ಕಲಬುರಗಿ ನಗರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಮೂಲ ಸೌಲಭ್ಯಗಳನ್ನು ಹೆಚ್ಚಿಸುವದರೊಂದಿಗೆ ʼಸ್ಮಾರ್ಟ್ ಸಿಟಿʼ ರೂಪಿಸುವ ಸಲುವಾಗಿ ತಜ್ಞರೊಂದಿಗೆ ಚರ್ಚಿಸಿ, ಮುಂದಿನ ಮೂರು ವರ್ಷದ ಒಳಗೆ ಕಲಬುರಗಿ ನಗರವನ್ನು ಅತ್ಯುತ್ತಮ ನಗರವಾಗಿಸಲು ಯೋಜನೆಗಳನ್ನು ರೂಪಿಸಲಾಗುವುದು ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಂಗಳೂರು ನಗರದಲ್ಲಿ ವಿಶೇಷ ಸಭೆ ನಾಡೆಸಿ ಮಾತನಾಡಿ, “ಗುಣಮಟ್ಟದ ಕುಡಿಯುವ ನೀರು ಸರಬರಾಜು, ಸುಸ್ಥಿರ ಒಳಚರಂಡಿ ವ್ಯವಸ್ಥೆ, ತ್ಯಾಜ್ಯ ನೀರು ಮರುಬಳಕೆ, ಘನತ್ಯಾಜ್ಯ ಬೇರ್ಪಡಿಸುವಿಕೆ ಹಾಗೂ ವಿಲೇವಾರಿ, ಉತ್ತಮ ಸಂಚಾರಿ ವ್ಯವಸ್ಥೆ, ಹಸಿರೀಕರಣ ಮುಂತಾದ ಮೂಲ ಸೌಲಭ್ಯಗಳನ್ನು ಕಲಬುರಗಿ ನಗರಕ್ಕೆ ಒದಗಿಸಲು ಯೋಜಿಸಲಾಗಿದೆ” ಎಂದು ತಿಳಿಸಿದರು.
“ಕಲಬುರಗಿ ನಗರವನ್ನು ಅತ್ಯುತ್ತಮ ಮೂಲಭೂತ ಸೌಲಭ್ಯಗಳ ನಗರವಾಗಿಸುವ ಮೂಲಕ ಹೆಚ್ಚು ಉದ್ದಿಮೆಗಳನ್ನು ಆಕರ್ಷಿಸುವದರೊಂದಿಗೆ ಹೆಚ್ಚೆಚ್ಚು ಮಂದಿ ಯುವಕ ಯವತಿಯರಿಗೆ ಉದ್ಯೋಗ ಸೃಷ್ಟಿಸಲು ಸಾಧ್ಯವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

“ನಗರದ ನೈರ್ಮಲ್ಯ ವ್ಯವಸ್ಥೆಯನ್ನು ಸುಧಾರಿಸುವ ಅವಶ್ಯಕತೆ ಇದೆಯೆಂದು ಹೇಳಿದ ಸಚಿವರು ಈಗಿನ ಶೇ.50ರಷ್ಟಿರುವ ನೈರ್ಮಲ್ಯ ವ್ಯವಸ್ಥೆಯನ್ನು ನೂರಕ್ಕೆ ನೂರರಷ್ಟು ಬಲಪಡಿಸುವ ಗುರಿಯನ್ನು ಇರಿಸಿಕೊಳ್ಳಲಾಗಿದೆ. ಈ ಸಲುವಾಗಿ ನೈರ್ಮಲ್ಯ ನೌಕರರ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂಬ ಅಂಶವನ್ನು ವಿವರಿಸಿದರಲ್ಲದೆ, ನಗರದ ನೂರು ಲಕ್ಷ ಚದರ ಅಡಿ ಪ್ರದೇಶದಲ್ಲಿ ಉದ್ಯಾನ ಹಾಗೂ ಮರಗಳನ್ನು ಪೋಷಿಸುವುದರೊಂದಿಗೆ ಕಲಬುರಗಿ ನಗರವನ್ನು ಹಸಿರೀಕರಣಗೊಳಿಸುವ ಯೋಜನೆಯನ್ನು ರೂಪಿಸಲಾಗುವುದು” ಎಂದು ಪ್ರಕಟಿಸಿದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಪಾದುವಾ ಕಾಲೇಜು ಮೈದಾನದಲ್ಲಿ ನಾಗರಿಕ ಸುರಕ್ಷಾ ಅಣಕು ಪ್ರದರ್ಶನ
ಸಚಿವರ ಯೋಜನೆಗಳಿಗೆ ಅನುಗುಣವಾಗಿ ಕಾರ್ಯಕ್ರಮ ರೂಪಿಸಲು ಇಂಡಿಯನ್ ಇನ್ಸ್ಟಿಟ್ಯೂಟ್ ಫಾರ್ ಹ್ಯೂಮನ್ ಸೆಟಲ್ಮೆಂಟ್ ಸಂಸ್ಥೆಯು ಸಿದ್ಧಪಡಿಸಿದ್ದ ತಜ್ಞರನ್ನು ಒಳಗೊಂಡ ವರದಿಯನ್ನು ಸಚಿವರು ಮತ್ತು ಸಭೆಯಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿತು.
ಸಭೆಯಲ್ಲಿ ಕಲಬುರಗಿ ಶಾಸಕ ಅಲ್ಲಮಪ್ರಭು ಪಾಟೀಲ್, ಶ್ರೀಮತಿ ಕನೀಜ್ ಫಾತೀಮಾ, ಕಲಬುರಗಿ ಮಹಾನಗರಪಾಲಿಕೆ ಮೇಯರ್ ಎಲ್ಲಪ್ಪ ನಾಯ್ಕೋಡಿ, ಕುಡಾ ಅಧ್ಯಕ್ಷ ಮಜರ್ ಆಲಂ ಖಾನ್, ಕಲಬುರಗಿ ಮಹಾನಗರಪಾಲಿಕೆ ಆಯುಕ್ತ ಅವಿನಾಶ್ ಸಿಂಧೆ ಸೇರಿದಂತೆ ಇತರರು ಇದ್ದರು.