ಬಾಡೂಟದ ಬಗ್ಗೆ ಕೆಲವು ಮಾಧ್ಯಮಗಳು ತಪ್ಪಾಗಿ ಬಿಂಬಿಸುತ್ತಿವೆ. ಸಸ್ಯಹಾರ ಶ್ರೇಷ್ಟತೆಯ ವ್ಯಸನದಲ್ಲಿ ಕೆಲವು ಜನರಿದ್ದಾರೆ. ಅವರಿಗೆ ನಾವು ಹೇಳುವುದು ನಿಮ್ಮ ಮಡಿವಂತಿಕೆಯನ್ನು ಹೋಗಲಾಡಿಸುವ ಕಾರಣಕ್ಕಾಗಿ ನಾವು ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟವನ್ನು ಕೇಳುತ್ತಿದ್ದೇವೆ. ಈಗಾಗಲೇ ಪೂರ್ವ ನಿರ್ಧಾರಿತ ಆಹಾರಗಳ ಜೊತೆ ಒಂದು ಹೊತ್ತು ಬಾಡೂಟ ಕೊಡಿ ಎಂದಷ್ಟೇ ಕೇಳುತ್ತಿದ್ದೇವೆ ಎಂದು ಪ್ರಗತಿಪರ ಸಂಘಟನೆಯ ಟಿ.ಡಿ.ನಾಗರಾಜು ಸ್ಪಷ್ಟಪಡಿಸಿದರು.

ಅವರು ಮಂಡ್ಯ ಜಿಲ್ಲೆಯ ಪ್ರಗತಿಪರ ಸಂಘಟನೆಯ ಮುಖಂಡರು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಮಧ್ಯಾಹ್ನ ಬಾಡೂಟ ಗಾರೆಪರ ಮಾಡಿ ಸಹಪಂಕ್ತಿ ಭೋಜನ ಸವಿಯುವ ಮೂಲಕ ಸಾಹಿತ್ಯ ಸಮ್ಮೇಳನದಲ್ಲೂ ಬಾಡೂಟ ವಿತರಿಸುವಂತೆ ಆಗ್ರಹಿಸಿ ವಿಭಿನ್ನವಾಗಿ ನಡೆಸಿದ ಹೋರಾಟದಲ್ಲಿ ಮಾತನಾಡಿದರು.
ಹನಕೆರೆ ಗಂಗರಾಜು ಮಾತನಾಡಿ, ಸಾಹಿತ್ಯ ಸಮ್ಮೇಳನ ನಮ್ಮ ಮಂಡ್ಯದಲ್ಲಿ ನಡೆಯುತ್ತಿರುವುದು ಬಹಳ ಸಂತೋಷದ ವಿಚಾರ. ಮಾಂಸಾಹಾರಿ ಮತ್ತು ಸಸ್ಯಾಹಾರಿಗಳ ನಡುವೆ ಗೊಂದಲ ಮೂಡಿಸದೆ ಸರಕಾರ ಇಬ್ಬರನ್ನು ಸಮಾನವಾಗಿ ನೋಡಬೇಕು. ಮಂಡ್ಯದ ಆಹಾರವಾದ ಬಾಡೂಟದ ಸೊಗಡನ್ನು ಎಲ್ಲರಿಗೂ ಹಂಚಬೇಕು. ಎಲ್ಲರ ತೆರಿಗೆ ಹಣದಿಂದ ಕಾರ್ಯಕ್ರಮ ನಡೆಯುತ್ತಿದೆ ಯಾರಿಗೂ ಆಹಾರದಲ್ಲಿ ತಾರತಮ್ಯ ಆಗಬಾರದು. ಹೊರ ಜಿಲ್ಲೆ ಮತ್ತು ರಾಜ್ಯದಿಂದ ಬಂದವರಿಗೆ ಮಂಡ್ಯದ ಸಾಂಪ್ರದಾಯಿಕ ಬಾಡೂಟವನ್ನು ಉಣಬಡಿಸಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಮಂಡ್ಯ | ಆಹಾರ ಕ್ರಾಂತಿಗೆ ಕರೆ ನೀಡಿದ ಮಂಡ್ಯದ ಜನತೆ
ಉಪನ್ಯಾಸಕರಾದ ರಾಜೇಂದ್ರ ಬಾಬು ಮಾತನಾಡಿ, ಬಾಡೂಟ ನಮ್ಮ ಆಹಾರ ಪದ್ಧತಿ ಅಷ್ಟೇ ಅಲ್ಲ ಅದು ನಮ್ಮ ಸಂಸ್ಕೃತಿ. ಸಾಹಿತ್ಯ ವಲಯ ಕೂಡ ಆಹಾರ ಸಂಸ್ಕೃತಿಯನ್ನು ಎತ್ತಿ ಹಿಡಿಯುವುದು ಮುಖ್ಯ. ಆ ಕಾರಣಕ್ಕಾಗಿ ಸಾಹಿತ್ಯ ಸಮ್ಮೇಳದಲ್ಲಿ ಬಾಡೂಟ ಕೊಡಬೇಕು ಎನ್ನುವುದು ನಮ್ಮ ಒತ್ತಾಯ. ಮಾನವನ ಇತಿಹಾಸದ ಪ್ರಾರಂಭದಲ್ಲಿ ಮಾಂಸಾಹಾರಿಯಾಗಿದ್ದ ಈಗಲೂ ಮಾಂಸಾಹಾರಿಯೇ ಆಗಿದ್ದಾನೆ. ಬಾಡೂಟ ತಿನ್ನುವವರು ಕನಿಷ್ಠ, ಸಸ್ಯಹಾರ ತಿನ್ನುವವರು ಶ್ರೇಷ್ಠ ಎಂದು ಬಿಂಬಿಸಿ ಆಹಾರ ಸಂಸ್ಕೃತಿಯನ್ನು ಅಸ್ಪೃಶ್ಯತೆಯ ಅಸ್ತ್ರವಾಗಿ ಬಳಸ ಹೊರಟಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ನೆಲದನಿ ಬಳಗದ ಮಂಗಲ ಲಂಕೇಶ್ ಮಾತನಾಡಿ, 86 ಸಾಹಿತ್ಯ ಸಮ್ಮೇಳನಗಳಿಂದ ನಡೆದುಕೊಂಡು ಬರುತ್ತಿರುವ ಆಹಾರ ತಾರತಮ್ಯ ಈ ಸಮ್ಮೇಳನದಲ್ಲಿ ಕೊನೆಯಾಗಬೇಕು. ಅಂದು ಕುವೆಂಪು ವಿಚಾರ ಕ್ರಾಂತಿಗೆ ಆಹ್ವಾನ ಕೊಟ್ಟಿದ್ದರು, ಇಂದು ನಾವು ಆಹಾರ ಕ್ರಾಂತಿಗೆ ಕರೆ ಕೊಡುತ್ತಿದ್ದೇವೆ. ನಮ್ಮ ಮಣ್ಣಿನ ಆಸ್ಮಿತೆಯನ್ನು ಸಮ್ಮೇಳನದ ಸಂಘಟಕರಿಗೆ ನೆನಪಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಈ ಕೆಲಸವನ್ನು ಮಾಡಬೇಕಾದ ಸಾಹಿತಿಗಳು ಹಾಗೂ ಪ್ರಗತಿಪರರು ಎಲ್ಲಿ ಅವಿತುಕೊಂಡಿದ್ದಾರೆ. ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಬೇಕು ಆದರೆ ಮಂಡ್ಯದ ಬಾಡೂಟ ಏಕೆ ಬೇಡ ಎಂದು ಪ್ರಶ್ನಿಸಿದರು.
ಕರುನಾಡ ಸೇವಕರು ಸಂಘಟನೆಯ ಎಂ.ಬಿ. ನಾಗಣ್ಣ ಮಾತನಾಡಿ, ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರಿಗಳಿಗೆ ಅಘೋಷಿತ ಬಹಿಷ್ಕಾರವನ್ನು ಮಾಡಿಕೊಂಡು ಬರಲಾಗುತ್ತಿದೆ. ಈ ಚಾರಿತ್ರಿಕವಾದ ವಂಚನೆಯನ್ನು, ತಪ್ಪು ನಿರ್ಧಾರವನ್ನು ಸರಿಪಡಿಸುವ ಸದಾವಕಾಶ ಮಂಡ್ಯದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಕ್ಕಿದೆ. 80ರಷ್ಟು ಜನರ ಆಹಾರವಾದ ಬಾಡೂಟವನ್ನು ಸಾಹಿತ್ಯ ಸಮ್ಮೇಳನದಲ್ಲಿ ಕಡ್ಡಾಯವಾಗಿ ಕೊಡಬೇಕೆಂದು ಸಂಘಟಕರಿಗೆ ಅಗ್ರಪಡಿಸುತ್ತೇನೆ ಎಂದರು.
ಈ ಬಾಡೂಟದ ಗಾರೆಪರದ ಸಂದರ್ಭದಲ್ಲಿ ನ್ಯಾಯವಾದಿ ಬಿ.ಟಿ.ವಿಶ್ವನಾಥ್, ದಸಂಸ ಎಂ.ವಿ.ಕೃಷ್ಣ, ಕರವೇ ಮುಖಂಡ ಹೆಚ್.ಡಿ. ಜಯರಾಮ್, ಚಿತ್ರಕೂಟದ ಅರವಿಂದ ಪ್ರಭು, ಸಮಾನ ಮನಸ್ಕರ ವೇದಿಕೆ ನರಸಿಂಹಮೂರ್ತಿ, ಪ್ರೊ.ಹುಲ್ಕೆರೆ ಮಹದೇವ, ಬೂದನೂರು ಸತೀಶ್, ನುಡಿ ಕರ್ನಾಟಕ ಜಗದೀಶ್, ವಕೀಲ ಚೀರನಹಳ್ಳಿ ಲಕ್ಷ್ಮಣ್, ಜಾಗೃತ ಕರ್ನಾಟಕದ ನಗರಕೆರೆ ಜಗದೀಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.