ಜಮಾಅತೆ ಅಹ್ಲೇ ಇಸ್ಲಾಂ ಸಂಘಟನೆಯ ಚುನಾವಣೆ ಹಿನ್ನೆಲೆಯಲ್ಲಿ ನೇಮಕವಾಗಿರುವ ಚುನಾವಣಾಧಿಕಾರಿ ಮೊಯಿಝ್ ಸಂಶೀರ್ ಅವರನ್ನು ಕೂಡಲೇ ಬದಲಾವಣೆ ಮಾಡಿ, ನ್ಯಾಯಯುತ ಚುನಾವಣೆಗೆ ಅನುವು ಮಾಡಿಕೊಡಬೇಕು ಎಂದು ಜಿಲ್ಲಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಡಾ.ಎಂ.ಎಂ.ಬಾಷಾ ಒತ್ತಾಯಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಾಲಿ ಚುನಾವಣಾಧಿಕಾರಿ ಮೊಯಿಝ್ ಸಂಶೀರ್ ಅವರು ಸ್ಥಳೀಯ ನಿವಾಸಿಯಾಗಿದ್ದು, ಅವರ ನೇತೃತ್ವದಲ್ಲಿ ಪಾರದರ್ಶಕ ಚುನಾವಣೆ ಅಸಾಧ್ಯವಾಗಲಿದೆ. ಹಾಗಾಗಿ, ಕೂಡಲೇ ಸಂಶೀರ್ ಅವರನ್ನು ಬದಲಾವಣೆ ಮಾಡಿ, ಇತರೆ ಅಧಿಕಾರಿಗಳನ್ನು ಚುನಾವಣಾಧಿಕಾರಿಯಾಗಿ ನೇಮಿಸಬೇಕು ಎಂದು ಮನವಿ ಮಾಡಿದರು.
ಈ ಹಿಂದೆ ಸದಸ್ಯತ್ವ ನೋಂದಣಿ ಶುಲ್ಕ ಕೇವಲ 50 ರೂಪಾಯಿ ಮಾತ್ರ ಇತ್ತು. ಆದರೆ, ಪ್ರಸ್ತುತ ಸದಸ್ಯತ್ವ ಶುಲ್ಕವನ್ನು 250 ರೂ.ಗೆ ಏರಿಸಲಾಗಿದೆ. ಇದರಿಂದ ಬಡವರಿಗೆ ಸದಸ್ಯತ್ವ ಪಡೆಯುವುದು ಕಷ್ಟ ಸಾಧ್ಯವಾಗಲಿದೆ. ಆದ್ದರಿಂದ, ಬಡಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸದಸ್ಯತ್ವ ಶುಲ್ಕವನ್ನು ಇಳಿಕೆ ಮಾಡಬೇಕು ಆಗ್ರಹಿಸಿದರು.

ಚಿಕ್ಕಬಳ್ಳಾಪುರ ನಗರದಲ್ಲಿ ಸುಮಾರು 10 ಸಾವಿರ ಮಂದಿ ಅರ್ಹ ಮತದಾರರಿದ್ದರೂ, ಪ್ರಭಾವಿಗಳ ಹುನ್ನಾರದಿಂದ ಸದಸ್ಯತ್ವ ಶುಲ್ಕವನ್ನು ಏರಿಕೆ ಮಾಡಿ, ಕೇವಲ 2500 ಜನರಿಗೆ ಮಾತ್ರ ಸದಸ್ಯತ್ವ ನೋಂದಣಿ ಮಾಡಿಕೊಡಲಾಗಿದೆ. ಆನಂತರ ಬಂದವರಿಗೆ ಸದಸ್ಯತ್ವ ಕೊಡದೆ ದಿಢೀರ್ ಚುನಾವಣೆ ಘೋಷಣೆ ಮಾಡಿದ್ದಾರೆ. ಸದಸ್ಯತ್ವ ನೋಂದಣಿ ಇಳಿಕೆಯಾಗಿರುವುದು ನಾಚಿಕೆಗೇಡಿನ ಸಂಗತಿ. ಇದೆಲ್ಲಾ ಕಾರಣಗಳಿಂದ ನಾವು ನ್ಯಾಯಾಲಯದ ಮೆಟ್ಟಿಲೇರಿದ್ದು, ಇದೀಗ ನ್ಯಾಯಾಲಯ ಸದಸ್ಯತ್ವ ನೋಂದಣಿಗೆ 1 ತಿಂಗಳ ಕಾಲಾವಕಾಶ ನೀಡಿದೆ. ಅರ್ಹ ಮತದಾರರು ಸದಸ್ಯತ್ವ ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಜಮಾಅತೆ ಅಹ್ಲೇ ಇಸ್ಲಾಂನ ನಿಯಮದ ಪ್ರಕಾರ ಮೂರು ವರ್ಷಗಳಿಗೊಮ್ಮೆ ಚುನಾವಣೆ ನಡೆಯಬೇಕು. ಆದರೆ, ಕಳೆದ 7-8 ವರ್ಷಗಳಿಂದ ರಫೀವುಲ್ಲಾ, ಇಂತಿಯಾಜ್ ಪಾಷ, ಹೈದರ್ ಆಲಿ ಸೇರಿದಂತೆ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ಸಂಸ್ಥೆ ನಡೆಯುತ್ತಿದೆ. ಪ್ರತಿಯೊಂದಕ್ಕೂ ಅಧಿಕಾರಿಗಳನ್ನು ಕಾಯಬೇಕು. ಮದುವೆಗೂ ಮುನ್ನ ನೀಡುವ ನಿರಾಕ್ಷೇಪಣಾ ಪತ್ರ ಸೇರಿದಂತೆ ಸಣ್ಣ-ಪುಟ್ಟ ಸಮಸ್ಯೆಗಳಿಗೆ ಅಧಿಕಾರಿಗಳನ್ನೇ ಕಾಯುವ ಸಮಸ್ಯೆ ತಲೆದೂರಿದೆ. ಇದರಿಂದ ಜನರು ಆಡಳಿತ ಮಂಡಳಿಯಿಲ್ಲದೆ ಹೈರಾಣಾಗಿದ್ದಾರೆ. ಆದ್ದರಿಂದ, ಶೀಘ್ರವೇ ಸದಸ್ಯತ್ವ ನೋಂದಣಿ ಕಾರ್ಯ ಮುಗಿಸಿ, ಚುನಾವಣೆ ನಡೆಸಬೇಕು. ಉತ್ತಮರ ಆಯ್ಕೆಯಾಗಬೇಕು ಎಂಬುದು ನಮ್ಮೆಲ್ಲರ ಆಶಯ ಎಂದರು.
ಎ.ಪಿ.ಜೆ. ಅಬ್ದುಲ್ ಕಲಾಂ ಫೌಂಡೇಶನ್ನ ಜಿಲ್ಲಾ ಕಾರ್ಯದರ್ಶಿ ಸೈಯದ್ ಅಮಾನುಲ್ಲ ಮಾತನಾಡಿ, 50 ರೂ. ಇದ್ದ ಸದಸ್ಯತ್ವ ನೋಂದಣಿ ಶುಲ್ಕವನ್ನು 250 ರೂ.ಗೆ ಏರಿಸಿದ್ದು, ಸದಸ್ಯತ್ವ ನೋಂದಣಿ ಕುಂಠಿತಗೊಳ್ಳಲು ಪ್ರಮುಖ ಕಾರಣವಾಗಿದೆ. ಹಾಗಾಗಿ ಸದಸ್ಯತ್ವ ನೋಂದಣಿ ಶುಲ್ಕವನ್ನು ಕಡಿಮೆ ಮಾಡಬೇಕು. ಪ್ರಸ್ತುತ ನೇಮಕಗೊಂಡಿರುವ ಚುನಾವಣಾಧಿಕಾರಿಯನ್ನು ತೆರವುಗೊಳಿಸಿ, ಉತ್ತಮ ಅಧಿಕಾರಿಗಳನ್ನು ನೇಮಿಸಬೇಕು. ಇದರಿಂದ ಪಾರದರ್ಶಕ ಚುನಾವಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಆಸ್ತಿಗಾಗಿ ಸಹೋದರನನ್ನೇ ಕೊಲೆಗೈದ ಸಹೋದರಿಯರು!
ಸುದ್ದಿಗೋಷ್ಠಿಯಲ್ಲಿ ಎ.ಪಿ.ಜೆ. ಅಬ್ದುಲ್ ಕಲಾಂ ರಾಜ್ಯ ಪ್ರಧಾನ ಕಾರ್ಯದರ್ಶಿ ಆಶಿಮ್ ಬನ್ನೂರ್, ಜಿಲ್ಲಾ ವಕ್ಫ್ ಮಂಡಳಿ ಉಪಾಧ್ಯಕ್ಷ ಸೈಯದ್ ಇಬ್ರಾಹಿಂ, ಮೊಹಮ್ಮದ್ ಶಫಿ, ರಾಜಶೇಖರ್, ಶಬೀರ್, ನವಾಝ್ ಹಾಗೂ ಇತರರಿದ್ದರು.