ವಾಹನ ಚಾಲಕರು ರಸ್ತೆ ಸಂಚಾರ ಮಾಡುವ ವೇಳೆಯಲ್ಲಿ ಸರಿಯಾದ ಮಾರ್ಗಸೂಚಿಗಳನ್ನು ಅನುಸರಿಸದೇ, ಸೀಟ್ ಬೇಲ್ಟ್, ಹೆಲ್ಮೆಟ್ಟಿನಂತಹ ಸುರಕ್ಷಿತ ಸಾಮಗ್ರಿಗಳನ್ನು ಬಳಸದೇ, ಆಲ್ಕೋಹಾಲ್ ಕುಡಿದು ಗಾಡಿ ಓಡಿಸುವುದು ಅಪರಾಧವಾಗಿರುತ್ತದೆ ಮತ್ತು ದಂಡ ಕಟ್ಟುವುದು ಅನಿರ್ವಾವಾಗಿರುತ್ತದೆ ಎಂದು ಪೊಲೀಸ್ ಅಧಿಕಾರಿ ಶಿವಾನಂದ ಹೊಂಬಳಿ ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸಂಚಾರ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಬಹಳಷ್ಟು ಸವಾರರು ತಮ್ಮ ಗಾಡಿಗಳಿಗೆ ಅವಶ್ಯಕವಾದ ಇನ್ಷೂರೆನ್ಸ್ ಮತ್ತು ವಾಹನ ಚಾಲನಾ ಪರವಾನಗಿ, ರಕ್ಷಣಾ ಸಾಮಗ್ರಿ ಇಲ್ಲದೆ ಕಳ್ಳರಂತೆ ತಲೆ ಮರಿಸಿಕೊಂಡು ಅವಸರದಲ್ಲಿ ಹೋಗುತ್ತಾರೆ. ಆದ್ದರಿಂದ ರಸ್ತೆಗಳಲ್ಲಿ ಅಪಘಾತಗಳಾಗಿ ಸಾವು-ನೋವುಗಳು ಸಂಭವಿಸುವುದು ಸಹಜವಾಗಿದೆ. ಇದರ ಬಗ್ಗೆ ಜನರು ಜಾಗೃತಿ ವಹಿಸುವುದು ಅವಶ್ಯಕವಾಗಿದೆ. ಸೂಕ್ತ ದಾಖಲಾತಿಗಳನ್ನು ಹೊಂದಿ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಬೇಕು” ಎಂದು ಸಲಹೆ ನೀಡದರು.
ರೋಶನಿ ಕಾರ್ನವೆಂಟ್ನ ಸುಪೀರಿಯರ್ ಸಿಸ್ಟರ್ ಜಾನೆಟ್ ಮಾತನಾಡಿ, “ಪ್ರಸ್ತುತ ದಿನಗಳಲ್ಲಿ ರಸ್ತೆ ಸಂಚಾರದ ವೇಳೆಯಲ್ಲಿ ಬಹಳಷ್ಟು ಅಪಘಾತಗಳು ಸಂಭವಿಸುತ್ತಿದ್ದು, ಇವುಗಳಲ್ಲಿ ಚಾಲನಾ ಪರವಾನಗಿ ಇಲ್ಲದೆ, ಇನ್ಷೂರೆನ್ಸ್ ಕಟ್ಟದೇ ಇರುವ ಸಾಕಷ್ಟು ಗಾಡಿಗಳು ಕಂಡುಬರುತ್ತಿವೆ. ಆದ್ದರಿಂದ ಹಾನಗಲ್ ರೋಶನಿ ಸಮಾಜ ಸೇವಾ ಸಂಸ್ಥೆ ಆಲದಕಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಇನಾಂದ್ಯಾಮನಕೊಪ್ಪ, ಚಂದ್ರ, ರಾಮಾಪುರ, ಹುಣಸಿಕಟ್ಟಿ, ಗ್ರಾಮಗಳಲ್ಲಿ ಪೋಲಿಸ್ ವೃತ್ತ ನೀರಿಕ್ಷರ ಇಲಾಖೆಯ ಸಹಯೋಗದೊಂದಿಗೆ ಒಂದು ವಾರ ರಸ್ತೆ ಸಂಚಾರ ಜಾಗೃತಿ ಅಭಿಯಾನ ಸಪ್ತಾಹ ಹಮ್ಮಿಕೊಂಡು ವಾಹನಗಳ ಸಮೀಕ್ಷೆ ಮಾಡಿ ಚಾಲನಾ ಪರವಾನಗಿ, ಇನ್ಷೂರನ್ಸ್ ಹೊಂದದೆ ಇರುವ ಮಾಲೀಕರನ್ನು ಗುರುತಿಸಿ ಅವಶ್ಯಕ ದಾಖಲಾತಿ ಹೊಂದುವಂತೆ ಮನವರಿಕೆ ಮಾಡಲಾಗುತ್ತಿದೆ” ಎಂದು ಹೇಳಿದರು.
ಪಂಚಾಯತಿ ಉಪಾಧ್ಯಕ್ಷೆ ಅಕ್ಕಮ್ಮ ಮದ್ದಿಯವರ ಮಾತನಾಡಿ, “ಮನೆಯಲ್ಲಿ ತಾಯಂದಿರು ಕುಟುಂಬದ ಹೆಚ್ಚು ಜವಾಬ್ದಾರಿಗಳನ್ನು ನಿಭಾಯಿಸುವ ವಿಶೇಷ ಗುಣ ಹೊಂದಿದ್ದು, ರಸ್ತೆ ಸಂಚಾರದ ಜಾಗೃತಿ ಅಭಿಯಾನ ನಮ್ಮ ನಮ್ಮ ಮನೆಗಳಿಂದಲೇ ಪ್ರಾರಂಭವಾಗಬೇಕಾಗಿದೆ. ಏಕೆಂದರೆ ನಾವು ವಾಹನಗಳಲ್ಲಿ ಸಂಚರಿಸುವ ಮೊದಲು ಚಾಲಕನಿಗೆ ಅವಶ್ಯಕ ದಾಖಲಾತಿಗಳ ಬಗ್ಗೆ ಆಗಾಗ ನೆನಪಿಸುವುದು ಮತ್ತು ಅವುಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳವಂತೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಅಲ್ಲದೆ ಅಪ್ರಾಪ್ತ ಮಕ್ಕಳಿಗೆ ಮನೆಯಲ್ಲಿ ಗಾಡಿ ಓಡಿಸಲು ಹೇಳುವುದನ್ನು ತಡೆಯುವುದು ಮುಖ್ಯವಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ರಾಜಕೀಯ ಲಾಭಕ್ಕಾಗಿ ಸದಾಶಿವ ಆಯೋಗ ವರದಿಗೆ ಶಾಸಕ ಪ್ರಭು ಚವ್ಹಾಣ ವಿರೋಧ: ಸುಧಾಕರ ಕೊಳ್ಳೂರ್
ಕಾರ್ಯಕ್ರಮದಲ್ಲಿ ರೋಶನಿ ಸಂಸ್ಥೆಯ ರಜತ ಮಹೊತ್ಸವದ ಪ್ರಯುಕ್ತ 25 ವರ್ಷಗಳಿಂದ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಮಹಿಳಾ ಫಲಾನುಭವಿಗಳನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಪಂಚಾಯಿತಿ ಅಧ್ಯಕ್ಷ ಸಾವಿತ್ರಾ ಭಂಗಿ, ಸದಸ್ಯೆ ಬಂಕಮ್ಮ ಸವಣೂರ, ಜನವೇದಿಕೆ ಮುಖಂಡ ಪಾಲಾಕ್ಷಯ್ಯ ಹಿರೇಮಠ, ರಾಮಚಂದ್ರ ಶಿಡ್ಡಾಪುರ, ಬಡಕಪ್ಪ ಬಾರಂಗಿ, ಹಿರಿಯ ನಾಗರಿಕ ಚಂದಪ್ಪ ಕಾಟಣ್ಣನವರ, ಕುಬೇರಪ್ಪ ಕಾಟಣ್ಣನವರ, ಲೋಕಪ್ಪ ತಳವಾರ, ಆದರ್ಶ ತಾಲೂಕು ಮಹಿಳಾ ಒಕ್ಕೂಟದ ಸದಸ್ಯ ರಾಜೇಶ್ವರಿ ಹನಕನಹಳ್ಳಿ, ರೇಷ್ಮಾ ಕಾಟಣ್ಣನವರ, ಮಕ್ಕಳ ಪಂಚಾಯತಿ ಸದಸ್ಯರು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಮತ್ತು ಗ್ರಾಮದ ನಾಗರಿಗರು ಇದ್ದರು.