ಎಲ್ಲ ಬೆಳೆಗಳಿಗೆ ಕಾನೂನುಬದ್ಧ ಕನಿಷ್ಠ ಬೆಂಬಲ ಬೆಲೆ, ನಾಲ್ಕು ಕಾರ್ಮಿಕ ಸಂಹಿತೆಗಳ ರದ್ದತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕ ಕಾರ್ಮಿಕ ಸಂಘಟನೆಗಳ ಕಲಬುರಗಿ ಜಂಟಿ ಸಮಿತಿ ಜಿಲ್ಲಾ ಘಟಕದ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಕನಿಷ್ಠ ವೇತನ ಜಾರಿಗೆ ತಂದು, ತಿಂಗಳಿಗೆ ₹26 ಸಾವಿರ ನೀಡಬೇಕು. ಮಾಸಿಕ ₹10 ಸಾವಿರ ಪಿಂಚಣಿ ನೀಡಿ, ಸಂಘಟಿತ– ಅಸಂಘಟಿತ, ವಿವಿಧ ಯೋಜನೆಗಳ ಕಾರ್ಯಕರ್ತರು, ಗುತ್ತಿಗೆ ಹಾಗೂ ಕೃಷಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯ ಪ್ರಯೋಜನೆಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, “ಕಾರ್ಮಿಕರು ಮತ್ತು ರೈತರು ಜಂಟಿಯಾಗಿ ಇಂದು ಭಾರತದಾದ್ಯಂತ ನಮ್ಮ ಸಮಸ್ಯೆಗಳನ್ನು ಎತ್ತಿ ಹಿಡಿಯಲು ಮತ್ತು ಪರಿಹಾರಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದು, ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ರಾಷ್ಟ್ರವ್ಯಾಪಿ ಮುಷ್ಕರವನ್ನು ಆಚರಿಸಿದ ದಿನ ಮತ್ತು ರೈತರು 2020 ರಲ್ಲಿ ಮೂರು ಕೃಷಿ ಕಾನೂನುಗಳ ವಿರುದ್ಧ ಸಂಸತ್ತಿನತ್ತ ತಮ್ಮ ಐತಿಹಾಸಿಕ ಮೆರವಣಿಗೆಯನ್ನು ಪ್ರಾರಂಭಿಸಿದ್ದರಿಂದ, ನಾವು ಚಳವಳಿಯ ಮೂಲಕ ನವೆಂಬರ್ 26 ಅನ್ನು ಪ್ರತಿಭಟನಾ ದಿನವನ್ನಾಗಿ ಆರಿಸಿದ್ದೇವೆ” ಎಂದರು.
“ಕಾರ್ಪೊರೇಟ್ಗಳು ಮತ್ತು ಅತಿ ಶ್ರೀಮಂತರನ್ನು ಶ್ರೀಮಂತಗೊಳಿಸುವ ಗುರಿಯನ್ನು ಹೊಂದಿರುವ ಎನ್ಡಿಎ-3 ಸರ್ಕಾರದ ನೀತಿಗಳೊಂದಿಗೆ ಭಾರತದ ದುಡಿಯುವ ಜನರು ಆಳವಾದ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿದರು.
ಸಾಲಬಾಧೆ ಮತ್ತು ಆತ್ಮಹತ್ಯೆಗಳನ್ನು ಕೊನೆಗೊಳಿಸಲು ರೈತರ ಮತ್ತು ಕೃಷಿ ಕಾರ್ಮಿಕರ ಸಾಲವನ್ನು ಮನ್ನಾ ಮಾಡಬೇಕು. ಕಾರ್ಮಿಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಬೇಕು. ಸಾರ್ವಜನಿಕ ವಲಯದ ಉದ್ಯಮಗಳ ಖಾಸಗೀಕರಣ ನಿಲ್ಲಿಸಿ, ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್, ಗೃಹ ಹಾಗೂ ಅಂಗಡಿಗಳಿಗೆ 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಬೇಕು ಎಂದು ಕೋರಿದರು.
ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಿ, 200 ದಿನಗಳ ಕೆಲಸ ಮತ್ತು ₹600 ಕೂಲಿ ನಿಗದಿ ಮಾಡಬೇಕು. ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಬಲಪಡಿಸಿ, ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಹಾಗೂ ಆರೋಗ್ಯವನ್ನು ಖಚಿತಪಡಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಲಬುರಗಿ ಇವರ ಮುಖಾಂತರ ರಾಷ್ಟ್ರಪತಿ ಇವರಿಗೆ ಮನವಿ ಪತ್ರ ಸಲ್ಲಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಬೋಧಗಯಾ ಆಡಳಿತ ಹಸ್ತಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ
ಪ್ರತಿಭಟನೆಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಶರಣಬಸಪ್ಪ ಮಮಶೆಟ್ಟಿ, ಮಹೇಶ ಎಸ್.ಬಿ. ಭೀಮಶೆಟ್ಟಿ ಯೆಂಪಳ್ಳಿ, ಎಂ.ಬಿ. ಸಜ್ಜನ್, ಪ್ರಭುದೇವ ಯಳಸಂಗಿ, ಎಸ್.ಎಂ. ಶರ್ಮಾ, ಶ್ರೀಮಂತ ಬಿರಾದಾರ, ನಾಗಯ್ಯ ಸ್ವಾಮಿ, ಕಾಶಿನಾಥ ಬಂಡಿ, ಗೌರಮ್ಮ ಪಾಟೀಲ್ ಪಾಲ್ಗೊಂಡಿದ್ದರು.