ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ವಿದೇಶಿ ಯುವತಿಯ ಸಹಿತ ಸ್ಥಳೀಯ ಯುವತಿಯನ್ನು ಮೂವರು ದುರುಳರು ಕಲ್ಲಿನಿಂದ ಹಲ್ಲೆ ನಡೆಸಿದ ಬಳಿಕ ಅತ್ಯಾಚಾರ ನಡೆಸಿ, ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಸಾಣಾಪುರ ಕೆರೆ ಬಳಿ ಜಂಗ್ಲಿಗೆ ತೆರಳುವ ಮಾರ್ಗದಲ್ಲಿ ತುಂಗಾಭದ್ರ ಎಡದಂಡೆ ಕಾಲುವೆ ಪಕ್ಕ ಗಿಟಾರ್ ಬಾರಿಸುತ್ತ ಕುಳಿತಿದ್ದ ಇಬ್ಬರು ವಿದೇಶಿ ಹಾಗೂ ಮೂವರು ದೇಶಿಯ ಪ್ರವಾಸಿಗರ ಮೇಲೆ ಗುರುವಾರ ತಡರಾತ್ರಿ ಮೂವರ ಗುಂಪು ಹಲ್ಲೆ ನಡೆಸಿದ್ದಲ್ಲದೇ, ತಂಡದಲ್ಲಿದ್ದ ಮೂವರು ಯುವಕರನ್ನು ಕಾಲುವೆಗೆ ದೂಡಿ ಇಬ್ಬರು ಯುವತಿಯರನ್ನು ಅತ್ಯಾಚಾರ ನಡೆಸಿ, ಪರಾರಿಯಾಗಿದ್ದಾರೆ.
ಗುರುವಾರ ತಡರಾತ್ರಿ ಸಾನಾಪುರ ಬಳಿಯ ಹನುಮನಹಳ್ಳಿ ಸಮೀಪದ ದುರ್ಗಮ್ಮ ಗುಡಿಯ ಬಳಿಯಲ್ಲಿರುವ ತುಂಗಭದ್ರಾ ಕಾಲುವೆ ಸಮೀಪ ಕೂತು ನಕ್ಷತ್ರ ವೀಕ್ಷಣೆಗೆಂದು ಒಬ್ಬ ವಿದೇಶಿ ಯುವಕ, ಒಬ್ಬಳು ವಿದೇಶಿ ಯುವತಿಯ ಸಹಿತ ಅನ್ಯರಾಜ್ಯದ ಇಬ್ಬರು ಪ್ರವಾಸಿಗರೊಂದಿಗೆ ಸ್ಥಳೀಯವಾಗಿ ಹೋಮ್ ಸ್ಟೇ ನಡೆಸುತ್ತಿರುವ ಯುವತಿ ಕೂಡ ತೆರಳಿದ್ದರು.
ಈ ವೇಳೆ ಸ್ಥಳಕ್ಕೆ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ದುಷ್ಕರ್ಮಿಗಳು, ‘ಪೆಟ್ರೋಲ್ ಬಂಕ್ ಎಲ್ಲಿದೆ?’ ಎಂದು ಕನ್ನಡದಲ್ಲಿ ಸ್ಥಳೀಯ ಯುವತಿಯೊಂದಿಗೆ ಪ್ರಶ್ನಿಸಿದ್ದಾರೆ. ಈ ವೇಳೆ ಉತ್ತರಿಸಿದ್ದ ಯುವತಿ, ಸಾನಾಪುರಕ್ಕೆ ಹೋಗುವಂತೆ ಸಲಹೆ ನೀಡಿದ್ದಾರೆ. ಆದರೆ, ಆ ಬಳಿಕವೂ ಅಲ್ಲಿಂದ ಕದಲದೆ, 100₹ ಕೊಡುವಂತೆ ಒತ್ತಾಯಿಸಿದ್ದಾರೆ.
ನಮ್ಮಲ್ಲಿ ದುಡ್ಡಿಲ್ಲ ಎಂದು ಸಮಜಾಯಿಷಿ ನೀಡಿದಾಗ ತಗಾದೆ ತೆಗೆದ ಮೂವರು ದುರುಳರು, ತಂಡದಲ್ಲಿದ್ದ ವಿದೇಶಿ ಯುವಕನ ಸಹಿತ ಮೂವರು ಯುವಕರಿಗೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಆ ಬಳಿಕ ಕಾಲುವೆಗೆ ದೂಡಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಯುವಕರನ್ನು ಕಾಲುವೆಗೆ ದೂಡಿ ಹಾಕಿದ ಬಳಿಕ ವಿದೇಶಿ ಯುವತಿ ಹಾಗೂ ಸ್ಥಳೀಯ ಯುವತಿಗೂ ಕಲ್ಲಿನಿಂದ ತಲೆಗೆ ಹಲ್ಲೆ ನಡೆಸಿದ್ದಲ್ಲದೇ, ಇಬ್ಬರನ್ನೂ ಅತ್ಯಾಚಾರಗೈದು ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.
ಕಾಲುವೆಗೆ ಬಿದ್ದಿದ್ದ ವಿದೇಶಿ ಯುವಕನ ಸಹಿತ ಇಬ್ಬರು ಭಾರತೀಯ ಪ್ರವಾಸಿಗರ ಪೈಕಿ ಓರ್ವ ಯುವಕ ಹಾಗೂ ವಿದೇಶಿ ಪ್ರವಾಸಿಗ ಈಜಿಕೊಂಡು ಜೀವ ಉಳಿಸಿಕೊಂಡಿದ್ದಾರೆ. ಆದರೆ, ಇನ್ನೊಬ್ಬ ಯುವಕನ ವಿವರ ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತ ವಿದೇಶಿ ಯುವತಿಯು 27 ವರ್ಷದ ಇಸ್ರೇಲ್ ದೇಶದ ಪ್ರಜೆ ಎಂದು ಗುರುತಿಸಲಾಗಿದೆ. ಇನ್ನೊಬ್ಬ ಸ್ಥಳೀಯ ಯುವತಿಯು 29 ವರ್ಷದವಳೆಂದು ಗುರುತಿಸಲಾಗಿದೆ. ದ್ವಿಚಕ್ರ ವಾಹನದಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ಸಂತ್ರಸ್ತ ಸ್ಥಳೀಯ ಯುವತಿ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.
ಕಾಲುವೆಗೆ ಬಿದ್ದಿದ್ದ ವಿದೇಶಿ ಯುವಕ ಅಮೆರಿಕದವನಾಗಿದ್ದು, ಇನ್ನೊಬ್ಬ ಭಾರತೀಯ ಮಹಾರಾಷ್ಟ್ರ ರಾಜ್ಯದವ ಎಂದು ಪೊಲೀಸರು ಗುರುತಿಸಿದ್ದಾರೆ. ಸದ್ಯ ಕಾಲುವೆಗೆ ಬಿದ್ದ ಬಳಿಕ ನಾಪತ್ತೆಯಾಗಿರುವ ಯುವಕ ಒಡಿಶಾ ರಾಜ್ಯದ ಯುವಕ ಎಂದು ಗುರುತಿಸಲಾಗಿದೆ.
ಗುರುವಾರ ರಾತ್ರಿ 10.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಶುಕ್ರವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ನಗರಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್ ಮಾಳೆ, ಶ್ವಾನದಳ ಬಂದಿದ್ದು ತಪಾಸಣೆ ನಡೆಸಿದ್ದಾರೆ.
ಘಟನಾ ಸ್ಥಳದಲ್ಲಿ ದ್ವಿಚಕ್ರ ವಾಹನ, ಹ್ಯಾಂಡ್ ಬ್ಯಾಗ್ ಲಭಿಸಿವೆ. ಹ್ಯಾಂಡ್ಬ್ಯಾಗ್ನಲ್ಲಿ ಕ್ಯಾಮೆರಾ, ಪವರ್ ಬ್ಯಾಂಕ್, ಪೆನ್ನು, ಮುರಿದು ಬಿದ್ದ ಗಿಟಾರ್, ಕೈ ವಸ್ತ್ರ, ಸಿಗರೇಟ್, ರಕ್ತದ ಕಲೆ ಇರುವ ಬಟ್ಟೆ ಲಭ್ಯವಾಗಿವೆ.
ಘಟನೆಯ ಬಗ್ಗೆ ಈದಿನ ಡಾಟ್ ಕಾಮ್ ಜೊತೆಗೆ ಮಾತನಾಡಿರುವ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಯವರು ಯವರು, “ಘಟನೆಗೆ ಸಂಬಂಧಿಸಿದಂತೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಘಟನೆ ಘಟನೆ ನಡೆದ ಸಂದರ್ಭದಲ್ಲಿ ಓಡಾಟ ನಡೆಸಿದವರ ಮೊಬೈಲ್ ಫೋನ್ ಟ್ರ್ಯಾಕ್ ಮಾಡುತ್ತಿದ್ದೇವೆ. ಮೂವರು ಆರೋಪಿಗಳು ಇದ್ದರೆಂದು ಸ್ಥಳೀಯ ಸಂತ್ರಸ್ತ ಯುವತಿ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಮೂವರು ಆರೋಪಿಗಳನ್ನು ಪತ್ತೆ ಹಚ್ಚಲು ಕ್ರಮ ಕೈಗೊಂಡಿದ್ದೇವೆ. ಕಾಲುವೆಗೆ ದೂಡಿ ಹಾಕಿದ ಬಳಿಕ ನಾಪತ್ತೆಯಾಗಿರುವ ಒಡಿಶಾದ ಯುವಕ ಇನ್ನೂ ಪತ್ತೆಯಾಗಿಲ್ಲ. ಹುಡುಕಾಟ ಮುಂದುವರಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
