ಬೀದರ ವಿಶ್ವವಿದ್ಯಾಲಯದ ಡೀನರಾಗಿ ಮಾಡಿದ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಪ್ರೊ.ಜಗನ್ನಾಥ ಹೆಬ್ಬಾಳೆ ಅವರು ಈ ನೆಲದಲ್ಲಿ ಒಂದು ಸಾಂಸ್ಕೃತಿಕ ಶಕ್ತಿಯಾಗಿ ಸದಾ ಕ್ರಿಯಾಶೀಲರಾಗಿದ್ದಾರೆ ಎಂದು ಬೀದರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಪರಮೇಶ್ವರ ನಾಯ್ಕ್ ಹೇಳಿದರು.
ಬೀದರ ವಿಶ್ವವಿದ್ಯಾಲಯದ ಕನ್ನಡ ವಿಭಾಗ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ ಹಾಗೂ ಕರ್ನಾಟಕ ಕಾಲೇಜು ಕನ್ನಡ ವಿಭಾಗದ ಸಹಯೋಗದಲ್ಲಿ ಬೀದರ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪ್ರೊ ಜಗನ್ನಾಥ ಹೆಬ್ಬಾಳೆ ಅವರ ಬದುಕು ಬರಹ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಶೈಕ್ಷಣಿಕ, ಸಾಹಿತ್ಯಕ, ಸಾಮಾಜಿಕ ತುಡಿತವಿರುವ ವ್ಯಕ್ತಿತ್ವ ಹೆಬ್ಬಾಳೆ ಅವರದು’ ಎಂದರು.
ಸಮಾಜ ವಿಜ್ಞಾನ ನಿಕಾಯದ ಡೀನ ಪ್ರೊ. ದೇವಿದಾಸ ತುಮಕುಂಟೆ ಮಾತನಾಡಿ, ‘ಹೆಬ್ಬಾಳೆ ಅವರ ಸಮಾಜ ಪರವಾದ ಕಾಳಜಿ ಶ್ಲಾಘನೀಯ. ಅವರು ಕರ್ನಾಟಕ ಕಾಲೇಜಿನ ಕನ್ನಡ ವಿಭಾಗದ ಜೊತೆಗೆ ಹಲವು ವಿಭಾಗಗಳು ಕಟ್ಟಲು ಶ್ರಮಿಸಿದರು. ಅವರ ಸ್ನೇಹದ ವ್ಯಕ್ತಿತ್ವಕ್ಕೆ ಹಲವರು ಸೋತಿದ್ದಾರೆ. ಜಿಲ್ಲೆಯಲ್ಲಿ ವಿವಿಧ ಸಾಹಿತ್ಯ ಸಮ್ಮೇಳನ, ಜಾನಪದ ಸಮ್ಮೇಳನ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ’ ಎಂದರು.
ಬೀದರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಪ್ರಾಧ್ಯಾಪಕಿ ಡಾ.ಮಹಾದೇವಿ ಹೆಬ್ಬಾಳೆ ಮಾತನಾಡಿ, ‘ಜಗನ್ನಾಥ ಹೆಬ್ಬಾಳೆ ಅವರದು ಮಾತೃ ಹೃದಯಿ ವ್ಯಕ್ತಿತ್ವ. ಸದಾ ಜೀವಪರ, ಜನಪರ ಕಾಳಜಿ ಧ್ಯಾನಿಸುವ ಅಧ್ಯಾಪಕ, ಕೌಟುಂಬಿಕ, ಸಾಮಾಜಿಕವಾಗಿಯೂ ಅಂತಃಕರಣ ಹೊಂದಿದ ಜೀವ’ ಎಂದು ಬಣ್ಣಿಸಿದರು.
ಬಸವಕಲ್ಯಾಣ ಬಸವೇಶ್ವರ ಸ್ನಾತಕೋತ್ತರ ಕಾಲೇಜು ಪ್ರಾಚಾರ್ಯ ಡಾ. ಶಾಂತಲಾ ಪಾಟೀಲ, ಪ್ರೊ. ಜಗನ್ನಾಥ ಹೆಬ್ಬಾಳೆ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯದ ಸರ್ಕಾರಿ ಪಿಯು ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರೇ ಇಲ್ಲ!
ಕಾರ್ಯಕ್ರಮದಲ್ಲಿ ಡಾ .ರಾಮಚಂದ್ರ ಗಣಾಪೂರ, ಡಾ. ಸಾವಿತ್ರಿ ಹೆಬ್ಬಾಳೆ, ಡಾ ವಿಜಯಕುಮಾರ ಬಿಳಗಿ, ಡಾ. ಸುರೇಖಾ ಬಿರಾದಾರ ಸೇರಿ ಹಲವರಿದ್ದರು. ಸುನಿತಾ ಕೂಡ್ಲಿಕರ ಸ್ವಾಗತಿಸಿದರು. ಬಸವರಾಜ ಖಂಡಾಳೆ ನಿರೂಪಿಸಿದರು.ಡಾ. ಸಂಗಪ್ಪ ತೌಡಿ ವಂದಿಸಿದರು.