ನಮ್ಮ ಎಲ್ಲ ಸಮಸ್ಯೆಗಳಿಗೂ ಮೂಲ ಕಾರಣವಾಗಿರುವ ಪ್ರಸಕ್ತ ಬಂಡವಾಳಶಾಹಿ ವ್ಯವಸ್ಥೆಯನ್ನು ಕಿತ್ತೊಗೆದು ಸಮಾಜವಾದಿ ಕ್ರಾಂತಿಯ ಮೂಲಕ ಶೋಷಣಾ ರಹಿತ ಸಮಾಜ ಸ್ಥಾಪಿಸಿದಾಗ ಮಾತ್ರ ಶಾಶ್ವತವಾದ ಪರಿಹಾರ ಸಾಧ್ಯ ಎಂದು ಎಸ್ಯುಸಿಐ (ಕಮ್ಯುನಿಸ್ಟ್) ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯ ಎಂ.ಶಶಿಧರ್ ಅಭಿಪ್ರಾಯಪಟ್ಟರು.
ಕಲಬುರಗಿ ನಗರದ ಈಶ್ವರ್ ಚಂದ್ರ ವಿದ್ಯಾಸಾಗರ್ ಸಭಾ ಭವನದಲ್ಲಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಎಸ್ಯುಸಿಐ ಜಿಲ್ಲಾ ಸಮಿತಿ ವತಿಯಿಂದ ಜರುಗಿದ ಪಕ್ಷದ 78ನೇ ಸಂಸ್ಥಾಪನ ದಿನಾಚರಣೆಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ʼದೇಶ ಸ್ವತಂತ್ರಗೊಂಡು 78 ವರ್ಷಗಳು ಗತಿಸಿದರೂ ಸಹ ಬಡತನ, ನಿರುದ್ಯೋಗ, ರೈತರ ಆತ್ಮಹತ್ಯೆ, ಬೆಲೆಏರಿಕೆ, ಅನಕ್ಷರತೆ, ಕೋಮುವಾದದಂತಹ ಸಮಸ್ಯೆಗಳು ದಿನನಿತ್ಯ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸುವಲ್ಲಿ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆʼ ಎಂದು ಆರೋಪಿಸಿದರು.
ʼಇತ್ತೀಚಿಗೆ ಕಾಶ್ಮೀರದ ಹಹಲ್ಗಾಮ್ನಲ್ಲಿ ನಡೆದ 28 ಅಮಾಯಕ ಪ್ರವಾಸಿಗರ ಕಗ್ಗೋಲೆಯನ್ನು ಸಹ ಅವರು ಉಗ್ರವಾಗಿ ಖಂಡಿಸಿದ ಅವರು, ʼಜನರ ಜೀವ ರಕ್ಷಣೆಯನ್ನು ಮಾಡುವಲ್ಲಿ ಸರ್ಕಾರಗಳು ನಿಷ್ಕಾಳಜಿ ವಹಿಸಿದೆʼ ಎಂದು ಆರೋಪಿಸಿದರು. ಅಲ್ಲದೆ, ಜನರ ಐಕ್ಯತೆಯನ್ನು ಮುರಿಯಲು ಜಾತಿವಾದ, ಕೋಮುವಾದ, ಪ್ರಾಂತಿಯ ಭಾವನೆಗಳನ್ನು ಸರ್ಕಾರಗಳು ಸೃಷ್ಟಿಸುತ್ತಿದ್ದು, ಜನರನ್ನು ಮೂಲಭೂತ ಸಮಸ್ಯೆಗಳಿಂದ ವಿಮುಖ ಮಾಡುತ್ತಿದೆʼ ಎಂದರು.
ʼವಿಶ್ವ ಬಂಡವಾಳವಾದವು ಅತ್ಯಂತ ಬಿಕ್ಕಟ್ಟಿನಲ್ಲಿರುವ ಈ ಸಂದರ್ಭದಲ್ಲಿ ಯುದ್ಧ ಅನಿವಾರ್ಯ ಎನ್ನುವ ವಾತಾವರಣ ಸೃಷ್ಟಿ ಮಾಡಲಾಗುತ್ತಿದೆ. ‘ವಿಶ್ವಶಾಂತಿಯು ಸಾಮ್ರಾಜ್ಯವಾದದ ಸಾವು’ ಎಂದು ನಡುಗುತ್ತಿರುವ ಸಾಮ್ರಾಜ್ಯವಾದವು ಕಾರ್ಮಿಕ ವರ್ಗದ ಕಾಂತಿಯಿಂದ ಇಂದು ಭಯಗೊಂಡಿದೆ. ಅಂತಿಮವಾಗಿ ಅವರು ಆರ್ಥಿಕ ಬಿಕ್ಕಟ್ಟು ಬಂಡವಾಳವಾದವನ್ನು ಸಂಕಷ್ಟಕ್ಕೆ ದೂಡಿದೆ. ಅದನ್ನು ಮರೆಮಾಚಲು ಬಡ ರಾಷ್ಟ್ರಗಳ ಮೇಲೆ ಯುದ್ಧದ ಅಕ್ರಮಣವನ್ನು ಮಾಡುತ್ತಿದೆʼ ಎಂದರು.
ʼಬಂಡವಾಳಶಾಹಿ ವ್ಯವಸ್ಥೆಯ ಸಾವಿನ ಅಂಚಿನಲ್ಲಿರುವುದರಿಂದ ಸಮಾಜದಲ್ಲಿ ಅತ್ಯಂತ ಕೊಳೆತ ಸಂಸ್ಕೃತಿಯು ಎಲ್ಲ ಕ್ಷೇತ್ರದಲ್ಲೂ ಬಿಂಬಿತವಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಸಮಾಜವಾದಿ ಕ್ರಾಂತಿಗಾಗಿ ನಾವು ಸಜ್ಜಾಗುವುದು ಅತ್ಯಂತ ಅವಶ್ಯಕವಾಗಿದೆ ಎಂದು ಮಾನವನಿಂದ ಮಾನವನ ಶೋಷಣೆಯನ್ನು ದೇಶದಲ್ಲಿ ಕೊನೆಗಾಣಿಸಲು ಮಾರ್ಕ್ಸವಾದಿ ಚಿಂತನೆಗಳ ಆಧಾರದ ಮೇಲೆ ಪ್ರಬಲ ಜನಾಂದೋಲನವನ್ನು ಬೆಳೆಸಬೇಕುʼ ಎಂದು ಕರೆ ನೀಡಿದರು.
ಎಸ್ಯುಸಿಐ ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರಾದ ಎ.ನಾಗಮ್ಮ, ರಾಮಣ್ಣ, ಎಸ್. ಇಬ್ರಾಹಿಂಪುರ್, ಗಣಪತರಾವ್ ಕೆ. ಮಾನೆ, ಜಿಲ್ಲಾ ಸಮಿತಿಯ ಕಾರ್ಯದರ್ಶಿ ಆರ್.ಕೆ.ವೀರಭದ್ರಪ್ಪ ಉಪಸ್ಥಿತರಿದ್ದರು.