ಸರಿಯಾದ ರಸ್ತೆ ಸೌಲಭ್ಯ ಇಲ್ಲದ ಕಾರಣಕ್ಕೆ ಗ್ರಾಮಸ್ಥರು, ಮೃತಪಟ್ಟ ಗ್ರಾಮದ ವ್ಯಕ್ತಿಯೋರ್ವನ ಮೃತದೇಹವನ್ನು ಕಟ್ಟಿಗೆಗೆ ಹಗ್ಗದಿಂದ ಕಟ್ಟಿ ಹೆಗಲಲ್ಲಿ ಕೊಂಡೊಯ್ದ ಮನಕಲಕುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.
ಕಾರವಾರ ನಗರಸಭೆ ವ್ಯಾಪ್ತಿಯ ಗುಡ್ಡಹಳ್ಳಿಯಲ್ಲಿ ರಸ್ತೆ ಸರಿ ಇಲ್ಲ ಎಂದು ಕಟ್ಟಿಗೆಗೆ ಮೃತದೇಹ ಕಟ್ಟಿ ರವಾನಿಸಲಾಗಿದೆ. ನಗರಕ್ಕೆ ಹೊಂದಿಕೊಂಡಿರುವ ಗುಡ್ಡದ ಮೇಲಿನ ಗ್ರಾಮ ಗುಡ್ಡಳ್ಳಿಗೆ ಮೃತ ವ್ಯಕ್ತಿಯ ಶವವನ್ನು ಕಟ್ಟಿಗೆಯ ತುಂಡಿಗೆ ಕಟ್ಟಿ, ನಾಲ್ಕು ಜನ ಹೆಗಲ ಮೇಲೆ ಹೊತ್ತು ಮನೆಗೆ ಸಾಗಿಸಿ, ನಂತರ ಅಂತಿಮ ಸಂಸ್ಕಾರ ಮಾಡಿದ್ದಾರೆ.

ಕಾರವಾರ ನಗರಸಭೆ 31ನೇ ವಾರ್ಡಿಗೆ ಸೇರಿದ ಗುಡ್ಡಳ್ಳಿ ಗ್ರಾಮದ ನಿವಾಸಿ ರಾಮ ಎಂ ಗೌಡ ಎಂಬುವವರು ಅನಾರೋಗ್ಯದ ಕಾರಣ ಶುಕ್ರವಾರ ರಾತ್ರಿ ಕಾರವಾರ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಹೃದಯಾಘಾತವಾಗಿ ಅಸುನೀಗಿದ್ದು, ಶವವನ್ನು ಗುಡ್ಡಳ್ಳಿಯ ಕೆಳಭಾಗದಲ್ಲಿ ರಸ್ತೆಯ ತನಕ ಆ್ಯಂಬುಲೆನ್ಸ್ನಲ್ಲಿ ತರಲಾಯಿತು.
ಬೈಕ್ ಮಾತ್ರ ಸಾಗುವ ಡಾಂಬರ್ ಇಲ್ಲದ , ಜಲ್ಲಿ ಮಾತ್ರ ಹಾಕಿದ ರಸ್ತೆಯಲ್ಲಿ ಸಾಗುವಾಗ ಗ್ರಾಮದ ಯುವಕರು ಒಂದು ಉದ್ದ ಕಟ್ಟಿಗೆಯ ತುಂಡಿಗೆ ಶವವನ್ನು ಬೆಡ್ ಶೀಟ್ನಲ್ಲಿ ಸುತ್ತಿ, ಹಗ್ಗದಲ್ಲಿ ಬಿಗಿದು ಮನೆಗೆ ಕೊಂಡೊಯ್ದು ಶವಸಂಸ್ಕಾರ ಮಾಡಿದ್ದಾರೆ. ಈ ರೀತಿ ಶವ ಸಾಗಿಸಿದ ದೃಶ್ಯ ಮನ ಕಲಕುವಂತಿತ್ತು.
ನಗರಸಭಾ ವ್ಯಾಪ್ತಿಯ ಗುಡ್ಡಳ್ಳಿ ಗ್ರಾಮದ ಗುಡ್ಡದ ಎತ್ತರದಲ್ಲಿದ್ದು, ಇಲ್ಲಿ 30 ರಿಂದ 40 ಕುಟುಂಬಗಳು ನೆಲೆಸಿವೆ. 250 ಜನ ಮತದಾರರಿದ್ದಾರೆ. ಗುಡ್ಡ ಪ್ರದೇಶದ ಹಾಗೂ ಅರಣ್ಯ ಇಲಾಖೆಯ ಅಧೀನದಲ್ಲಿ ರಸ್ತೆ ಇರುವ ಕಾರಣ
ರಸ್ತೆ ಡಾಂಬರೀಕರಣ ಸಾಧ್ಯವಾಗಿಲ್ಲ. ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಇದೆ. ಕಚ್ಚಾ ರಸ್ತೆ ಇದೆ. ಆದರೆ, ಅಲ್ಲಿಗೆ ಆ್ಯಂಬುಲೆನ್ಸ್ ತಲುಪುವ ಸ್ಥಿತಿ ಇಲ್ಲ. ಹೀಗಾಗಿ, ಜನರು, ವಿದ್ಯಾರ್ಥಿಗಳು ಕಾಲ್ನಡಿಗೆ ಅಥವಾ ಬೈಕಿನಲ್ಲಿ ಕಾರವಾರ ತಲುಪುತ್ತಾರೆ ಎಂಬ ಮಾಹಿತಿ ದೊರಕಿದೆ. ಆದಷ್ಟು ಬೇಗ ಸರ್ಕಾರ ಈ ಬಗ್ಗೆ ಗಮನ ಹರಿಸಿ ಸೂಕ್ತ ರಸ್ತೆಯ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

