ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರನ್ನು ಸ್ಮರಿಸುವುದು ಮತ್ತು ಅವರ ಕುಟುಂಬದವರನ್ನು ಗೌರವಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಸೇನೆಯ ವತಿಯಿಂದ ಕೊಪ್ಪಳದಲ್ಲಿ ಘರ್ ಘರ್ ಶೌರ್ಯ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಗರದ ನಿವೃತ್ತಿ ಸೈನಿಕರ ಸಂಘದ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗತ್ತಿ ಮಾತನಾಡಿ, “ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಸನ್ಮಾನಿಸುತ್ತಿರುವುದು ಅತ್ಯಂತ ಗೌರವದ ಕಾರ್ಯವಾಗಿದೆ. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದವರನ್ನು ಸ್ಮರಿಸುವುದಕ್ಕಾಗಿ ಕೇಂದ್ರ ಸರಕಾರ ಘರ್ ಘರ್ ಶೌರ್ಯ ಸನ್ಮಾನ ಮಾಡುವ ಮೂಲಕ ಮತ್ತೆ ಆ ಹೋರಾಟವನ್ನು ನಾಡಿಗೆ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ” ಎಂದರು.
“ಕಾರ್ಗಿಲ್ ಯುದ್ಧದ ರೋಚಕತೆ ಮತ್ತು ಅಲ್ಲಿಯ ಸೈನಿಕರ ಹೋರಾಟ ಸಾಮಾನ್ಯವಲ್ಲ. ಆಗಿನ ಸ್ಥಿತಿಯಲ್ಲಿ ಅಲ್ಲಿಯ ವಾತವಾರಣದಲ್ಲಿ ಸೇನೆ ಹೋರಾಟ ಮಾಡಿದ್ದನ್ನು ಪದಗಳಲ್ಲಿ ಹೇಳಲು ಸಾಧ್ಯವೇ ಇಲ್ಲ. ನಾನು ಸಹ ಆ ಯುದ್ಧದಲ್ಲಿ ಭಾಗಿಯಾಗಿದ್ದೆ ಎಂದು ತಮ್ಮ ಹೋರಾಟದ ನೆನಪನ್ನು ಸ್ಮರಿಸಿದರು. ಕೊಪ್ಪಳ ತಾಲೂಕಿನ ಅಳವಂಡಿ ವೀರಯೋಧ ಮಲ್ಲಯ್ಯ ಮೇಗಳಮಠ ಅವರು ಈ ಯುದ್ಧದಲ್ಲಿ ಹೋರಾಡಿ ಹುತಾತ್ಮರಾಗಿದ್ದರು. ಈಗ ಅವರನ್ನು ಪುನಃ ಸ್ಮರಿಸುವುದು ಮತ್ತು ಅವರ ಕುಟುಂಬವನ್ನು ಸನ್ಮಾನಿಸುತ್ತಿರುವುದು ನಿಜಕ್ಕೂ ಅರ್ಥಪೂರ್ಣ” ಎಂದರು.
ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಮಾರುತಿ ಗೊಂದಿ ಮಾತನಾಡಿ, “ಸೈನಿಕರನ್ನು ಕಾರ್ಗಿಲ್ ವಿಜಯ ದಿವಸದಂದು ಸ್ಮರಿಸುತ್ತಾರೆ, ಆದರೆ ನಂತರ ಮರೆತುಬಿಡುತ್ತಾರೆ. ನಿವೃತ್ತಿಯಾದ ಮೇಲೆ ಅವರಿಗೆ ದೊರೆಯಬೇಕಾಗಿದ ಗೌರವ ದೊರೆಯುತ್ತಿಲ್ಲ. ಸಿಗಬೇಕಾದ ಸವಲತ್ತುಗಳು ಸಿಗುತ್ತಿಲ್ಲ. ಇದಕ್ಕಾಗಿ ಹೋರಾಟ ಮಾಡಬೇಕಾಗಿದೆ” ಎಂದರು.
ಸೇನೆಯ ಪರವಾಗಿ ಆಗಮಿಸಿದ್ದ ನಾಯಕ ಸುಭೇದಾರ ತಿಲಕ್ ಮಾತನಾಡಿ, “ಕಾರ್ಗಿಲ್ ಯುದ್ಧದಲ್ಲಿ ಹೋರಾಟ ಮಾಡಿ, ಹುತಾತ್ಮರಾದವರ ಕುಟಂಬದವರನ್ನು ಗೌರವಿಸುವುದಕ್ಕಾಗಿ ಘರ್ ಘರ್ ಶೌರ್ಯ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಅದರಂತೆ ದೇಶದಾದ್ಯಂತ 521 ಕುಟುಂಬದವರ ಬಳಿಗೆ ಸೇನೆ ತೆರಳಿ ಗೌರವಿಸುತ್ತಿದೆ. ರಾಜ್ಯದಲ್ಲಿಯೂ ನಾಲ್ವರು ಯೋಧರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿದ್ದು, ಅವರನ್ನು ಗೌರವಿಸಲಾಗುತ್ತಿದೆ” ಎಂದರು.
ಇದನ್ನೂ ಓದಿ: ಕೊಪ್ಪಳ | ಬೈಕ್ಗೆ ಲಾರಿ ಡಿಕ್ಕಿ : ಸ್ಥಳದಲ್ಲೇ ತಾಯಿ, ಮಗು ಸಾವು
ಕೊಪ್ಪಳದ ಮಲ್ಲಯ್ಯ ಮೇಗಳಮಠ ಅವರ ಪತ್ನಿ ಸರೋಜಾ ಹಾಗೂ ಶಿವಬಸಯ್ಯ ಕುಲಕರ್ಣಿ ಅವರ ಪತ್ನಿ ನಿರ್ಮಲಾ ಅವರನ್ನು ಘರ್ ಘರ್ ಶೌರ್ಯ ಸನ್ಮಾನ ಕಾರ್ಯಕ್ರಮದಡಿ ಸ್ಥಳೀಯ ನಿವೃತ್ತ ಸೈನಿಕರ ಸಂಘದ ಸಹಯೋಗದಲ್ಲಿ ಸನ್ಮಾನಿಸಿ, ಪ್ರಸಂಶನಾ ಪತ್ರ ನೀಡಿ ಸನ್ಮಾನಿಸಲಾಯಿತು.
ಈ ವೇಳೆ ತಹಶೀಲ್ದಾರ ವಿಠ್ಠಲ್ ಚೌಗಲಿ, ಸಂತರಾಮ ಭಟ್, ದ್ರಾಕ್ಷಾಯಿಣಿ ಕೊಪ್ಪಳ, ಸರೋಜಮ್ಮ ಮೇಗಳಮಠ, ನಿರ್ಮಲಾ ಕುಲಕರ್ಣಿ, ಸೈನಿಕರಾದ ರಜೀಸ್, ಲಕ್ಷ್ಮಣ ಅಸುಂಡಿ, ಸೈಯೂಜ್, ಉಮೇಶ ಕಾಮನೂರು, ಇಂಧುದರ ಸೊಪ್ಪಿಮಠ, ಕಾರ್ಯದರ್ಶಿ ನಿಂಗಪ್ಪ ಗಾಣಿಗೇರ, ಮಲ್ಲಿಕಾರ್ಜುನ ಸಜ್ಜನ ಹಾಗೂ ಇತರರು ಇದ್ದರು.