ರಾಷ್ಟ್ರಮಟ್ಟದಲ್ಲಿ ಹೆಸರಾದ ಹುಬ್ಬಳ್ಳಿ ನಗರಕ್ಕೆ ‘ಛೋಟಾ ಮುಂಬೈ’ ಎಂತಲೂ ಕರೆಯುತ್ತಾರೆ. ಇಂತಹ ದೊಡ್ಡ ನಗರ ಹುಬ್ಬಳ್ಳಿಯಲ್ಲಿ ಸಮಸ್ಯೆಗಳು ಸಾಲು ಸಾಲಾಗಿ ನಿಂತಿವೆ ಎಂದರು ತಪ್ಪಾಗುವುದಿಲ್ಲ. ಹುಬ್ಬಳ್ಳಿ ನಗರದ ಆರ್ ಎನ್ ಶೆಟ್ಟಿ ರಸ್ತೆಯಲ್ಲಿ ಬರುವ ಜೆಂಟ್ಸ್ ಹೈಸ್ಕೂಲ್ ಮುಂಭಾಗದಲ್ಲಿ ಇರುವ ರಸ್ತೆಯುದ್ದಕ್ಕೂ ಹಲವು ಗುಂಡಿಗಳು ಬಿದ್ದಿವೆ. ವಾಹನಗಳು ಸಂಚರಿಸಲು, ಶಾಲಾ ಮಕ್ಕಳು ಓಡಾಡಲು ಕೂಡ ಬಹಳ ಸಮಸ್ಯೆ ಉಂಟಾಗುತ್ತಿದೆ. ಈ ಕುರಿತು ಹಲವು ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ, ಶಾಸಕರಿಗೆ ತಿಳಿಸಿದರು ಏನು ಉಪಯೋಗವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹುಬ್ಬಳ್ಳಿ ನಗರದ ಆರ್ ಎನ್ ಶೆಟ್ಟಿ ರಸ್ತೆಯಲ್ಲಿ ದೊಡ್ಡ ಗುಂಡಿಗಳು ಬಿದ್ದಿರುವ ಪರಿಣಾಮ ವಾಹನ ಸವಾರರಿಗೆ ಮತ್ತು ಶಾಲಾ ಮಕ್ಕಳಿಗೆ, ವೃದ್ಧರಿಗೆ ಓಡಾಡಲು ಬಹಳ ಸಮಸ್ಯೆ ಉಂಟಾಗಿದ್ದು, ಈ ಕುರಿತು ವಾರ್ಡಿನ ಕಾರ್ಪೊರೇಟರ್ ಸಂದಿಲ್ ಹಾಗೂ ಸ್ಥಳೀಯ ಶಾಸಕ ಮಹೇಶ್ ತೆಂಗಿನಕಾಯಿ ತಲೆಕೆಡಿಸಿಕೊಂಡಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹಿತ ಕಾಣೆಯಾಗಿದ್ದಾರೆ ಎಂದು ಸ್ಥಳೀಯರು ವ್ಯಂಗ್ಯವಾಡುತ್ತಿದ್ದಾರೆ.
ಈ ಕುರಿತು ಸಾಮಾಜಿಕ ಹೋರಾಟಗಾರ ರಾಜು ನಾಯಕವಾಡಿ ಈ ದಿನ.ಕಾಮ್ ಜೊತೆಗೆ ಮಾತನಾಡಿ, “ಹಲವು ವರ್ಷಗಳಿಂದ ಈ ಸಮಸ್ಯೆಯನ್ನು ಇಲ್ಲಿನ ಸ್ಥಳೀಯರು ಅನುಭವಿಸುತ್ತಿದ್ದಾರೆ. ಶಾಲಾ ಮಕ್ಕಳು, ವೃದ್ಧರು ಈ ರಸ್ತೆಯಲ್ಲಿ ಹಾದು ಹೋಗುವಾಗ ಕಾಲು ಜಾರಿ ಬಿದ್ದುದ್ದೂ ಉಂಟು. ಇಂತಹ ಅನಾಹುತಗಳು ಹಲವಾರು ನಡೆದಿವೆ. ಆದರೂ ಶಾಸಕರಾದ ಮಹೇಶ್ ತೆಂಗಿನಕಾಯಿ ಹಾಗೂ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರು ಕಾಣೆಯಾಗಿದ್ದಾರೆ” ಎಂದು ಹೇಳಿದರು.
“ಸ್ಮಾರ್ಟ್ ಸಿಟಿ ಎಂದು ಹೇಳುವ ಜೋಶಿ ಸಾಹೇಬರಿಗೆ ಈ ರಸ್ತೆಯಲ್ಲಿ ಒಮ್ಮೆ ನಡೆದಾಡಲು ಹೇಳಬೇಕು. ಸ್ಥಳೀಯರು ಪಡುವ ಕಷ್ಟವನ್ನು ತಾವೂ ಅನುಭವಿಸಬೇಕಿದೆ. ಮತ್ತು ಕಣ್ಮುಚ್ಚಿ ಕುಳಿತ ಇಂತಹ ವ್ಯವಸ್ಥೆಗೆ ನನ್ನ ಧಿಕ್ಕಾರವಿರಲಿ. ಒಂದು ವಾರದಲ್ಲಿ ಈ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಲಾಗುವುದು” ಎಂದು ಗುಡುಗಿದರು.
ಸ್ಥಳೀಯರಾದ ಅಥಣಿ ಎಂಬುವವರು ಮಾತನಾಡಿ, “ಶಾಸಕ ಮಹೇಶ್ ತೆಂಗಿನಕಾಯಿ ಅವರು ಆಗಾಗ ಬಂದು ಈ ರಸ್ತೆಯನ್ನು ನೋಡಿಕೊಂಡು ಹೋಗಿದ್ದಾರೆ. ಆದರೂ ಸಮಸ್ಯೆಯನ್ನು ಬಗೆಹರಿಸುವ ಕೆಲಸಕ್ಕೆ ಕೈ ಹಾಕದಿರುವುದು ದುರಂತದ ಸಂಗತಿ. ನಾವು ಸುಮಾರು ನಾಲ್ಕೈದು ವರ್ಷಗಳಿಂದ ಈ ರಸ್ತೆಯನ್ನು ನೋಡುತ್ತಿದ್ದೇವೆ. ಮಳೆಗಾಲ ಸಮೀಪಕ್ಕೆ ಮಾತ್ರ ಒಂದಿಷ್ಟು ದುರಸ್ತಿ ಮಾಡುತ್ತಾರೆ. ಆನಂತರ ಇಲ್ಲಿ ಅನುಭವಿಸುವವರ ಪಾಡು ಅನುಭವಿಸುವವರಿಗೇ ಗೊತ್ತು. ಸಂಬಂಧಪಟ್ಟವರು ಈಗಲಾದರೂ ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಮುಂದಾಗಬೇಕಿದೆ” ಎಂದರು.
ಸ್ಥಳೀಯ ನಿವಾಸಿ ಪ್ರವೀಣ್ ಮಾತನಾಡಿ, ಈ ರಸ್ತೆಯಿಂದಲೇ ನಮ್ಮ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವುದು ಬರುವುದು ದಿನವೂ ನಡೆದೇ ಇರುತ್ತದೆ. ಇಂತಹ ಗುಂಡಿಗಳು ಬಿದ್ದಿರುವ ರಸ್ತೆಯಲ್ಲಿಯೇ ಅನಿವಾರ್ಯವಾಗಿ ಓಡಾಡಬೇಕಿದೆ. ಯಾರೂ ಈ ಕುರಿತು ಹೆಚ್ಚಿನ ತಲೆ ಕೆಡಿಸಿಕೊಳ್ಳುತ್ತಿಲ್ಲ. ಪಕ್ಕದಲ್ಲಿಯೇ ಪಾಲಿಕೆ ವಲಯ ಕಛೇರಿ ಇದ್ದರೂ ಪ್ರಯೋಜನವಿಲ್ಲ. ಈ ಸಮಸ್ಯೆ ದೊಡ್ಡದಾಗಿ ಬೆಳೆದು ನಿಂತಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಬೇಕೆಂದು ಪಾಲಿಕೆಯಲ್ಲಿ, ಶಾಸಕರಲ್ಲಿ ವಿನಂತಿಸುತ್ತೇವೆ” ಎಂದರು.

ಸ್ಥಳೀಯ ವ್ಯಾಪಾರಸ್ಥೆ ಪರ್ವೀನ್ ಬಾನು ತಾಡಪತ್ರಿ ಮಾತನಾಡಿ, “ಈ ರಸ್ತೆಯಲ್ಲಿ ಮೊನ್ನೆ ಹಿರಿಯರೊಬ್ಬರು ವಾಹನದ ಮೇಲೆ ಹೊರಟಾಗ ಕೆಳಗೆ ಬಿದ್ದರು. ಅವರನ್ನು ಇಲ್ಲಿದ್ದವರೆಲ್ಲರೂ ಸೇರಿಕೊಂಡು ಮೇಲೆಬ್ಬಿಸಿದರು. ಒಂದು ವೇಳೆ ಯಾರೂ ಇರದೆ ಹೋಗಿದ್ದರೆ ಏನು ಗತಿ?, ಏನಾದರೂ ಜೀವಕ್ಕೆ ತೊಂದರೆಯಾದರೆ ಯಾರು ಹೊಣೆ?, ಯಾರನ್ನು ಕೇಳುವುದು” ಎಂದು ಬೇಸರ ವ್ಯಕ್ತಪಡಿಸಿದ್ದರು.
ಇದನ್ನು ಓದಿದ್ದೀರಾ? ಗದಗ | ಕಾಣೆಯಾಗಿದ್ದ ಮಹಿಳೆ ಬಾವಿಯಲ್ಲಿ ಪತ್ತೆ: ತಡವಾಗಿ ಬೆಳಕಿಗೆ ಬಂದ ಘಟನೆ
ಸಚಿನ್ ಗುಪ್ತಾರ್ ಮಾತನಾಡಿ, “ಶಾಸಕರಾದ ಮಹೇಶ್ ತೆಂಗಿನಕಾಯಿ ಅವರಿಗೆ ಸ್ವತಃ ನಾನೇ ಹಲವು ಬಾರಿ ಕರೆ ಮಾಡಿ ಈ ಸಮಸ್ಯೆ ಕುರಿತು ತಿಳಿಸಿದ್ದೇನೆ. ಆದರೂ ತಿರುಗಿಯೂ ನೋಡಿಲ್ಲ ಮತ್ತು ಮಹಾನಗರ ಪಾಲಿಕೆಗೆ ನೇರವಾಗಿ ಪತ್ರವನ್ನು ಬರೆದಿದ್ದೇನೆ. ಆದರೂ ಸಹಿತ ಯಾವ ಪ್ರಯೋಜನ ಆಗಲಿಲ್ಲ. ಹೀಗಾದರೆ ನಾವು ಯಾರನ್ನು ನಂಬುವುದು” ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನಾದರೂ ಈ ರಸ್ತೆ ಸಮಸ್ಯೆಗೆ ಪಾಲಿಕೆ ಸದಸ್ಯರು ಶಾಸಕರು ಅಥವಾ ಸಚಿವರಾಗಲಿ, ಸಂಬಂಧಪಟ್ಟವರು ಓಗೊಟ್ಟು ಸಮಸ್ಯೆಯನ್ನು ಬಗೆಹರಿಸುವಲ್ಲಿ ಮುನ್ನೆಚ್ಚರಿಕೆ ವಹಿಸುವರೆ? ಈಗಲಾದರೂ ಎಚ್ಚರಾಗುವರೆ? ಸಮಸ್ಯೆ ಬಗ್ಗೆ ಗಮನ ಹರಿಸುವರೆ? ಕಾಣೆಯಾದವರು ಮತ್ತೆ ಬಂದು ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವವರೆ? ಎಂಬುದು ಸ್ಥಳೀಯರ ನಿರೀಕ್ಷೆಯಾಗಿದೆ.
