ರೈತರು ಸೇರಿದಂತೆ ಪ್ರತಿಯೊಬ್ಬರೂ ತಮ್ಮ ಜಮೀನುಗಳಲ್ಲಿ ಶ್ರೀಗಂಧ ಬೆಳೆಯುವ ನಿಟ್ಟಿನಲ್ಲಿ ಇರುವ ನೀತಿ ನಿಯಮಗಳಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಶೀಘ್ರವೇ ಹೊಸ ನೀತಿ ಪ್ರಕಟಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಕಲಬುರಗಿ ನಗರದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ್ದ ಅವರನ್ನು ರೈತರು ಹಾಗೂ ಶ್ರೀಗಂಧ ಬೆಳೆಗಾರರು ಭೇಟಿ ಮಾಡಿ ಮನವಿ ಸಲ್ಲಿಸಿದ ವೇಳೆ ಮಾತನಾಡಿದರು.
“ಶ್ರೀಗಂಧ ಬೆಳೆಯಲು ಇರುವ ತೊಡಕುಗಳನ್ನು ಕೂಡಲೇ ಸರಳೀಕರಣ ಗೊಳಿಸುವ ನಿಟ್ಟಿನಲ್ಲಿ ಸಭೆ ಮಾಡಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅಂತಿಮ ಗೊಳಿಸಲಾಗುವುದು” ಎಂದರು.
“ಕಲ್ಯಾಣ ಕರ್ನಾಟಕ ಭಾಗದಲ್ಲಿ ಅರಣ್ಯ ವಿಸ್ತರಣೆಗೆ ಬೇಕಾದ ಅನುದಾನವನ್ನು ಶೀಘ್ರದಲ್ಲೇ ನೀಡಲಾಗುವುದು. ಅಲ್ಲದೆ, ಖಾಲಿ ಇರುವ ಹುದ್ದೆಗಳನ್ನೂ ಶೀಘ್ರದಲ್ಲಿಯೇ ಭರ್ತಿ ಮಾಡಲಾಗುವುದು” ಎಂದು ಭರವಸೆ ನೀಡಿದರು.
“ಸಾಮಾಜಿಕ ಅರಣ್ಯ ಯೋಜನೆ ಅಡಿಯಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ನೀಡುತ್ತಿರುವ ಸಸಿಗಳನ್ನು ಮರಗಳನ್ನಾಗಿ ಬೆಳೆಸುವ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದ್ದು, ಪ್ರೋತ್ಸಾಹ ಧನ ಯೋಜನೆಯಲ್ಲಿ ರೈತರಿಗೆ ನೀಡಲಾಗುತ್ತಿರುವ ಸಸಿಗಳು ಎಷ್ಟು ಪ್ರಮಾಣದಲ್ಲಿ ಉಳಿದುಕೊಂಡಿವೆ ಎಂದು ಮಾಹಿತಿ ಕೇಳಿದಾಗ, ಅಧಿಕಾರಿಗಳು ಶೇ. 80ರಷ್ಟು ಉಳಿದಿದೆ” ಎಂದು ಹೇಳಿದರು.
“ಮಲೆನಾಡಿನಲ್ಲೇ ಶೇ.70 ಹಾಗೂ 60ರಷ್ಟು ಉಳಿಯುವಾಗ ಬಿಸಿಲುನಾಡಾದ ಕಲ್ಯಾಣದಲ್ಲಿ ಶೇ.80ರಷ್ಟು ಉಳಿಯಲು ಹೇಗೆ ಸಾಧ್ಯ. ಈ ಕುರಿತು ಸರಿಯಾಗಿ ಪರೀಕ್ಷೆ ಮಾಡಿ ತಿಳಿಸಿ” ಎಂದು ಸಚಿವರು ಸೂಚಿಸಿದರು.
“ನರ್ಸರಿ ಬೆಳೆಯುವ ಪ್ರಮಾಣವನ್ನು ಹೆಚ್ಚಿಸುವುದು ಮತ್ತು ಉದ್ಯಾನ ನಿರ್ಮಾಣ ಹಾಗೂ ಪ್ರವಾಸಿ ತಾಣಗಳನ್ನಾಗಿ ಪರಿವರ್ತನೆ ಮಾಡುವಂತಹ ಕೆಲವು ವಿಶೇಷ ಸ್ಥಳಗಳ ಬಗ್ಗೆ ಮಾಹಿತಿ ನೀಡಬೇಕು. ದೈವಿ ವನದ ಕುರಿತು ಹೆಚ್ಚು ಮುತುವರ್ಜಿ ವಹಿಸಬೇಕು” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್ ಪ್ರತಿಭಟನೆ ಕಾಣದ ಕೈಗಳ ವಿರುದ್ಧವೇ ಹೊರತು ಕೋರ್ಟ್ ವಿರುದ್ಧ ಅಲ್ಲ: ಗಂಗಾಧರ ದೊಡವಾಡ
“ರಾಜ್ಯದಲ್ಲಿ ಸಾಮಾಜಿಕ ಅರಣ್ಯವನ್ನು ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಐದು ಕೋಟಿ ಸಸಿಗಳನ್ನು ನೆಡುವ ಉದ್ದೇಶ ಸಾಫಲ್ಯ ಮಾಡಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ರಾಯಚೂರು, ಯಾದಗಿರಿ ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳ ಅಧಿಕಾರಿಗಳು ಇದ್ದರು.