ಕಾರ್ಕಳ ತಾಲೂಕಿನ ಬೈಲೂರು ಉಮಿಕಲ್ ಬೆಟ್ಟದ ಮೇಲೆ ಪರಶುರಾಮ ಪ್ರತಿಮೆ ನಿರ್ಮಾಣದ ಹೆಸರಿನಲ್ಲಿ ಭ್ರಷ್ಟಾಚಾರ ಎಸಗಿದ್ದು ಮಾತ್ರವಲ್ಲದೆ ದಿನಕ್ಕೊಂದು ಸುಳ್ಳು ಹೇಳುತ್ತಾ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಧರ್ಮ ವಿರೋಧಿ ಜನಪ್ರತಿನಿಧಿಯನ್ನು ಸಮಾಜ ಬಹಿಷ್ಕರಿಸದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಗ್ಯಾರಂಟಿ ಎಂದು ಕಾರ್ಕಳ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ ಹೇಳಿದ್ದಾರೆ.
ಬುಧವಾರ ಉಡುಪಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸುನಿಲ್ ಕುಮಾರ್ ನಿರಂತರ ಸುಳ್ಳು ಹೇಳಿ ಜನರನ್ನ ಮರಳು ಮಾಡುವ ಶಾಸಕ. ಈ ರೀತಿಯಲ್ಲಿ ಸುಳ್ಳು ಹೇಳುವ ಶಾಸಕರಿದ್ದರೆ ಅದು ಕಾರ್ಕಳದಲ್ಲಿ ಮಾತ್ರ. ರಾಜ್ಯ ಹಾಗೂ ಕೇಂದ್ರದಲ್ಲಿ ಕೂಡ ಇಂತಹ ಶಾಸಕ ಸಿಗಲಿಕ್ಕಿಲ್ಲ. ಇವರಿಗೆ ಪ್ರಚಂಡ ಸುಳ್ಳುಗಾರ ಎಂದು ಬಿರುದು ನೀಡಿದರೂ ತಪ್ಪಾಗಲಾರದು ಎಂದು ವ್ಯಂಗ್ಯವಾಡಿದರು.

ಸಾರ್ವಜನಿಕರ ಹಣ ಲೂಟಿ ಮಾಡಲಾಗಿದೆ ಎಂದು ಹೈಕೋರ್ಟ್ ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ, ಪರಶುರಾಮ ಮೂರ್ತಿಯ ಮೇಲ್ಭಾಗ ನಕಲಿ ಎಂದು ಗೊತ್ತಿದ್ದರೂ ಮೇಲ್ಬಾಗವನ್ನ ಎಲ್ಲಿಯೂ ಜನರಿಗೆ ಕಾಣಿಸದೆ ರಾತ್ರಿ ಕದ್ದು ಸಾಗಿಸಲಾಗಿದೆ. ನಿರಂತರವಾಗಿ ಜನರಿಗೆ ಸುಳ್ಳು ಹೇಳುತ್ತಾ ತಾನು ಮಾಡಿದೆ ಸರಿ ಎಂದು ಅಪಪ್ರಚಾರ ಮಾಡುತ್ತಿದ್ದ ಕಾರ್ಕಳ ಶಾಸಕರ ನಿಜ ಬಣ್ಣ ಬಯಲಾಗಿದೆ. ಇಷ್ಟಿದ್ದರೂ ಕೂಡ ಅಸಲಿ ಮೂರ್ತಿ ಎಂದು ಕೋರ್ಟಿಗೆ ಮತ್ತೆ ದಾಖಲೆಗಳನ್ನು ತಯಾರು ಮಾಡುತ್ತಿರುವ ಶಾಸಕರ ವರ್ತನೆ ನೋಡಿದರೆ ಅಚ್ಚರಿ ಎನಿಸುತ್ತಿದೆ ಎಂದು ಹೇಳಿದರು.
ಕೇವಲ ರಾಜಕೀಯ ಲಾಭಕ್ಕೋಸ್ಕರ ಪರಶುರಾಮ ಥಿಮ್ ಪಾರ್ಕ್ ಬಳಸಿಕೊಂಡು ಜನರ ಭಾವನೆ ಜೊತೆ ಚೆಲ್ಲಾಟವಾಡಲಾಗಿದೆ. ಕೂಡಲೇ ಸಮಾಜ ಬಹಿಷ್ಕರಿಸಬೇಕು ಮತ್ತು ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆಯಾಗಿ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ಪರಶುರಾಮ ಮೂರ್ತಿಯನ್ನು ತಯಾರು ಮಾಡಿರುವ ಕೃಷ್ಣ ನಾಯ್ಕ ಎಂಬವರಿಗೆ ಸರಿಯಾದ ಜ್ಞಾನ ಇಲ್ಲ. ಅವರು ಕೂಡ ದಿನಕೊಂದು ಕಥೆಗಳನ್ನ ಹೇಳುತ್ತಾರೆ. ಮುಂದಿನ ದಿನಗಳಲ್ಲಿ ಗುಣಮಟ್ಟದ ಪ್ರತಿಮೆ ನಿರ್ಮಾಣವಾಗಬೇಕಾದರೆ ಯಾವುದೇ ಕಾರಣಕ್ಕೂ ಮೂರ್ತಿಯ ಮರು ರಚನೆಗೆ ಕೃಷ್ಣ ನಾಯಕ್ ಅವರಿಗೆ ನೀಡದೆ ಬೇರೆ ಪರಿಣಿತ ತಂಡಕ್ಕೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
ಇದನ್ನು ಓದಿದ್ದೀರಾ? ಗದಗ | ‘ಜಿಮ್ಸ್’ನಿಂದ ಬಡವರ ದರೋಡೆ : ಆಸ್ಪತ್ರೆಯ ವಿರುದ್ಧ ಕ್ರಮಕ್ಕೆ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹ
ತಪ್ಪು ಹೇಳಿಕೆಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುವ ಚಾಳಿ
ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕೆಂದು ಜನರನ್ನು ಮರಳು ಮಾಡುತ್ತಾ, ತನ್ನ ಅಭಿವೃದ್ಧಿ ಮಾಡಿಕೊಂಡ ಕಾರ್ಕಳ ಶಾಸಕ ಈಗ ಪರಶುರಾಮ ಥೀಮ್ ಪಾರ್ಕ್ ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಗಾಲು ಎಂದು ಸುಳ್ಳು ಆರೋಪ ಮಾಡಿದ್ದಾರೆ. ತನ್ನ ಭ್ರಷ್ಟಾಚಾರವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಇದನ್ನು ಓದಿದ್ದೀರಾ? ಧಾರವಾಡ | ಲಿಂಗಾಯತ ಧರ್ಮ ನಾಶಮಾಡಲು ಸಾಧ್ಯವಿಲ್ಲ, ರಾಷ್ಟ್ರೀಯತೆ ಹುಟ್ಟಿದ್ದೇ ಕನ್ನಡಿಗರಿಂದ: ಡಾ. ವಾಸು ಎಚ್ ವಿ
ಪ್ರವಾಸೋದ್ಯಮಕ್ಕೆ ಕಾಂಗ್ರೆಸ್ ಕೊಡುಗೆ ಅಪಾರ. ಕಾಕಳ ಮಸ್ತಕಾಭಿಷೇಕ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ಪ್ರವಾಸೋದ್ಯಮಕ್ಕೆ ನೀಡಿ, ಕಾರ್ಕಳ ಅಭಿವೃದ್ದಿ ಪಡಿಸಿದ್ದು ಕಾಂಗ್ರೆಸ್. ಆದರೆ, ಕಾರ್ಕಳ ಶಾಸಕ ಎಣ್ಣೆ ಹೊಳೆ, ಕಾರ್ಕಳೋತ್ಸವ ಮೊದಲಾದ ಕಾರ್ಯಕ್ರಮವನ್ನು ಮಾಡಿ ಹಣ ಮಾಡಿದರೆ ವಿನಃ ಪ್ರವಾಸೋದ್ಯಮಕ್ಕೆ ಕೊಡುಗೆ ಏನು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ನಗರಸಭಾ ಸದಸ್ಯ ರಮೇಶ್ ಕಾಂಚನ್, ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ, ಕಾರ್ಕಳ ಯೂತ್ ಕಾಂಗ್ರೆಸ್ ಮುಖಂಡ ಯೋಗೇಶ್ ಇನ್ನ ಉಪಸ್ಥಿತರಿದ್ದರು.

