ಕನಕರು ನಂಬಿಕೆಯಲ್ಲಿ ವಿಶ್ವಾಸ ಇಟ್ಟವರು. ಸಮಾಜದ ಹಲವು ವೈರುಧ್ಯಗಳಿಗೆ ಸಮಾನತೆಯ ಹಕ್ಕುಗಳನ್ನು ಒದಗಿಸಿದವರು. ದ್ವೇಷ ಇರುವಲ್ಲಿ ಪ್ರೀತಿಯ ಜೇನ ಹನಿಸಿದವರು ಎಂದು ನಿವೃತ್ತ ಶಿಕ್ಷಕ ಡಿಎಸ್ಎಸ್ ಮಾಸ್ಟರ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಅತ್ತಿಬೆಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಬಳಿಕ ಮಾತನಾಡಿದರು.
ಭಕ್ತಿ ಎನ್ನುವುದು ಆಡಂಬರವಾಗಬಾರದು. ದೇವಾಲಯಗಳು ವ್ಯಾಪಾರ ಕೇಂದ್ರಗಳಾಗಬಾರದು. ಪುರೋಹಿತರು ಜನಸಾಮಾನ್ಯರ ವಿರೋಧಿಗಳಾಗಬಾರದು. ದೇವರು ಧರ್ಮದ ಹೆಸರಿನಲ್ಲಿ ಕೇಡನ್ನು ಬಯಸುವ ಸಂಗತಿಗಳಿಂದ ಮುಕ್ತವಾದ ಮಾನವ ಸಮಾಜ ರೂಪಗೊಳ್ಳಬೇಕಾದ ಸಂಗತಿಗಳತ್ತ ಕನಕದಾಸರು ನಮ್ಮ ಗಮನ ಸೆಳೆಯುತ್ತಾರೆ. ಇಂಥ ಕನಕದಾಸರು ಪುರಾಣಗಳು ನಂಬಿಸಿದ ಹಲವು ಸಂಗತಿಗಳತ್ತ ತಮ್ಮ ಗಮನ ಹರಿಸುತ್ತಾರೆ. ಜನಕ ಹಿತದವನೆಂದು ನಂಬಬಹುದೇ, ಸಹೋದರನು ಮಮತೆ ಉಳ್ಳವನೆಂದು ನಂಬಬಹುದೇ, ಅದಿರಲಿ ದೇಹಾನುಬಂಧಗಳೇ ತನಗೆ ಬಂಧುಗಳೆಂದು ಮನದಿ ನಿಚ್ಚಳವಾಗಿ ನಂಬಬಹುದೇ, ಆರು ಹಿತದವರೆಂದು ನಂಬುವುದು? ಈ ಪ್ರಶ್ನೆಗಳನ್ನ ನಾವು ವರ್ತಮಾನದಲ್ಲೂ ಕೇಳಿಕೊಳ್ಳಬಹುದು ಎಂದು ಹೇಳಿದರು.

ಶಾಲೆಯ ಮುಖ್ಯ ಶಿಕ್ಷಕ ಚಂದ್ರಪ್ಪ ಮಾತನಾಡಿ, ಪ್ರಭುತ್ವ, ಪ್ರಬಲ ವರ್ಗ, ಜಾತಿಗಳು ಹೇಗೆ ತಳ ಸಮುದಾಯಗಳ ಅಸ್ಮಿತೆಯನ್ನು ಕಲಕುತ್ತಿದ್ದವು ಎನ್ನುವ ಅರ್ಥದಲ್ಲಿ ಕನಕರು ಅಂದು ಮಾತನಾಡಿದ್ದು ಅಪಾರವಿದೆ. ಅವರ ರಾಮಧಾನ್ಯ ಚರಿತೆ ಒಂದೇ ಸಾಕು ಎಲ್ಲ ಕಾಲಮಾನಕ್ಕೂ ಕನ್ನಡಿ ಹಿಡಿಯಲು. ಅದರ ಸಣ್ಣ ಸಣ್ಣ ಬಿಂಬಗಳಂತೆ ಪ್ರಖರ ವೈಚಾರಿಕ ಚಿಂತನೆಯನ್ನು ಕನಕದಾಸರು ತಮ್ಮ ಹಲವು ಕೀರ್ತನೆಗಳಲ್ಲಿ, ಕೃತಿಗಳ ಒಡಲಲ್ಲಿ ಸಾರಿದ್ದಾರೆ ಎಂದು ತಿಳಿಸಿದರು.
ಅತ್ತೆ ಸೊಸೆಯಾಗುವ, ಸೊಸೆ ಅತ್ತೆಯಾಗುವ, ಪುತ್ರ ಪಿತನಾಗುವ, ಪಿತ ಪುತ್ರನಾಗುವ ಇಂತಹ ಕೌಟುಂಬಿಕ ಯಾಜಮಾನ್ಯ ವ್ಯವಸ್ಥೆಯ ನಡುವೆ ತಮ್ಮ ಅನ್ನ ವಸ್ತ್ರಗಳಿಂದ ಚೆನ್ನಾಗಿ ಬಾಳುವವರನ್ನೂ ಭಿನ್ನ ತಂತ್ರಗಳನ್ನು ಮಾಡಿ ಕೆಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಲೆಯ ಎಸ್ ಡಿ ಎಮ್ ಸಿ ಸದಸ್ಯ ನಾರಾಯಣಗೌಡ ಮಾತನಾಡಿ, ಕನಕರು ದೇವರಿಗೆ, ತಮ್ಮ ಆದಿಕೇಶವನಿಗೆ, ಉಡುಪಿಯ ಶ್ರೀಕೃಷ್ಣನಿಗೆ ಎಷ್ಟು ಪ್ರಿಯರೋ ಗೊತ್ತಿಲ್ಲ. ಆದರೆ, ಸಾಮಾನ್ಯ ಮನುಷ್ಯನಿಗೂ ಹತ್ತಿರವಾಗಿ ಜೀವಪರವಾಗುವ, ಮನುಷ್ಯ ಸಮಾಜವನ್ನು ಜಾಗೃತಿಯಲ್ಲಿರಿಸುವ ಕಾರ್ಯವನ್ನು ಮಾಡಿದ್ದಾರೆ. ಅವರು ಸಾರಿದ ಬಹುದೊಡ್ಡ ಮಾತೃ ವಾತ್ಸಲ್ಯದ ಸಾದೃಶ್ಯ ತತ್ವವೆಂದರೆ- ಜಲವೇ ಸಕಲ ಕುಲಕ್ಕೂ ತಾಯಿ ಎಂಬುದು. ಜಲದಲ್ಲಿ ಕುಲವನರಸಬಾರದೆಂಬುದು. ಇಂತಹ ಸಮಾನತೆಯ ನಡೆ, ಆಶಯಗಳೇ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಉಸಿರ ತಂತಿಗಳಂತಿವೆ. ನಮ್ಮ ನುಡಿಯ ಇಂತಹ ಗುಡಿಗಾರರು ಇರುವುದರಿಂದಲೇ ಸಮಾಜ ಒಂದಿಷ್ಟು ಹಸನಾಗಿದೆ. ತಲೆಮಾರುಗಳನ್ನು ಸದಾ ಬಾಳಿಸುವ, ಎಲ್ಲರಿಗೂ ಸಮಬಾಳು ಸಮಪಾಲು ಎಂಬುವ ತತ್ವದ ಕ್ರಿಯೆಯನ್ನಿಡಿದು ಮುನ್ನಡೆಸುವ ಇಂತಹ ಅಂಬಲಿ ಧ್ಯಾನದ ಕನಕರಂತಹ ನಮ್ಮಜ್ಜಂದಿರು ಬೇಕು. ಯುದ್ಧದಾಹಿಯಾಗಿರುವ ಲೋಕದೊಡಲನ್ನು ತಣ್ಣಗಾಗಿರಿಸಲು ಇವರ ನುಡಿಮಮತೆ ಬೇಕು ಎಂದು ಹೇಳಿದರು.
ಇದೇ ವೇಳೆ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ರಾಗಿ, ಜೋಳ ಖರೀದಿ ಕೇಂದ್ರ; ನೋಂದಣಿಗೆ ಡಿ.ಸಿ ಮನವಿ
ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕಿಯರಾದ ವಸಂತ ಎಸ್.ವಿ, ಭವಾನಿ ಎಚ್ ಎನ್, ಸುಧಾಮಣಿ ಡಿ ಎಮ್ ಮತ್ತು ಎಸ್ ಡಿ ಎಂ ಸಿ ಸದಸ್ಯರಾದ ಲಕ್ಶ್ಮೀ ನಾರಾಯಣ, ಪವಿತ್ರ, ಪ್ರೇಮ ಹಾಗೂ ಗ್ರಾಮಸ್ಥರು ಹಾಜರಿದ್ದರು.