- ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಇನ್ಸ್ಪೆಕ್ಟರ್
- ಹಾಸನ ಜಿಲ್ಲೆಯ ಉದ್ದೂರಿನಲ್ಲಿ ಜೂ. 5 ಅಂತ್ಯಸಂಸ್ಕಾರ
ಕುಟುಂಬಕ್ಕಿಂತಲೂ ಹೆಚ್ಚಾಗಿ ವೃತ್ತಿಯನ್ನೇ ಪ್ರೀತಿಸುತ್ತಿದ್ದ ‘ಪೀಪಲ್ಸ್ ಮ್ಯಾನ್’ ಖ್ಯಾತಿಯ ಇನ್ಸ್ಪೆಕ್ಟರ್ ಮಂಜುನಾಥ್ ನಿಧನರಾಗಿದ್ದಾರೆ.
ಮೃತ ಮಂಜುನಾಥ್ ಬೆಂಗಳೂರಿನ ಜಯನಗರ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಜನವರಿಯಿಂದ ಮಂಜುನಾಥ್ ಅವರು ಲಿವರ್ ಕ್ಯಾನ್ಸ್ರ್ನಿಂದ ಬಳಲುತ್ತಿದ್ದರು. ಲಿವರ್ ಕ್ಯಾನ್ಸರ್ ಕೊನೆ ಹಂತದಲ್ಲಿರುವಾಗ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪತ್ನಿ ಹಾಗೂ ಓರ್ವ ಪುತ್ರನನ್ನು ಮಂಜುನಾಥ್ ಅಗಲಿದ್ದಾರೆ.
ಮೃತದೇಹವನ್ನು ಅವರ ಹುಟ್ಟೂರು ಹಾಸನಕ್ಕೆ ಕೊಂಡೊಯ್ಯಲಾಗಿದ್ದು, ಹಾಸನ ಜಿಲ್ಲೆಯ ಉದ್ದೂರಿನಲ್ಲಿ ಜೂನ್ 5 ಅಂತ್ಯಸಂಸ್ಕಾರ ನಡೆಯಲಿದೆ.
ಯಾರು ಈ ಮಂಜುನಾಥ್?
ಹಾಸನ ಮೂಲದವಾರದ ಮಂಜುನಾಥ್ ಇವರು ಯು ಆರ್ 2007ನೇ ಬ್ಯಾಚ್ನ ಪೊಲೀಸ್ ಇನ್ಸ್ಪೆಕ್ಟರ್ ಆಗಿ ವೃತ್ತಿಗೆ ಸೇರಿಕೊಂಡರು. ಮುಖ್ಯಮಂತ್ರಿ ಪದಕವನ್ನು 2021ರಲ್ಲಿ ಪಡೆದಿದ್ದರು. ಜತೆಗೆ ರಾಜ್ಯದ ಹಲವಾರು ಸಂಸ್ಥೆಗಳಿಂದ ಗುರುತಿಸಿ ಸನ್ಮಾನಿಸಲಾಗಿತ್ತು.
ರಾಜ್ಯದ ಮೈಸೂರು ಪೊಲೀಸ್ ಅಕಾಡೆಮಿಯಲ್ಲಿ ತಮ್ಮ ಮೊದಲ ವೃತ್ತಿ ಜೀವನವನ್ನು ಆರಂಭಿಸಿದ್ದರು. ಅಕಾಡೆಮಿಯಲ್ಲಿ ಯಶಸ್ವಿ ಕಂಡ ಬಳಿಕ ಅವರು ಬೆಳಗಾವಿ, ಚಾಮರಾಜನಗರ, ಬೇಲೂರು ಮತ್ತು ಕರ್ನಾಟಕದ ಹಲವಾರು ಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದರು. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 15 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಈ ಸಮಯದಲ್ಲಿ ಹಲವಾರು ಪ್ರಕರಣ ಪರಿಹರಿಸಿ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದಾರೆ. ಅವರನ್ನು ಕೆಲವೆಡೆ ‘ಪೀಪಲ್ಸ್ ಮ್ಯಾನ್’ ಎಂದು ಕರೆಯಲಾಗುತ್ತಿತ್ತು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 24/7 ಹೋಟೆಲ್ ತೆರೆಯಲು ಅನುಮತಿ ನೀಡಿ: ಸರ್ಕಾರಕ್ಕೆ ಮನವಿ ಸಲ್ಲಿಸಿದ ಬಿಬಿಎಚ್ಎ
ದಕ್ಷ ಹಾಗೂ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುವ ಮೂಲಕ ಹಂತ ಹಂತವಾಗಿ ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಾ ಬಂದಿದ್ದ ಮಂಜುನಾಥ್ ಬೆಂಗಳೂರಿನ ಜಯನಗರ ಠಾಣೆಗೆ ವರ್ಗಾವಣೆಯಾಗಿ ಬಂದಿದ್ದರು. ಇನ್ಸ್ಪೆಕ್ಟರ್ ಮಂಜುನಾಥ್ ಅವರಿಗೆ ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದು, ಪತ್ನಿ ಹಾಗೂ ಚಿಕ್ಕ ಮಗನಿದ್ದಾನೆ.
ಮನೆ, ಕಟುಂಬಕ್ಕೆ ಸಮಯ ಇಟ್ಟಿದ್ದಕ್ಕಿಂತ ಹೆಚ್ಚಾಗಿ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅವರ ಆರೋಗ್ಯದಲ್ಲಿ ತೀವ್ರ ಏರುಪೇರಾದ ಕಾರಣ ಚಿಕಿತ್ಸೆಗಾಗಿ ಸಾವಿಗೂ ಮುನ್ನ ಕೇವಲ 15 ದಿನ ರಜೆ ತೆಗೆದುಕೊಂಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.