ಕಲಬುರಗಿ ನಗರದ ರಿಂಗ್ ರಸ್ತೆಯ ಎಸ್ಬಿಐ ಎಟಿಎಂ ದರೋಡೆ ಮಾಡಿದ ಪ್ರಕರಣದ ಇಬ್ಬರು ಆರೋಪಿಗಳ ಕಾಲಿಗೆ ಸಬ್ ಅರ್ಬನ್ ಠಾಣೆಯ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಹರಿಯಾಣ ಮೂಲದ ದರೋಡೆ ಪ್ರಕರಣದ ಆರೋಪಿಗಳಾದ ತಸ್ಲೀಮ್(28) ಮತ್ತು ಷರೀಫ್(22) ಗಾಯಗೊಂಡವರು. ಜಿಮ್ಸ್ ಆವರಣದ ಟ್ರಾಮಾ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಲಬುರಗಿಯ ಬೇಲೂರ ಕ್ರಾಸ್ ಕೈಗಾರಿಕಾ ಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ ಆರೋಪಿಗಳನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದರು. ಕಾನ್ಸ್ಟೆಬಲ್ಗಳಾದ ಮಂಜು, ಫಿರೋಜ್ ಮತ್ತು ರಾಜಕುಮಾರ್ ಅವರ ಮೇಲೆ ದಾಳಿ ಮಾಡಿದ್ದರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಶರಣಾಗುವಂತೆ ಸೂಚಿಸಿದರೂ ಕೂಡ ಆರೋಪಿಗಳು ದಾಳಿ ನಡೆಸುತ್ತಿದ್ದರು. ಅನಿವಾರ್ಯವಾಗಿ ಆತ್ಮರಕ್ಷಣೆಗಾಗಿ ಸಬ್ ಅರ್ಬನ್ ಠಾಣೆಯ ಸಿಪಿಐ ಸಂತೋಷ್ ತಟ್ಟೆಪಲ್ಲಿ ಹಾಗೂ ಪಿಎಸ್ಐ ಬಸವರಾಜ ಅವರು ತಸ್ಲೀಮ್ ಮತ್ತು ಷರೀಫ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಕಾನ್ಸ್ಟೆಬಲ್ಗಳು ಹಾಗೂ ಗುಂಡೇಟು ತಿಂದ ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ಹೇಳಿವೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಉಗ್ರರ ದಾಳಿಗೆ ಮೃತರಾದ ಮಂಜುನಾಥ್ ಮನೆಗೆ ಎಚ್ ಆರ್ ಬಸವರಾಜಪ್ಪ ಭೇಟಿ ಸಾಂತ್ವನ
ಬಂಧಿತ ದರೋಡೆಕೋರರಾದ ತಸ್ಲೀಮ್ ವಿರುದ್ಧ 8 ಹಾಗೂ ಷರೀಫ್ ವಿರುದ್ಧ 3 ಪ್ರಕರಣಗಳು ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಎಟಿಎಂ ದರೋಡೆ ಸಂಬಂಧ ಪ್ರಕರಣಗಳು ದಾಖಲಾಗಿವೆ.
ಕಲಬುರಗಿ ನಗರದ ರಿಂಗ್ ರಸ್ತೆಯ ರಾಮನಗರದಲ್ಲಿ ಏಪ್ರಿಲ್ 9ರಂದು ಇದೇ ಆರೋಪಿಗಳು ಎಸ್ಬಿಐ ಎಟಿಎಂ ಕೇಂದ್ರಕ್ಕೆ ನುಗ್ಗಿ, ಸಿಸಿಟಿವಿ ಕ್ಯಾಮೆರಾಗಳ ಮೇಲೆ ಕಪ್ಪು ಬಣ್ಣದ ಸ್ಪ್ರೇ ಎರಚಿ, ಎಟಿಎಂ ಯಂತ್ರವನ್ನು ಧ್ವಂಸಮಾಡಿ ₹18 ಲಕ್ಷ ದರೋಡೆ ಮಾಡಿದ್ದರು.
