ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳು ಇಂದು ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳ ಮಹಿಳೆಯರ ಜೀವನದಲ್ಲಿ ಹೊಸ ಹುರುಪು ಮೂಡಿಸಿದೆ. ದಿನ ನಿತ್ಯ ಬುತ್ತಿ ಕಟ್ಟಿಕೊಂಡು ಕೂಲಿ ಕೆಲಸಕ್ಕೆ ಹೋಗುವ ತಾಯಂದಿರಿಗೆ ಶಕ್ತಿ ಯೋಜನೆ ಬಸ್ ದುಡಿಯಲು ಮತ್ತಷ್ಟು ಶಕ್ತಿ ತುಂಬಿದೆ. ಗೃಹಲಕ್ಷ್ಮಿಯ 2000 ದುಡ್ಡು ಒಳ್ಳೆಯ ಕೆಲಸಗಳಿಗೆ ಬಳಕೆಯಾಗುತ್ತಿದೆ.
ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡಿದವರ ಬಾಯಿ ಮುಚ್ಚಿಸಿವೆ.
ಗ್ಯಾರಂಟಿ ಯೋಜನೆಗಳನ್ನು ಸದ್ಬಳಕೆ ಮಾಡುವ ಮೂಲಕ ಬೆಳಗಾವಿ ಜಿಲ್ಲೆಯ ಹಲವು ಮಹಿಳೆಯರು ಸುದ್ದಿಯಾಗಿದ್ದಾರೆ. ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಯಾದ ದಿನ ಅತ್ಯಂತ ಸಂತಸದಿಂದ ಸರ್ಕಾರಿ ಬಸ್ಸಿನ ಮೆಟ್ಟಿಲುಗಳಿಗೆ ನಮಸ್ಕರಿಸಿ ಪ್ರಯಾಣ ಬೆಳೆಸಿದ್ದ ಮಹಿಳೆ ಬೆಳಗಾವಿ ಜಿಲ್ಲೆಯ ಸಂಗೊಳ್ಳಿಯ ನಿಂಗವ್ವ ರಾಜ್ಯ ಮಾತ್ರವಲ್ಲದೆ, ದೇಶಾದ್ಯಂತ ಸುದ್ದಿಯಾಗಿದ್ದರು.
ಶಕ್ತಿ ಯೋಜನೆಗೆ ಶಕ್ತಿ ತುಂಬಿದ ಸಂಗೊಳ್ಳಿಯ ಸಂಗವ್ವ
ಬೆಳಗಾವಿ ಜಿಲ್ಲೆಯ ಸಂಗೊಳ್ಳಿ ಗ್ರಾಮದ ನಿಂಗವ್ವ ಸಿಂಗಾಡಿ ಎಂಬ ಅಜ್ಜಿಯು ಸವದತ್ತಿಯಲ್ಲಿ ತನ್ನ ಮೊಮ್ಮಗನ ಮನೆ ಗೃಹ ಪ್ರವೇಶಕ್ಕೆ ಹೊರಟಿದ್ದರು. ಈ ಸಂದರ್ಭದಲ್ಲಿ ಧಾರವಾಡ-ಗೋಕಾಕ್ ಬಸ್ ಏರುವಾಗ ಆ ಬಸ್ಗೆ ಹಣೆಹಚ್ಚಿ ನಮಸ್ಕಾರ ಮಾಡಿದ್ದರು. ಈ ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿತ್ತು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದರು.

ಸವದತ್ತಿ ತಾಲೂಕಿನ ಮರಕುಂಬಿ ಗ್ರಾಮದ ವಿಶ್ವನಾಥ ಗುರಕ್ಕನವರ ಮೃತ ಪಟ್ಟ ಸಂದರ್ಭದಲ್ಲಿ ಅವರ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ವಿಶ್ವನಾಥ ಅವರ ತಾಯಿ ನೀಲವ್ವ ಅಳುತ್ತಲೇ, ‘ಅಮ್ಮ ನೀನು ಬದುಕಲು ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರು. ಬರುತ್ತದೆ ಬಿಡು’ ಎಂದು ಸಾಯುವುದಕ್ಕೂ ಮುನ್ನ ಮಗ ಹೇಳಿದ್ದನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದು ಗ್ಯಾರಂಟಿ ಯೋಜನೆ ಮಹತ್ವವನ್ನು ರಾಜ್ಯದ ಜನರಿಗೆ ಮನವರಿಕೆ ಮಾಡಿತ್ತು. ಬಳಿಕ ಆಕೆಗೆ ಇಡೀ ವರ್ಷದ ಮೊತ್ತವನ್ನು ಇಂಡಿಗಂಟಿನ ರೂಪದಲ್ಲಿ ನೀಡಲಾಗಿತ್ತು.
ಶಕ್ತಿ ಯೋಜನೆ ಜಾರಿಯಾದ ದಿನ ಅತ್ಯಂತ ಸಂತಸದಿಂದ ಸರ್ಕಾರಿ ಬಸ್ಸಿನ ಮೆಟ್ಟಿಲುಗಳಿಗೆ ನಮಸ್ಕರಿಸಿ ಪ್ರಯಾಣ ಬೆಳೆಸಿದ್ದ ಬೆಳಗಾವಿ ಜಿಲ್ಲೆಯ ಸಂಗೊಳ್ಳಿಯ ಸಂಗವ್ವ ಅವರನ್ನು ಇಂದು ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಭೇಟಿಯಾದದ್ದು ನನ್ನಲ್ಲಿ ಅಚ್ಚರಿ ಮತ್ತು ಖುಷಿಯ ಜೊತೆಗೆ ಸಾರ್ಥಕ್ಯದ ಭಾವ ಮೂಡಿಸಿತು.
— Siddaramaiah (@siddaramaiah) September 3, 2023
ಮಹಿಳೆಯರ ಸಬಲೀಕರಣಕ್ಕೆ… pic.twitter.com/oYoHT1UL9k
ಬಡವರಿಗೆ ಬೆಳಕಾದ ಗೃಹ ಲಕ್ಷ್ಮೀ
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮನಿಹಾಳ ಗ್ರಾಮದ ಮಹಿಳೆ ಸಕ್ಕುಬಾಯಿ ಕರದಿನ ಎಂಬವವರು ಗೃಹಲಕ್ಷ್ಮೀ ಹಣದಲ್ಲಿ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು.
ಬೆಳಗಾವಿಯ ಅನಗೊಳದ ಅನಿತಾ ಎಂಬ ಮಹಿಳೆ ತನ್ನ ಪತಿ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಗೃಹಲಕ್ಷ್ಮೀ ಹಣದಲ್ಲಿ ಮಾಡಿಸಿದ್ದರು.
ಗೃಹಲಕ್ಷ್ಮಿ ಯೋಜನೆ ಹಣದಲ್ಲಿ ಊರಿಗೆ ಹೋಳಿಗೆ ಊಟ ಹಾಕಿಸಿದ ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಎಂಬ ಅಜ್ಜಿಗೆ ಸಿಎಂ ಸಿದ್ದರಾಮಯ್ಯನವರು ಸನ್ಮಾನಿಸಿ ಅಭಿನಂದಿಸಿದ್ದರು.

ಗೋಕಾಕ್ ತಾಲೂಕಿನ ಕೌಜಲಗಿ ಗ್ರಾಮದ ಬಾಗವ್ವಾ ನೀಲಪ್ಪ ಸಣ್ಣಕ್ಕಿ ಎಂಬ ಮಹಿಳೆ, ತನ್ನ ಮಗ ರಮೇಶ ನೀಲಪ್ಪ ಸಣ್ಣಕ್ಕಿಗೆ ದ್ವಿಚಕ್ರ ವಾಹನ ಕೊಡಿಸಿದ್ದರು.
ರಾಯಬಾಗ ತಾಲೂಕಿನ ಮಂಟೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಮಲ್ಲವ್ವ ಮೇಟಿ ತಮ್ಮ ಗ್ರಾಮದಲ್ಲಿ ಗ್ರಂಥಾಲಯ ತೆರೆದು ಓದುವ ಮಕ್ಕಳ ಕೈಗೆ ಪುಸ್ತಕ ಸಿಗುವಂತೆ ಮಾಡಿದ್ದರು.
ರೈತ ಮಹಿಳೆಗೆ ಆಸರೆಯಾದ ಗೃಹಲಕ್ಷ್ಮೀ
ಗೋಕಾಕ್ ತಾಲೂಕಿನ ತವಗ ಗ್ರಾಮದ ಬಸವ್ವ ಶಿವಪ್ಪ ಬುಳ್ಳಿ ಮಹಿಳೆ ಕೃಷಿ ಚಟುವಟಿಕೆಗಾಗಿ ಗೃಹಲಕ್ಷ್ಮೀ ಯೋಜನೆಯ 22 ಸಾವಿರ ರೂ. ಹಣದಿಂದ ಒಂದು ಎತ್ತನ್ನು ಖರೀದಿಸಿದ್ದು ಈ ಮೂಲಕ ಕೃಷಿ ಚಟುವಟಿಕೆಗೂ ಗೃಹಲಕ್ಷ್ಮೀ ನೆರವಾಗಿದೆ.
ಬೆಳಗಾವಿ ಜಿಲ್ಲೆಯ ಕುಕಡೊಳ್ಳಿ ಗ್ರಾಮದ ತಾಯವ್ವ ಲಕಮೋಜಿ ಗೃಹಲಕ್ಷ್ಮೀ ಹಣ ಕೂಡಿಟ್ಟು ಕಾರ ಕುಟ್ಟುವ ಮೇಷಿನ್ ಖರೀದಿ ಮಾಡಿ ಸ್ವಾವಲಂಬಿ ಉದ್ಯೋಗ ಮಾಡುತ್ತಿದ್ದಾರೆ.

ಶಕ್ತಿ ಯೋಜನೆ ಮರು ಪರಿಷ್ಕರಿಸುತ್ತೇವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ನೀಡಿದ್ದ ಹೇಳಿಕೆಯು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದನ್ನೇ ಅಸ್ತ ಮಾಡಿಕೊಂಡಿದ್ದ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್, ಶಕ್ತಿ ಯೋಜನೆ ಬಂದ್ ಆಗಲಿದೆ ಎಂದು ಅಪಪ್ರಚಾರ ನಡೆಸಿದ್ದರು. ಆದರೆ, ಆ ಬಳಿಕ ಸ್ವತಃ ಸಿದ್ದರಾಮಯ್ಯನವರೆ ಸ್ಪಷ್ಟಪಡಿಸಿ, ಯಾವುದೇ ಕಾರಣಕ್ಕೂ ನಮ್ಮ ಗ್ಯಾರಂಟಿಗಳು ಬಂದ್ ಆಗಲ್ಲ ಎಂದು ತಿಳಿಸಿದ್ದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಯಾರು ಎಷ್ಟೆ ಅಪಪ್ರಚಾರ ಮಾಡಿದರೂ ಬೆಳಗಾವಿ ಜಿಲ್ಲೆಯ ಮಹಿಳೆಯರು ಗ್ಯಾರಂಟಿ ಯೋಜನೆಯ ಲಾಭವನ್ನು ಸದುಪಯೋಗಪಡಿಸಿಕೊಂಡು ಗ್ಯಾರಂಟಿ ಯೋಜನೆಗಳ ಗೌರವವನ್ನು ಹೆಚ್ಚಿಸಿದ್ದಾರೆ ಹಾಗೂ ಯೋಜನೆಗಳ ಮಹತ್ವದ ಕುರಿತು ರಾಜ್ಯದ ಜನರಿಗೆ ಮನವರಿಕೆ ಮಾಡಿಸಿರುವುದಂತೂ ವಾಸ್ತವ.





ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು