ಕಲಬುರಗಿ ಮಹಾನಗರ ಪಾಲಿಕೆ ಪೌರಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಹಲವು ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಅಧಿಕಾರಿಗಳು ಪೌರಕಾರ್ಮಿಕರ ಸಮಸ್ಯೆಗೆ ಸ್ಪಂದಿಸದೆ ಇರುವುದರಿಂದ ಅಧಿಕಾರಿಗಳ ವಿರುದ್ಧ ರಸ್ತೆತಡೆದು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.
ಸಮಸ್ಯೆಗೆ ಪರಿಹಾರ ಒದಗಿಸುವವರೆಗೆ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮುಂದುವರೆಸುತ್ತೇವೆಂದು ಪಟ್ಟುಹಿಡಿದ ಪೌರಕಾರ್ಮಿಕರು ಜಿಲ್ಲಾಧಿಕಾರಿ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆ ಬೆಂಬಲಿಸಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಮಾತನಾಡಿ. “ಪೌರಕಾರ್ಮಿಕರ ಸಮಸ್ಯೆಗಳು ಕಳೆದ ಅನೇಕ ವರ್ಷಗಳಿಂದ ಒಂದಲ್ಲ ಒಂದು ಸ್ವರೂಪದಲ್ಲಿ ಹೆಚ್ಚಾಗುತ್ತಲೇ ಇವೆ. ಅವರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮಹಾನಗರಪಾಲಿಕೆ ಮತ್ತು ಜಿಲ್ಲಾಡಳಿತ ತೀವ್ರ ನಿರ್ಲಕ್ಷ್ಯ ಹೊಂದಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ” ಎಂದು ದೂರಿದರು.

“ಕಲಬುರಗಿ ನಗರವು ದಿನೇ ದಿನೆ ಬೆಳೆಯುತ್ತಲೇ ಇದೆ. ನಗರವನ್ನು ಆರೋಗ್ಯಪೂರ್ಣವಾಗಿಡುವಲ್ಲಿ ಪೌರಕಾರ್ಮಿಕರ ಶ್ರಮವೇ ಪ್ರಧಾನವಾದದ್ದು. ಆದರೆ ಇದನ್ನು ಆಡಳಿತ ವರ್ಗವು ಆಧ್ಯತೆಯಾಗಿ ಪರಿಗಣಿಸುತ್ತಿಲ್ಲ. ಪೌರಕಾರ್ಮಿಕರಲ್ಲಿ ದಲಿತ ದಮನಿತ ಜನಸಮುದಾಯವೇ ಇರುವುದನ್ನು ಗಮನಿಸಬೇಕು. ಕೋವಿಡ್ ಸಮಯದಲ್ಲಿ ಪೌರಕಾರ್ಮಿಕರ ಶ್ರಮವು ಯಾವುದಕ್ಕೂ ಸಾಟಿಯಿಲ್ಲದ್ದು, ಜೀವದ ಹಂಗು ತೊರೆದು ನಗರದ ಜನತೆಯ ಆರೋಗ್ಯ ಕಾಪಾಡಿದ್ದು ಇದೇ ಪೌರಕಾರ್ಮಿಕರು, ಆದರೆ ಇವರ ಸಮಸ್ಯೆಗಳು ಬಂದಾಗ ಪರಿಹರಿಸುವಲ್ಲಿ ಸರ್ಕಾರವು ಆಸಕ್ತಿ ಹೊಂದಿದ್ದರೆ ಈಗ ಉದ್ಭವವಾದ ಸಮಸ್ಯೆಗಳು ಬಹಳ ಬೇಗ ಪರಿಹಾರಗೊಳ್ಳುತ್ತಿದ್ದವು” ಎಂದು ಸರ್ಕಾರಕ್ಕೆ ತಾಕೀತು ಮಾಡಿದರು.
“ಎಲ್ಲ ಪೌರ ಕಾರ್ಮಿಕರ ಹುದ್ದೆಯನ್ನು ಖಾಯಂಗೊಳಿಸಬೇಕು. ಇನ್ನೂ ಅಗತ್ಯವಿರುವ ಪೌರಕಾರ್ಮಿಕರ ನೇಮಕಾತಿ ಮಾಡಿಕೊಳ್ಳಬೇಕು. ಗುತ್ತಿಗೆ ಪದ್ಧತಿ ರದ್ದುಗೊಳಿಸಬೇಕು. ಗುತ್ತಿಗೆ ಪದ್ಧತಿ ರದ್ದುಗೊಳಿಸುವವರೆಗೆ ಎಲ್ಲ ಪೌರಕಾರ್ಮಿಕರ ಮಾಸಿಕ ವೇತನವು ವಿಳಂಬವಿಲ್ಲದೆ ನಿಗದಿಯಾಗಿದ್ದಷ್ಟು ಪ್ರತಿ ತಿಂಗಳು ಪೂರ್ಣ ಪಾವತಿ ಮಾಡಬೇಕು. ನೇರ ಪಾವತಿಯಡಿ ಕಾರ್ಮಿಕರಿಗೆ ವೇತನ ಪಾವತಿಯಾಗಬೇಕು. ಮಾಸಿಕ ₹31,000 ಕನಿಷ್ಠ ಕೂಲಿ ಸಿಗುವಂತಾಗಬೇಕು” ಎಂದು ಒತ್ತಾಯಿಸಿದರು.
“ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯ ಆಯುಕ್ತರು ಕೂಡಲೇ ಜಂಟಿಸಭೆ ನಡೆಸಿ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಿಕೊಂಡು ನೇಮಕಾತಿ ಆದೇಶವನ್ನು ಜಾರಿಗೊಳಿಸಬೇಕು. ಸರ್ಕಾರವೇ ನೇಮಕಾತಿಗಾಗಿ ಆದೇಶ ಮಾಡಿದರೂ ಆನೇಕ ವರ್ಷಗಳಿಂದ ತಟಸ್ಥಗೊಳಿಸಿದ್ದು ಅಕ್ಷಮ್ಯವಾದ ನಡೆಯಾಗಿದೆ. ಇದನ್ನು ಕೂಡಲೇ ಸರಿಪಡಿಸಬೇಕು. ನೇಮಕಾತಿಯ ಅಧಿಕಾರವು ಮಹಾನಗರಸಭೆಯ ಆಯುಕ್ತರಿಗಿದೆ ಎಂಬುದು ಸರ್ಕಾರದ ಆದೇಶವಾಗಿದೆ. ಇದು ಜಾರಿಯಾಗಬೇಕು” ಎಂದು ಆಗ್ರಹಿಸಿದರು.
“ಪೌರಕಾರ್ಮಿಕರೊಂದಿಗೆ ಸರ್ಕಾರ ಕೂಡಲೇ ಮಾತುಕತೆಗೆ ಮುಂದಾಗಿ ಅವರ ಅಹವಾಲುಗಳನ್ನು ಆಲಿಸಿ ಬೇಡಿಕೆಗಳನ್ನು ಪರಿಹರಿಸಬೇಕು. ಸೇವಾ ಹಿರಿತನ ಆಧಾರಿತ ಹಾಗೂ ಆರು ತಿಂಗಳಿಗೊಮ್ಮೆ ತುಟ್ಟಿ ಭತ್ಯೆ ನೀಡಬೇಕು” ಎಂಬುದು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಉಪಯೋಗವಾಗದ ಅಂಡರ್ ಪಾಸ್; ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಹಿಡಿಶಾಪ
ಈ ಸಂದರ್ಭದಲ್ಲಿ ಡಾ. ಮಿನಾಕ್ಷಿ ಬಾಳಿ, ಶ್ರೀಮಂತ ಬಿರಾದಾರ, ಶರಣಬಸಪ್ಪ ಮಮಶೆಟ್ಟಿ, ಸುಧಾಮ ಧನ್ನಿ, ವಿರೂಪಾಕ್ಷಪ್ಪ ತಡಕಲ್, ಮೇಘರಾಜ ಕರಾಠೆ, ಪಾಂಡುರಂಗ ಮಾವಿನಕರ್, ಚಂದಮ್ಮ ಮಾವಿನಕರ್ ಸೇರಿದಂತೆ ಪೌರಕಾರ್ಮಿಕರು ಇದ್ದರು.