ಒಳಗಾಗಿರುವ ರೈತರಿಗೆ ಪರಿಹಾರವನ್ನು ಸರ್ಕಾರದ ನಿಗದಿ ಪಡಿಸಿದ ದರದಂತೆ ಬೆಳೆ ಪರಿಹಾರ ನೀಡಲಾಗುತ್ತಿದೆ. ಪ್ರಾಣಿಗಳ ಹಾವಳಿಯನ್ನು ತಪ್ಪಿಸಿಲು ಯಾವುದೇ ಹಾನಿ ಆಗದಂತೆ ತಡೆಗಟ್ಟಲು ತಂಡ ರಚಿಸಿ ಎಂದು ಸೂಚನೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ್ ಮಾತನಾಡಿ, ಸ್ಪೂರ್ತಿ ಸಿಂಚನ ಎಂಬ ಕಾರ್ಯಕ್ರಮದ ಮೂಲಕ 1000 ಎಸ್ ಎಸ್ ಎಲ್ ಸಿ ಮಕ್ಕಳಿಗೆ ನೀಡಿದ ತರಬೇತಿಯು ಉತ್ತಮ ಫಲಿತಾಂಶ ನೀಡಿದೆ. ಅದನ್ನೇ ಮುಂದುವರಿಸಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿಕೊಂಡರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಹೇಮಾವತಿ ಮಾತನಾಡಿ, “ತಾಲೂಕಿನ ಕೋಟೆಕೆರೆ ಮತ್ತು ಯಡವನಹಳ್ಳಿಯಲ್ಲಿ ಅಂಗನವಾಡಿ ನಡೆಸಲು ಬದಲಿ ಖಾಲಿ ನಿವೇಶನ ದೊರಕಿಸಿದರೆ ಅಂಗನವಾಡಿ ಕೇಂದ್ರ ತೆರೆಯಲು ಸೂಕ್ತ ಹಾಗೂ ತಾಲೂಕಿನ 37 ಕಟ್ಟಡಗಳ ರಿಪೇರಿ ಸೇರಿದಂತೆ 27 ಕಟ್ಟಡಗಳಿಗೆ ಶೌಚಾಲಯ ಒದಗಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ವಿವಿಧ ಇಲಾಖೆಯ ಅಭಿವೃದ್ಧಿ ಕಾರ್ಯಗಳು ಹಾಗೂ ಆಗಬೇಕಾದಂತ ಕೆಲಸಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕೆಂದು ಶಾಸಕ ಗಣೇಶ್ ಪ್ರಸಾದ್ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನು ಓದಿದ್ದೀರಾ? ಅಪರ್ಣಾ ಮತ್ತು ಕ್ಯಾನ್ಸರ್ | ಜನರನ್ನು ಕಾಡುತ್ತಿರುವ ಅನಿರೀಕ್ಷಿತ ಸಾವುಗಳು
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಟಿ ರಮೇಶ್ ಬಾಬು, ತಾ.ಪ. ಇಓ ರಾಮಲಿಂಗಯ್ಯ, ಟಿಎಪಿಸಿಎಂಎಸ್ ಅಧ್ಯಕ್ಷ ಅಲತ್ತೂರು ಜಯರಾಂ, ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಬಸವರಾಜ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
