ಪ್ರಯೋಗಾತ್ಮಕ ವಿಜ್ಞಾನ ಕಲಿಕೆ ಹೆಚ್ಚು ಪರಿಣಾಮಕಾರಿ. ವಿಜ್ಞಾನ ಎಂಬುದು ನಿಂತ ನೀರಲ್ಲ, ಅದೊಂದು ಹರಿಯುವ ನದಿಯಿದ್ದಂತೆ. ಕ್ಷಣಕ್ಷಣಕ್ಕೂ ವಿಜ್ಞಾನ ಲೋಕದಲ್ಲಿ ಬದಲಾವಣೆಗಳು ಅನ್ವೇಷಣೆಗಳು ನಡೆಯುತ್ತಲೇ ಇರುತ್ತವೆ ಎಂದು ನಿವೃತ್ತ ಉಪಪ್ರಾಚಾರ್ಯರು ಹಾಗೂ ವಿಜ್ಞಾನ ಶಿಕ್ಷಕ ಚಂದ್ರಶೇಖರ್ ಕಲ್ಯಾಣಮಠ ಅಭಿಪ್ರಾಯಟ್ಟರು.
ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಹಿರೇವಂಕಲಕುಂಟಾ ಶಾಲೆಯಲ್ಲಿ ಮಾರ್ಚ್ 2ರಂದು ಹಮ್ಮಿಕೊಂಡಿದ್ದ ʼವಿದ್ಯಾರ್ಥಿಗಳಿಗೆ ವಿಜ್ಞಾನ ಪ್ರಯೋಗಗಳ ಕಾರ್ಯಾಗಾರʼ ಉದ್ಘಾಟಿಸಿ ಮಾತನಾಡಿದರು.
“ಮಕ್ಕಳು ಎಳೆಯ ವಯಸ್ಸಿನಲ್ಲೇ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಇದಕ್ಕೆ ಪ್ರಯೋಗಗಳೇ ತಳಹದಿ. ಪ್ರಯೋಗಗಳು ಕಲಿಕೆಯನ್ನು ಸುಲಭಗೊಳಿಸುವುದಲ್ಲದೇ ಹೆಚ್ಚು ಪರಿಣಾಮಕಾರಿ” ಎಂದು ಹೇಳಿದರು.

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಉಪಪ್ರಾಚಾರ್ಯ ಬಾಬುಸಾಬ್ ಲೈನದಾರ್ ಮಾತನಾಡಿ, “ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗಾಗಿ ಶಾಲೆಯಲ್ಲಿ ಹತ್ತು ಹಲವು ಯೋಜನೆಗಳನ್ನು ಶಾಲಾ ಹಂತದಲ್ಲಿ ರೂಪಿಸಲಾಗಿದೆ. ಅವುಗಳನ್ನೆಲ್ಲ ಹಂತ ಹಂತವಾಗಿ ಅನುಷ್ಠಾನ ಮಾಡುತ್ತ ಕೊನೆಯದಾಗಿ ವಿಜ್ಞಾನ ಪ್ರಯೋಗಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಪ್ರಯೋಗಗಳಲ್ಲಿ ಸಕ್ರಿಯರಾಗಿ ಭಾಗವಹಿಸಿ ಪ್ರಯೋಜನ ಪಡೆಯಬೇಕು. ಈ ಕಾರ್ಯಾಗಾರದ ಪ್ರಯೋಜನ ಫಲಿತಾಂಶದಲ್ಲಿ ಪ್ರತಿಫಲಿತವಾಗಲಿ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವಿಜ್ಞಾನ ಶಿಕ್ಷಕ ದೇವೆಂದ್ರಪ್ಪ ಜಿರ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, “ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದ ಪ್ರಮುಖ ಪ್ರಯೋಗಗಳು, ಚಟುವಟಿಕೆಗಳನ್ನು, ಚಿತ್ರಗಳು ಹಾಗೂ ಕಲಿಕಾಂಶಗಳನ್ನು ಮತ್ತೊಮ್ಮೆ ಪುನರಾವಲೋಕನ ಮತ್ತು ಪುನರ್ಮನನ ಮಾಡುವ ದೃಷ್ಟಿಯಿಂದ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಕಾರ್ಯಾಗಾರವು ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯಲು ನೆರವಾಗಲಿದೆ. ಇಲಾಖೆಯ ಹತ್ತು ಹಲವು ಯೋಜನೆಗಳಾದ 20 ಅಂಶಗಳ ಕಾರ್ಯಕ್ರಮ, ವಾರದ ಪ್ರಶ್ನೆಗಳು, ಪ್ರಾರ್ಥನಾ ಪ್ರಶ್ನೋತ್ತರಗಳು, ಪ್ಲ್ಯಾನ್ 100, ದಿನಕ್ಕೊಂದು ವಿಜ್ಞಾನ ಚಿತ್ರ ಸೇರಿದಂತೆ ಹಲವು ಯೋಜನೆಗಳಲ್ಲಿ ಇದೂ ಒಂದು. ಇದರ ಸದ್ವಿನಿಯೋಗ ಪಡೆಯಿರಿ” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಪ್ರಕಾಶ ಬಂಡಿ ಮಾತನಾಡಿ, ಭೌತಶಾಸ್ತ್ರದ ಬೆಳಕು ಘಟಕದ ಪ್ರತಿಫಲನ, ಪ್ರತಿಫಲನದ ನಿಯಮಗಳು, ವಕ್ರೀಭವನ, ವಕ್ರೀಭವನದ ನಿಯಮಗಳು, ವಕ್ರೀಭವನದ ಸೂಚ್ಯಂಕ ಹಾಗೂ ವಿದ್ಯುತ್ ಶಕ್ತಿ ಸೇರಿದಂತೆ ಎಲ್ಲ ಘಟಕಗಳಲ್ಲಿ ಬರುವ ನಿಯಮಗಳು, ಪರಿಕಲ್ಪನೆಗಳು ಮತ್ತು ಪ್ರಯೋಗಗಳನ್ನು ಮಕ್ಕಳಿಂದಲೇ ಮಾಡಿಸಿ ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸುವ ಕ್ರಮ ತಿಳಿಸಿದರು. ರಸಾಯನಶಾಸ್ತ್ರದಲ್ಲಿನ ರಾಸಾಯನಿಕ ಕ್ರಿಯೆಗಳು ಮತ್ತು ವಿಧಗಳನ್ನು ಪ್ರಾಯೋಗಿವಾಗಿ ಮಕ್ಕಳಿಂದಲೇ ಮಾಡಿಸಿ, ರಾಸಾಯನಿಕ ಸಮೀಕರಣ, ಬರೆಯುವ ವಿಧಾನ, ಸರಿದೂಗಿಸುವ ವಿಧಾನ ಮತ್ತು ಹಂತಗಳ ಬಗ್ಗೆ ವಿವರಿಸುತ್ತ, ಆಮ್ಲ ಪ್ರತ್ಯಾಮ್ಲ ಹಾಗೂ ಲವಣಗಳು ಸೇರಿದಂತೆ ಲೋಹ ಮತ್ತು ಅಲೋಹಗಳು ಘಟಕದ ಚಟುವಟಿಕೆಗಳನ್ನು ನಿರ್ವಹಿಸಿ ಕಬ್ಬಿಣ ತಯಾರಿಸಿ ತೋರಿಸಿದರು. ಜೀವಶಾಸ್ತ್ರ ವಿಷಯದ ಮುಖ್ಯ ಕಲಿಕಾಂಶಗಳು ಮತ್ತು ಚಿತ್ರಗಳನ್ನು ಬಿಡಿಸುವ ಸುಲಭ ಮಾಹಿತಿಗಳನ್ನು ತಿಳಿಸಿ ಚಿತ್ರ ಬಿಡಿಸಿ ತೋರಿಸಿದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಕೂಳೂರು ಸೇತುವೆ, ನಂತೂರು ಮೇಲ್ಸೇತುವೆ ಕಾಮಗಾರಿ ಪೂರ್ಣಕ್ಕೆ ಆಗ್ರಹ
ಒಟ್ಟಿನಲ್ಲಿ ವಿಜ್ಞಾನ ವಿಷಯದ ಸಮಗ್ರ ಪುನರಾವಲೋಕನ ಮತ್ತು ಪುನರ್ಮನನ ಮಾಡಿ ಮಕ್ಕಳಲ್ಲಿನ ಪರೀಕ್ಷಾ ಭಯ ಮತ್ತು ಒತ್ತಡ ನಿವಾರಿಸಿದರು. ಸರಿಯಾದ ಅಧ್ಯಯನ ಕ್ರಮ, ಶಿಸ್ತುಬದ್ಧ ಅಧ್ಯಯನ, ವೈಯಕ್ತಿಕ ವೇಳಾಪಟ್ಟಿ, ನೀಲಿ ನಕ್ಷೆ ಮತ್ತು ಉತ್ತರ ಪತ್ರಿಕೆ ಬರೆಯಯವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಕ್ಕಳಿಗೆ ಸ್ಪೂರ್ತಿದಾಯಕ ಮಾತುಗಳನ್ನು ಹೇಳಿ ಆತ್ಮವಿಶ್ವಾಸ ತುಂಬಿದರು.