- ‘ಸೂತಕವು ದೇವರಿಗೆ ಆಗಲ್ಲ’ ಎಂದು ಬಾಣಂತಿ, ಹಸುಗೂಸನ್ನು ಊರಿನಿಂದ ಹೊರಗಿಟ್ಟಿದ್ದ ಕುಟುಂಬಸ್ಥರು
- ತುಮಕೂರು ಸಮೀಪದ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ನಡೆದ ಘಟನೆ
ಜಗತ್ತು ವೈಜ್ಞಾನಿಕ ಕಾಲದಲ್ಲಿ ಮುಂದುವರೆಯುತ್ತಿದ್ದರೂ ಮೂಢನಂಬಿಕೆ ಇನ್ನೂ ನಮ್ಮ ನಡುವೆ ಜೀವಂತವಿದೆ ಅನ್ನುವುದಕ್ಕೆ ತುಮಕೂರು ಜಿಲ್ಲೆಯಲ್ಲಿ ನಡೆದ ಈ ಹೃದಯ ವಿದ್ರಾವಕ ಘಟನೆಯೇ ಸಾಕ್ಷಿ.
‘ಸೂತಕವು ದೇವರಿಗೆ ಆಗಲ್ಲ’ ಎಂದು ಬಾಣಂತಿ, ಹಸುಗೂಸನ್ನೇ ಊರಿನಿಂದ ಹೊರಗಿಟ್ಟಿದ್ದ ಕುಟುಂಬಸ್ಥರು, ಇದೀಗ ತಮ್ಮ ಮೌಢ್ಯ ಆಚರಣೆಯಿಂದಾಗಿ ಮಗುವನ್ನೇ ಕಳೆದುಕೊಂಡಿರುವ ಘಟನೆ ತುಮಕೂರು ಸಮೀಪದ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಗೊಲ್ಲರಹಟ್ಟಿಯ ಸಿದ್ದೇಶ್ ಮತ್ತು ವಸಂತ ದಂಪತಿಯ ಮಗು ವಿಪರೀತ ಶೀತದಿಂದ ಬಳಲಿ, ಮೃತಪಟ್ಟಿದೆ.
ಶೀತ ಹೆಚ್ಚಾಗಿದ್ದರಿಂದ ಮಗುವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಸುಗೂಸು ಕಳೆದ ಭಾನುವಾರದಂದು ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.
‘ತಮ್ಮ ದೇವರಿಗೆ ಸೂತಕ ಆಗಲ್ಲ’ ಎಂದು ಬಾಣಂತಿ, ಮಗುವನ್ನು ಕುಟುಂಬಸ್ಥರು ಊರ ಹೊರಗಿಟ್ಟಿದ್ದರು. ಮಳೆ, ಗಾಳಿಯಿದ್ದರೂ ತಾಯಿ, ಮಗು ಊರ ಹೊರಗಿನ ಚಿಕ್ಕ ಗುಡಿಸಲಿನಲ್ಲಿಯೇ ವಾಸವಿದ್ದರು. ಕುಟುಂಬಸ್ಥರ ಮೌಢ್ಯತೆಯಿಂದಾಗಿ ಒಂದು ತಿಂಗಳ ಹಸುಗೂಸು ಜೀವವೇ ಕಳೆದುಕೊಳ್ಳುವಂತಾಗಿದೆ.
ವಿಪರೀತ ಗಾಳಿ, ಮಳೆ ಇದ್ದರೂ ಸಹ ಮಗು ಮತ್ತು ತಾಯಿಯನ್ನು ಊರ ಹೊರಗೆ ಇರಿಸಲಾಗಿತ್ತು. ಇದರಿಂದ ಮಗು ಅನಾರೋಗ್ಯಕ್ಕೆ ತುತ್ತಾಗಿತ್ತೆಂದು ತಿಳಿದುಬಂದಿದೆ.

ಗ್ರಾಮದ ಸಿದ್ದೇಶ್ ಎಂಬುವವರ ಪತ್ನಿ ವಸಂತಾ ಕಳೆದ ತಿಂಗಳು 22ರಂದು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ವಸಂತಾಗೆ ಹೆರಿಗೆ ಆಗಿತ್ತು. ಹೆರಿಗೆ ವೇಳೆಯೇ ಒಂದು ಮಗು ಸಾವನ್ನಪ್ಪಿತ್ತು, ಇನ್ನೊಂದು ಮಗು ಬದುಕುಳಿದಿತ್ತು. ಏಳು ತಿಂಗಳಿಗೆ ಹೆರಿಗೆ ಆಗಿದ್ದರಿಂದ ‘ಪ್ರೀ ಮೆಚೂರ್ಡ್ ಬೇಬಿ'(ಅವಧಿಗೆ ಮೊದಲು ಜನಿಸುವುದು) ಎಂದು ಜಿಲ್ಲಾಸ್ಪತ್ರೆಯ ಐಸಿಯುನಲ್ಲಿಡಲಾಗಿತ್ತು. ಆ ಬಳಿಕ ಕಳೆದ ಜು.14ರಂದು ಆಸ್ಪತ್ರೆಯಿಂದ ‘ಡಿಸ್ಚಾರ್ಜ್’ ಮಾಡಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಮಾಸಿಕ ಸಮೀಕ್ಷೆ | 5 ಗ್ಯಾರಂಟಿ ಯೋಜನೆಗಳು ಬಿಟ್ಟಿ ಭಾಗ್ಯಗಳಲ್ಲ- ಜನತೆಯ ಹಣ ಜನತೆಯ ಕಿಸೆಗಳಿಗೆ ಮರಳಿದೆ ಅಷ್ಟೇ ಎನ್ನುತ್ತಾರೆ ರಾಜ್ಯದ ಜನ
ಆಸ್ಪತ್ರೆಯಿಂದ ಬರುತ್ತಿದ್ದಂತೆ ಕುಟುಂಬಸ್ಥರು ತಾಯಿ ಮತ್ತು ಮಗುವನ್ನು ಊರಾಚೆ ಇರುವ ಗುಡಿಸಲಿನಲ್ಲಿ ಇರಿಸಿದ್ದರು. ಹೀಗಾಗಿ ಮಳೆ, ಗಾಳಿ ನಡುವೆಯೇ ಬಾಣಂತಿ ವಸಂತ ಮತ್ತು ಹಸುಗೂಸು ಉಸಿರುಗಟ್ಟಿಸುವಂತಹ ಸಣ್ಣ ಗುಡಿಸಲಿನಲ್ಲೇ ಹಗಲು, ರಾತ್ರಿ ಇರಬೇಕಾದ ಪರಿಸ್ಥಿತಿ ಎದುರಾಗಿತ್ತು. ಈ ವಿಷಯ ತಿಳಿದ ಬಳಿಕ ಬೆಳ್ಳಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ ಗುಡಿಸಲಿಗೆ ಭೇಟಿ ನೀಡಿ, ಆಸ್ಪತ್ರೆಗೆ ದಾಖಲಾಗುವಂತೆ ಮನವೊಲಿಸಲು ಎಷ್ಟೇ ಪ್ರಯತ್ನ ಪಟ್ಟಿದ್ದರೂ ಒಪ್ಪಿರಲಿಲ್ಲ. ಈಗ ಮಗು ಪ್ರಾಣ ಕಳೆದುಕೊಂಡಿದೆ.
ಬುಡಕಟ್ಟು ಸಂಪ್ರದಾಯ ಪಾಲಿಸುವ ಗೊಲ್ಲ ಸಮುದಾಯದಲ್ಲಿ ಬಹಳ ಹಿಂದಿನಿಂದಲೂ ಈ ರೀತಿ ನಡೆದುಕೊಂಡು ಬಂದಿದೆ ಎಂದು ವರದಿಯಾಗಿದೆ. ಬಾಣಂತಿ ತಾಯಿ ಮತ್ತು ಮಗುವಿನ ಆರೈಕೆಗೆ ಸಾಕಷ್ಟು ಪ್ರಾಮುಖ್ಯತೆ ನೀಡಬೇಕಾದ ಈ ಕಾಲದಲ್ಲಿ ಈ ರೀತಿ ನಡೆದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಅಲ್ಲದೇ, ಗೊಲ್ಲ ಸಮುದಾಯದಲ್ಲಿ ಮುಟ್ಟಾದ(ಋತುಮತಿ) ಹೆಣ್ಣು ಮಕ್ಕಳನ್ನು ಕೂಡ ಒಂದು ವಾರದವರೆಗೆ ಊರಿನಿಂದ ಹೊರಗಿಡುವ ಅನಿಷ್ಟ ಪದ್ಧತಿ ಕೆಲವೆಡೆ ಇನ್ನೂ ಜಾರಿಯಲ್ಲಿದೆ. ಈ ಪದ್ಧತಿಯನ್ನು ಕೈ ಬಿಡುವಂತೆ ಮಹಿಳಾ ಹೋರಾಟಗಾರರು, ಸಂಘಟನೆಗಳು, ಮನವೊಲಿಸುತ್ತಿದ್ದಾರೆ. ಹೀಗಾಗಿ, ಕೆಲವು ಕಡೆಗಳಲ್ಲಿ ಈ ಪದ್ಧತಿಯನ್ನು ಕೈಬಿಡಲಾಗಿದ್ದರೂ, ಹಲವೆಡೆ ಇನ್ನೂ ಜಾರಿಯಲ್ಲಿದೆ ಎನ್ನುವುದು ವಿಪರ್ಯಾಸ.