- ನಮ್ಮ ಭೂಮಿ ನಮ್ಮ ಹಕ್ಕು ಭಿಕ್ಷೆಯಲ್ಲ, ನಮ್ಮ ವಸತಿ ನಮ್ಮ ಹಕ್ಕು ಭಿಕ್ಷೆಯಲ್ಲ
- ವಸತಿಗಾಗಿ 94 ಮತ್ತು 94cc ಅರ್ಜಿ ಸಲ್ಲಿಸಿದ ವಸತಿಹೀನರಿಗೆ ನ್ಯಾಯ ನೀಡಬೇಕು.
ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ನ್ಯಾಯ ಸಿಗದೇ ಭೂ ವಂಚಿತರು ಸಂಕಷ್ಟದ ಜೀವನ ದೂಡುತ್ತಿದ್ದಾರೆ. ಕೂಡಲೇ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಸತಿಗಾಗಿ 94 ಮತ್ತು 94cc ಅರ್ಜಿಗಳನ್ನು ಸಲ್ಲಿಸಿದವರಿಗೆ ನ್ಯಾಯ ಕೊಡಬೇಕು. ಇಲ್ಲದಿದ್ದರೆ ವಸತಿಹೀನರನ್ನು ಸಂಘಟಿಸಿ ಉಗ್ರ ಹೋರಾಟಕ್ಕೆ ಅಣಿಗೊಳಿಸಲಾಗುವುದು ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಕರಿಯಪ್ಪ ಗುಡಿಮನಿ ಎಚ್ಚರಿಕೆ ನೀಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ವಸತಿಹೀನ, ಭೂಮಿರಹಿತ ಬಡ ಜನರನ್ನು ವರ್ಗ, ಜಾತಿ, ಭೇದ ರಹಿತವಾಗಿ ಗುರುತಿಸಿ ಅವರಿಗೆ ಸಂವಿಧಾನಾತ್ಮಕವಾಗಿ ಸಿಗಬೇಕಾದ ಸೂರು ಒದಗಿಸುವುದು, ಸ್ವಾವಲಂಬನೆ ಜೀವನ ನಡೆಸಲು ಅವಶ್ಯಕವಾದ ಬೇಸಾಯದ ಭೂಮಿಯನ್ನು ಕೊಡಿಸುವ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಹೋರಾಟ ರೂಪಿಸಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜೊತೆಗೆ ಸಮನ್ವಯ ಸಾಧಿಸಿ ನ್ಯಾಯ ಒದಗಿಸುವ ಗುರಿ ಹೊಂದಿದ್ದೇವೆ” ಎಂದರು.
“ನಮ್ಮ ಭೂಮಿ ನಮ್ಮ ಹಕ್ಕು, ಭಿಕ್ಷೆಯಲ್ಲ, ನಮ್ಮ ವಸತಿ ನಮ್ಮ ಹಕ್ಕು ಭಿಕ್ಷೆಯಲ್ಲ ಎಂಬ ಘೋಷಣೆಯೊಂದಿಗೆ ಹೋರಾಟವನ್ನು ಮುನ್ನಡೆಸಲಾಗುವುದು” ಎಂದು ಹೇಳಿದರು.
ಪದಾಧಿಕಾರಿಗಳ ಆಯ್ಕೆ:
ಮಂಜುನಾಥ ಕೊಂಡಪಲ್ಲಿ (ಜಿಲ್ಲಾ ಸಂಚಾಲಕರು), ಸಂತೋಷ ಚಲವಾದಿ, ಸರಸ್ವತಿ ಕಟ್ಟಿಮನಿ, ಹುಸೇನಬಾಷಾ ತಳೇವಾಡ (ಸದಸ್ಯರು), ಲಕ್ಷಣ ಬಕ್ಕಾಯ (ಕಾನೂನು ಸಲಹೆಗಾರ), ನಾಗೇಶ ಕತ್ರಿಮಾಲ (ಜಿಲ್ಲಾ ಖಜಾಂಚಿ), ಇಂದುಮತಿ ಸಿರಗಾವಿ ಹಾಗೂ ಮಮತಾ ಅರಿವೆಡು (ಸಹಾಯಕ ಖಜಾಂಚಿ), ಜನ್ನೆ ಜೈರಾಮ ಹಾಗೂ ಚಂದ್ರಕಾಂತ ಯಾದವ (ಜಿಲ್ಲಾ ಸಂಘಟನಾ ಸಂಯೋಜಕ) ಅವರನ್ನು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಧಾರವಾಡ ಜಿಲ್ಲಾ ಸಮನ್ವಯ ಸಮಿತಿ ನೂತನ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.