ಇತ್ತೀಚಿನ ದಿನಗಳಲ್ಲಿ ನಾವು ಆಟಿಸಂಗೆ ಒಳಗಾಗಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಅಂತಹ ಮಕ್ಕಳನ್ನು ಬೆಳೆಸಲು ಅಗತ್ಯವಿರುವ ವಿವಿಧ ಚಿಕಿತ್ಸೆಗಳ ಕುರಿತು ಆರಿವು ಸೀಮಿತವಾಗಿದೆ. ಆಟಿಸಂ ಪೀಡಿತ ಮಕ್ಕಳ ಪ್ರತಿಭೆಯನ್ನು ಅನಾವರಣ ಮಾಡಲು ಶನಿವಾರ (ಡಿ.15) ‘ಕಲಾಸೌರಭ-2’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆಟಿಸಂ ಸೊಸೈಟಿ ಆಫ್ ಉಡುಪಿಯ ಸಂಚಾಲಕಿ ಅಮಿತಾ ಪೈ ಹೇಳಿದ್ದಾರೆ.
ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. “ಆಟಿಸಂ ಸ್ಪೆಕ್ರೈಮ್ ಡಿಸಾರ್ಡರ್ – ಮಕ್ಕಳಲ್ಲಿ ಮೆದುಳಿನ ಬೆಳವಣಿಗೆಗೆ ಸಂಬಂಧಿಸಿದ ನರವೈಜ್ಞಾನಿಕ ಪರಿಸ್ಥಿತಿಗಳಿಗೆ ಸಂಭಂದಿಸಿದ ಸಮಸ್ಯೆಯಾಗಿದೆ. ಆಟಿಸಂಗೆ ತುತ್ತಾದ ಮಕ್ಕಳಲ್ಲಿ ಸಾಮಾಜಿಕ ಕೌಶಲ್ಯಗಳು, ಸಂವಹನ ಮತ್ತು ಪುನರಾವರ್ತಿತ ನಡವಳಿಕೆಗಳಲ್ಲಿ ತೊಂದರೆಗಳಾಗುತ್ತವೆ. ಅಂತಹ ಪ್ರತಿ ಮಗು ವಿಶಿಷ್ಟವಾಗಿದ್ದು, ಅವರು ತಮ್ಮದೇ ಆದ ಸವಾಲುಗಳನ್ನು ಮತ್ತು ಸಾಮರ್ಥ್ಯಗಳನ್ನು ಹೊಂದಿರುತ್ತಾರೆ. ಈ ಸ್ಥಿತಿಯನ್ನು ಆರಂಭದಲ್ಲಿಯೇ (2-5 ವರ್ಷಗಳು) ಗುರುತಿಸಿ ಸೂಕ್ತವಾದ ಚಿಕಿತ್ಸೆ ಮತ್ತು ತರಬೇತಿ ನೀಡಿದರೆ, ಅವರಲ್ಲಿ ಗಮನಾರ್ಹ ಬದಲಾವಣೆ ಕಾಣಬಹುದು. ಅವರಿಗೆ ಜೀವನ ಕೌಶಲಗಳನ್ನು ಕಲಿಸಬಹುದು ಮತ್ತು ಅವರಲ್ಲಿರುವ ನಿರ್ದಿಷ್ಟ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು” ಎಂದು ಹೇಳಿದರು.
“ಆಟಿಸಂ ಸೊಸೈಟಿ ಆಫ್ ಉಡುಪಿ ಸಂಸ್ಥೆಯು ಪೋಷಕರು, ವಿಶೇಷ ಶಾಲಾ ಶಿಕ್ಷಕರು, ದಾದಿಯರು ಮತ್ತು ಇತರ ವೈದ್ಯಕೀಯ ವೃತ್ತಿಪರರಲ್ಲಿ ಆಟಿಸಂ ಬಗ್ಗೆ, ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತದೆ. ಅವರ ಆರೈಕೆಯಲ್ಲಿ ತೊಡಗಿಕೊಂಡಿರುವವರಿಗೆ ಮತ್ತು ಮಕ್ಕಳ ಅಭಿವೃದ್ಧಿ ತಂತ್ರಗಳಲ್ಲಿ ತರಬೇತಿ ನೀಡುವವರಿಗೆ ನಾವು ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತೇವೆ. ಬೆಂಬಲ ಗುಂಪುಗಳ ಮೂಲಕ ಸ್ವಲೀನತೆ ಹೊಂದಿರುವ ತಮ್ಮ ಮಗುವನ್ನು ಸ್ವೀಕರಿಸುವ ಮತ್ತು ಕಾಳಜಿ ವಹಿಸುವ ಪೋಷಕರ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸಲು ನಾವು ಅವರಿಗೆ ಸೂಕ್ತ ಮಾರ್ಗದರ್ಶನವನ್ನು ಒದಗಿಸುತ್ತಿದ್ದೇವೆ” ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಖ್ಯಾತ ಮನೋ ವೈದ್ಯ ಪಿ.ವಿ ಭಂಡಾರಿ, “ವೈದ್ಯಕೀಯ ಮತ್ತು ಮಾನಸಿಕ ತಜ್ಞರ ಮಾರ್ಗದರ್ಶನದಲ್ಲಿ ಉತ್ತಮ ಗುಣಮಟ್ಟದ ಸ್ವಲೀನತೆಯ ಆರೈಕೆ ಅಭ್ಯಾಸಗಳ ಆಧಾರದ ಮೇಲೆ ಸ್ವಲೀನತೆ ಹೊಂದಿರುವ ಮಕ್ಕಳಿಗೆ ಮೀಸಲಾದ ವೈಯಕ್ತಿಕ ಅಭಿವೃದ್ಧಿ ಶಿಕ್ಷಣವನ್ನು ಒದಗಿಸಲು ಉಡುಪಿಯಲ್ಲಿ ಸುಧಾರಿತ ಆಟಿಸಂ ಕೇಂದ್ರವನ್ನು ರಚಿಸುವುದು ನಮ್ಮ ಮುಂದಿನ ಪ್ರಯತ್ನವಾಗಿದೆ” ಎಂದರು.
“ವಿಶೇಷ ಮಕ್ಕಳ ವಿಶೇಷ ಪ್ರತಿಭೆಗಳನ್ನು ಅನಾವರಣಗೊಳಿಸುವ ಮತ್ತು ವಿಶೇಷ ಮಕ್ಕಳಿಗೂ ಅವಕಾಶ ಕಲ್ಪಿಸಿ ಕೊಡಬೇಕು ಎಂಬ ನಿಟ್ಟಿನಲ್ಲಿ ‘ಕಲಾಸೌರಭ-2’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬನ್ನಂಜೆಯ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಕಾರ್ಯಕ್ರಮವು ಶನಿವಾರ ಬೆಳಿಗ್ಗೆ 9 ರಿಂದ 4 30 ರವರೆಗೆ ನಡೆಯಲಿದೆ” ಎಂದು ತಿಳಿಸಿದ್ದಾರೆ.
“ವಿಶೇಷ ಮಕ್ಕಳ ಪ್ರತಿಭೆಯನ್ನು ಪ್ರದರ್ಶಿಸಲು ಉಡುಪಿಯ ವಿಶೇಷ ಶಾಲೆಗಳಿಗೆ ವೇದಿಕೆ ಕಲ್ಪಿಸಲು ಮೀಸಲಾಗಿರುವ ಏಕೈಕ ಕಾರ್ಯಕ್ರಮ ಇದಾಗಿದೆ. ಈ ವರ್ಷ ಜಿಲ್ಲೆಯಾದ್ಯಂತ 15 ವಿಶೇಷ ಶಾಲೆಗಳ 225 ವಿಶೇಷ ಮಕ್ಕಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಜಿಲ್ಲಾ ಆಡಳಿತ ಉಡುಪಿ, ಡಿಸೆಬಿಲಿಟಿ ಎನ್fಜಿಒ ಎಲೈಸ್, ಡಾ. ಜಿಲ್. ಶಂಕರ ಮಹಿಳಾ ಪ್ರಥಮ ದರ್ಜೆ ಹಾಗೂ ಉನ್ನತ ವ್ಯಾಸಂಗ ಕೇಂದ್ರ ಅಜ್ಜರಕಾಡು, ಉಡುಪಿ, ಜಿ.ಸಿ.ಐ ಉಡುಪಿ ಇಂದ್ರಾಳಿ ಇವರು ತಮ್ಮ ಸಹಾಕರವನ್ನು ನೀಡಿದ್ದಾರೆ” ಎಂದು ವಿವರಿಸಿದ್ದಾರೆ.
“ಜೊತೆಗೆ, ವಿವಿಧ ಆಫ್ ಸ್ಟೇಜ್ ಆಕರ್ಷಣೆಗಳಾದ ಸ್ಟಾಲ್ಗಳು ಇನ್ನು ಖ್ಯಾತ ವ್ಯಂಗ್ಯ ಚಿತ್ರಕಾರ ಸತೀಶ್ ಆಚಾರ್ಯ ಅವರು ಭಾಗವಹಿಸಲಿದ್ದು ವಿಶೇಷ ಮಕ್ಕಳ ಅಭಿವೃದ್ಧಿಗಾಗಿ ನಿಧಿ ಸಂಗ್ರಹದ ಉದ್ದೇಶದಿಂದ ಸ್ಥಳದಲ್ಲೇ ನಿಮ್ಮ ಕಾರ್ಟೂನ್ ಗಳನ್ನು ಬರೆದು ಕೊಡಲಿದ್ದಾರೆ ನೀವು ನೀಡುವ ಹಣವನ್ನು ವಿಶೇಷ ಮಕ್ಕಳ ನಿಧಿಗೆ ನೀಡಲಿದ್ದಾರೆ. ಇದರೊಂದಿಗೆ ಇನ್ನೂ ಅನೇಕ ಚಟುವಟಿಕೆಗಳು ಸಹ ಸ್ಥಳದಲ್ಲಿ ಇರುತ್ತವೆ” ಎಂದು ಹೇಳಿದ್ದಾರೆ.