ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯನವರು ಶುಕ್ರವಾರ 4.09 ಲಕ್ಷ ಕೋಟಿ ರೂ. 2025-26ನೇ ಸಾಲಿನ 16ನೇ ರಾಜ್ಯ ಬಜೆಟ್ನಲ್ಲಿ ರಾಜ್ಯದ ದೊಡ್ಡ ಮಾನವ ಸಂಪನ್ಮೂಲವಾಗಿರುವ ಯುವಜನರಿಗೆ ಅತ್ಯಗತ್ಯವಿರುವ ಉದ್ಯೋಗ ಸೃಷ್ಠಿಸಿ, ಉದ್ಯೋಗ ಖಾತ್ರಿಗೊಳಿಸದೆ ಯುವಜನರಿಗೆ ನಿರಾಸೆಯನ್ನು ಮೂಡಿಸಿದ ಬಜೆಟ್ ಆಗಿದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಕರ್ನಾಟಕ ರಾಜ್ಯ ಸಮಿತಿ ಖಂಡಿಸುತ್ತದೆ ಎಂದು ರಾಜ್ಯ ಅಧ್ಯಕ್ಷೆಯಾದ ಲವಿತ್ರ ವಸ್ತ್ರದ ತಿಳಿಸಿದರು.
ʼಉದ್ಯೋಗಕ್ಕಾಗಿ ಹಂಬಲಿಸುತ್ತಿರುವ ರಾಜ್ಯದ ಯುವಜನತೆಯು ಮುಖ್ಯಮಂತ್ರಿಗಳು ಉದ್ಯೋಗ ನೀತಿ ಜಾರಿಗೊಳಿಸಿ ಉದ್ಯೋಗ ಭರವಸೆ ನೀಡುತ್ತಾರೆಂದು ಭಾವಿಸಿದ್ದರು, ಆದರೆ ಸಿಎಂ ಸಿದ್ರಾಮಯ್ಯನವರು ಮಂಡಿಸಿದ ದಾಖಲೆಯ 16ನೇ ಬಜೆಟ್ ರಾಜ್ಯದ ಯುವಜನರ ಬದುಕಿನ ಭದ್ರತೆಯ ಕುರಿತು ಯಾವುದೇ ಸ್ಪಷ್ಟ ಕಣ್ಣೋಟ ಹೊಂದಿಲ್ಲ ಎಂಬುದನ್ನು ಸಾಬೀತು ಪಡಿಸಿದೆʼ ಎಂದು ಸಂಘಟನೆಯ ಸದಸ್ಯರು ಆರೋಪಿಸಿದ್ದಾರೆ.
ʼಶಿಕ್ಷಣ ಇಲಾಖೆಯಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವುದು ಎಂಬ ಒಂದಂಶ ಹೊರತುಪಡಿಸಿದರೆ, ರಾಜ್ಯ ಸರಕಾರದಡಿ ಖಾಲಿಯಿರುವ ಎರಡು ಲಕ್ಷ ಎಪ್ಪತ್ತು ಸಾವಿರ ಹುದ್ದೆಗಳ ಭರ್ತಿಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ ರಾಜ್ಯಕ್ಕೆ ಅಗತ್ಯವಿರುವ ಯುವ ನೀತಿಯನ್ನೂ ಕೂಡ ಜಾರಿ ಮಾಡಲು ಮುಂದಾಗಿಲ್ಲ. ಇದು ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಯುವಜನರಿಗೆ ಸಹಜವಾಗಿಯೇ ನಿರಾಸೆ ಮೂಡಿಸಿದ ಬಜೆಟ್ ಆಗಿದೆʼ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇವಲ ತರಬೇತಿ ನೀಡುವ ಬಜೆಟ್ ಪ್ರಸ್ತಾವನೆಗಳು ಯುವಜನರ ಬದುಕಿಗೆ ಭದ್ರತೆ ಖಾತ್ರಿಪಡಿಸುವುದಿಲ್ಲ. ಉದ್ಯೋಗದ ಖಾತ್ರಿ ನೀಡದೇ ಕೇವಲ ಟ್ರೈನಿಂಗ್ ನೀಡುತ್ತೇವೆಂಬುದು ರಾಜ್ಯ ಸರಕಾರ ಉದ್ಯೋಗಕ್ಕಾಗಿ ಪರದಾಡುತ್ತಿರುವ ಯುವಜನರ ಬದುಕಿನ ಜೊತೆ ಚಲ್ಲಾಟವಾಡಿದಂತಾಗುತ್ತದೆ ಎಂದು ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ʼಸರಕಾರ ಬಜೆಟ್ ನಲ್ಲಿ ಪ್ರಸ್ತಾಪಿಸಿರುವ ಯುವಜನ ಸಬಲೀಕರಣ ಕೇವಲ ಘೋಷಣೆಯಂತಿದೆ. ಕೌಶಲ್ಯ ಅಭಿವೃದ್ದಿ ತರಬೇತಿ ನೀಡುತ್ತೇವೆ ಎಂದು ಹೇಳುತ್ತಿದೆ. ಇದು ಕೇಂದ್ರ ಸರಕಾರದ ಬಜೆಟ್ ನಕಲಿನಂತೆ ಭಾಸವಾಗುತ್ತಿದೆ. ಏಕೆಂದರೆ ಕೇಂದ್ರ ಸರಕಾರವೂ ಕೂಡ ಕೌಶಲ್ಯಾಭಿವೃದ್ಧಿ ತರಬೇತಿಗೆ ಒತ್ತು ನೀಡಿತ್ತು. ಎಷ್ಟು ಜನರಿಗೆ ತರಬೇತಿ ಕೊಡಲಾಯ್ತು, ಆ ತರಬೇತಿ ಪಡೆದವರಲ್ಲಿ ಎಷ್ಟು ಜನರಿಗೆ ಉದ್ಯೋಗ ಒದಗಿಸಲಾಯಿತೆಂಬ ಮಾಹಿತಿ ಮಾತ್ರ ಸಿಗುವುದಿಲ್ಲ. ರಾಜ್ಯ ಸರಕಾರದ ಬಜೆಟ್ ಕೂಡ ಕೇಂದ್ರದ ದಾರಿಯಲ್ಲಿ ಸಾಗಿದ್ದು ಯುವಜನರಲ್ಲಿ ಭ್ರಮೆ ಹುಟ್ಟಿಸುವುದಾಗಿದೆʼ ಎಂದರು.
ರಾಜ್ಯದ ಯುವಜನತೆ ಸರಕಾರದ ಈ ಯುವಜನ ಹಾಗೂ ಜನಸಾಮನ್ಯರ ವಿರೋಧಿ ಬಜೆಟ್ ಅನ್ನು ತಿರಸ್ಕರಿಸಿ ಉದ್ಯೋಗ ಭದ್ರತೆ ಖಾತ್ರಿಪಡಿಸುವ ಯೋಜನೆಗಳನ್ನು ಜಾರಿಗೆ ತರಲು ಸರಕಾರ ಮುಂದಾಗುವಂತೆ ಒತ್ತಾಯಿಸಿ ಪ್ರತಿಭಟಿಸಲು ಡಿವೈಎಫ್ಐ ಜಿಲ್ಲಾ ಸಮಿತಿಯು ಕರೆ ನೀಡುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಒಂದೇ ಹಗ್ಗಕ್ಕೆ ಕೊರಳೊಡ್ಡಿ ಅಪ್ರಾಪ್ತ ಪ್ರೇಮಿಗಳ ಆತ್ಮಹತ್ಯೆ!
ಈ ವೇಳೆಯಲ್ಲಿ ಸಂಘಟನೆಯ ಪ್ರಮುಖರಾದ ಪ್ರಮೋದ ಪಾಂಚಾಳ, ಸಲ್ಮಾನ್ ಖಾನ್, ಗಿಡ್ಡಮ್ಮ ಪವಾರ, ಶಾಂತಕುಮಾರ ಗುಡುಬಾ ಸೇರಿದಂತೆ ಮತ್ತಿರರು ಇದ್ದರು.