ಕಳೆದ 25 ವರ್ಷಗಳಿಂದ ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕೆಂದು ಹಲವಾರು ಹೋರಾಟಗಳನ್ನು ನಡೆಸುತ್ತಿದ್ದೇವೆ. ಅದರೆ, ಅಧಿಕಾರಕ್ಕೆ ಬಂದ ಯಾವುದೇ ಸರ್ಕಾರ ವರದಿಯನ್ನು ಜಾರಿಗೆ ತಂದಿದ್ದ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ರಾಮಯ್ಯ ಎನ್ನಿಸಿಕೊಂಡಿದ್ದಾರೆ. ಅವರು ಕೂಡಲೇ ಮಹಿಷಿ ವರದಿಯನ್ನು ಜಾರಿಗೆ ತರಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಮುಖಂಡ ರಾಮೇಗೌಡ ಆಗ್ರಹಿಸಿದ್ದಾರೆ.
ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ರಾಮೇಗೌಡ, “ನಮ್ಮ (ರಾಜ್ಯದ ಜನರು) ಬೇಜವಾಬ್ದಾರಿಯ ಕಾರಣಕ್ಕೆ ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಶಪಿಸುವ ಕಾಲ ಬರುತ್ತದೆ. ಹೀಗಾಗಿ ಕನ್ನಡಿಗರನ್ನು, ಕನ್ನಡಿಗರ ಬದುಕನ್ನು ಉಳಿಸುವ ಕಾರ್ಯವನ್ನು ನಾವು ಮಾಡಲೇಬೇಕು. ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಸಂಬಂಧ ಸಮಗ್ರ ಕಾಯ್ದೆ ರೂಪಿಸಲು ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕು” ಎಂದಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಕಸಾಪ ದಾವಣಗೆರೆ ಜಿಲ್ಲಾಧ್ಯಕ್ಷ ವಾಮದೇವಪ್ಪ, “ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕಿಸಬೇಕೆಂದು ಹೋರಾಟ ಮಾಡುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಕನ್ನಡಿಗರು ಅತ್ಯಂತ ಸಹೃದಯಿಗಳು, ಕನ್ನಡಿಗರನ್ನು ಕೆಣಕಿದರೆ ಸಿಂಹದ ಬಾಯಿಗೆ ಕೈ ಇಟ್ಟಂತೆ ಎಂದು ಹಲ್ಮಿಡಿ ಶಾಸನದಲ್ಲಿ ಆರನೇ ಶತಮಾನದಲ್ಲಿಯೇ ತಿಳಿಸಲಾಗಿದೆ. ಕನ್ನಡಿಗರು ಒಳ್ಳೆಯ ಮನಸ್ಥಿತಿಯವರು ಆದರೂ ಕೂಡ ಹೊರಗಿನವರಿಗೆ ಉದ್ಯೋಗ ದೊರಕಿಸಿ ಕೊಟ್ಟು, ನಮ್ಮವರಿಗೆ ಉದ್ಯೋಗಾವಕಾಶಗಳಲ್ಲಿ ಅತಂತ್ರ ಸ್ಥಿತಿ ಎದುರಾಗಿರುವುದು ಅತ್ಯಂತ ಶೋಚನೀಯ. ಕನ್ನಡಿಗರು ಸಿಡಿದೆಳುವ ಮುನ್ನ ಸರ್ಕಾರ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಿ ಕನ್ನಡಿಗರಿಗೆ ಉದ್ಯೋಗ ಭದ್ರತೆ ನೀಡಬೇಕು” ಒತ್ತಾಯಿಸಿದರು.
ವಕೀಲರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, “ಯಾವುದೇ ಸರ್ಕಾರಗಳು ಕನ್ನಡಿಗರ ಬದುಕಿನ ಪ್ರಶ್ನೆಯಾದ ಸರೋಜಿನಿ ಮಹಿಷಿ ವರದಿ ಜಾರಿಗೆ ಮತ್ತು ಕನ್ನಡಿಗರಿಗೆ ಉದ್ಯೋಗ, ಮೀಸಲಾತಿಗೆ, ಸಂಘ ಸಂಸ್ಥೆಗಳು ಕನ್ನಡಪರ ಸಂಘಟನೆಗಳು, ಹೋರಾಟ ಮಾಡಿದರು ಕೂಡ ಆಸಕ್ತಿ ವಹಿಸುತ್ತಿಲ್ಲ. ಕನ್ನಡಿಗರಿಗೆ ಉದ್ಯೋಗವನ್ನು ನಿರಾಕರಿಸಿ, ಕನ್ನಡಿಗರು ಉಪವಾಸ ಬೀಳುವಂತಹ ಸ್ಥಿತಿಯನ್ನು ಬಹು ರಾಷ್ಟ್ರೀಯ ಕಂಪನಿಗಳು ಮತ್ತು ಉದ್ಯಮಗಳು ಸೃಷ್ಟಿಸಿವೆ. ಕನ್ನಡದ ನೆಲದಲ್ಲಿ ಕನ್ನಡಿಗರು ಪರಕೀಯರಂತೆ ಬದುಕುವುದನ್ನು ತಪ್ಪಿಸಲು ಕನ್ನಡದ ಮುಖ್ಯಮಂತ್ರಿ ಎಂದು ಹೆಸರಾಗಿರುವ ಸಿದ್ದರಾಮಯ್ಯನವರು ಕಾಳಜಿ ವಹಿಸಿ ಕನ್ನಡಿಗರಿಗೆ ಉದ್ಯೋಗ ಭದ್ರತೆಯನ್ನು ಒದಗಿಸಬೇಕು ಮತ್ತು ಕನ್ನಡಪರ ನಿಲುವುಗಳನ್ನು ಗಟ್ಟಿಯಾಗಿ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರವೇ ಮಹಿಳಾ ಘಟಕದ ಅಧ್ಯಕ್ಷ ಬಸಮ್ಮ, ಕರವೇ ಪದಾಧಿಕಾರಿಗಳಾದ ಹೆಚ್ ಧರ್ಮರಾಜ್, ಲೋಕೇಶ್, ಎಂ ಟಿ ಹನುಮಂತಪ್ಪ, ಖಾದರ್ ಭಾಷಾ, ಚೈತ್ರಾ ಅಭಿಷೇಕ್, ಷಡಕ್ಷರಪ್ಪ ಬೆತ್ತೂರು, ಹೇಮಂತ್ ಕುಮಾರ್, ಬಸವರಾಜ್, ವಿಜಯೇಂದ್ರ, ಗೋಸ್ವಾಮಿ, ಅನ್ವರ್ ಹುಸೇನ್, ಸೈಯದ್ ಪಾಷಾ, ಗಿರೀಶ್ ಕುಮಾರ್, ಇನ್ನಿತರ ತಾಲೂಕು ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.