12ನೇ ಶತಮಾನದಲ್ಲಿ ಬಸವಾದಿ ಶರಣರ ಅನುಭಾವದ ನುಡಿಗಳು ವಚನಗಳಾಗಿ ಮಾರ್ಪಟ್ಟಿವೆ. ಇಂದಿನ ಜನಮಾನಸಕ್ಕೆ ವಚನ ಸಾಹಿತ್ಯ ಮುಟ್ಟಿಸುವ ಕಾರ್ಯವಾಗಬೇಕಾಗಿದೆ ಎಂದು ಸತ್ಸಂಗ ಧ್ಯಾನ ಮಂದಿರದ ಸಂಚಾಲಕ ವೀರಶೆಟ್ಟಿ ಕಾಗಾ ಹೇಳಿದರು.
ಬೀದರ್ ನಗರದ ರಾಂಪೂರೆ ಬ್ಯಾಂಕ್ ಕಾಲೋನಿಯಲ್ಲಿ ಪ್ರಾಧ್ಯಾಪಕ ಬಸವರಾಜ ಮೂಲಗೆ ಅವರ ನಿವಾಸದಲ್ಲಿ ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಆಯೋಜಿಸಿದ್ದ ʼಮಾಸಿಕ ಶರಣ ಸಂಗಮ ಹಾಗೂ ಸತ್ಸಂಗʼ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,”ನಾಡು-ನುಡಿ, ಮಾತೃ ಭಾಷೆ, ಸಂಸ್ಕೃತಿ ಪರಂಪರೆ ಉಳಿವಿಗಾಗಿ ನಾವು ಶ್ರಮಿಸಬೇಕು. ಕನ್ನಡ ಭಾಷೆಯ ಮೇಲೆ ಹೆಚ್ಚಿನ ಪ್ರೀತಿ, ಸ್ವಾಭಿಮಾನ ಬೆಳೆಸಿಕೊಳ್ಳಬೇಕು” ಎಂದು ಕರೆ ನೀಡಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜೀವಕುಮಾರ ಅತಿವಾಳೆ ಮಾತನಾಡಿ, “ತಂತ್ರಜ್ಞಾನದ ಜಗತ್ತಿನಲ್ಲಿ ಮನುಷ್ಯನಿಗೆ ನೆಮ್ಮದಿ, ಶಾಂತಿಗಾಗಿ ಪ್ರಾರ್ಥನೆ, ಭಜನೆ, ಧ್ಯಾನ, ಸತ್ಸಂಗದ ಅವಶ್ಯಕತೆವಿದೆ. ಬುದ್ದ ಹಾಗೂ ಬಸವಾದಿ ಶರಣರು ನಿಷ್ಠೆಯ ಬದುಕು ರೂಪಿಸಿಕೊಂಡು ಜಗತ್ತಿಗೆ ಮಹಾಬೆಳಕು ನೀಡಿದ್ದಾರೆ. ಶರಣರ, ಮಾಹಾತ್ಮರ ಜೀವನ ಮೌಲ್ಯಗಳನ್ನು ಜೀವನದಲ್ಲಿಅಳವಡಿಸಿಕೊಂಡಾಗ ಬದುಕು ಭವ್ಯವಾಗುತ್ತದೆ” ಎಂದರು.
ಶಿಕ್ಷಕಿ ಪ್ರತಿಭಾ ಚಾಮಾ ಅವರು ಬುದ್ಧ, ಬಸವಣ್ಣನವರ ಕುರಿತು ಮಾತನಾಡಿ, “ನಾವು ಯಾವುದೇ ಪದವಿ, ಪ್ರಶಸ್ತಿ, ಬಿರುದುಗಳ ಹಿಂದೆ ಬೀಳದೆ ನಿಸ್ವಾರ್ಥ ಸೇವೆಗೈಯುವ ಮನೋಭಾವ ಮೈಗೂಡಿಸಿಕೊಳ್ಳಬೇಕು. ಸಾಮಾಜಿಕ ಸುಧಾರಕರು ಜಾತಿ, ಧರ್ಮ, ವರ್ಗ ತಾರತಮ್ಯ ಮಾಡಲಾರದೆ ಸಮಾಜದಲ್ಲಿ ಸಾಮರಸ್ಯ ಭಾವದೊಂದಿಗೆ ಮಾನವೀಯ ಮೌಲ್ಯಗಳನ್ನು ಬೋಧಿಸಲು ಮುಂದಾಗಬೇಕು” ಎಂದು ನುಡಿದರು.
ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷೆ ಸುನಿತಾ ದಾಡಗೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, “ಮನ ಮಾಸಿದಡೆ ಶರಣರ ಸಂಗವು ಮಾಡಬೇಕು ಎಂಬ ಶರಣರು ನುಡಿದಂತೆ ಭಕ್ತಿಯಿಂದ ಸತ್ಸಂಗ ಮಾಡಬೇಕು. ಶರಣರ ವಚನಗಳು ಬಂಗಾರದ ಖಣಿ ಇದ್ದಂತೆ, ಅವುಗಳನ್ನು ಆಚರಣೆಗೆ ತಂದಾಗ ಮನ ಶುದ್ಧಿಯಾಗುತ್ತದೆ” ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಲಿಂಗೈಕ್ಯರಾದ ಬಸವ ಸೇವಾ ಪ್ರತಿಷ್ಠಾನ ಹಾಗೂ ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ತಾಯಿ ಅವರ ಜೀವನ-ಸಾಧನೆ ಕುರಿತು ಸ್ಮರಿಸಿ, ಶ್ರದ್ದಾಂಜಲಿ ಸಲ್ಲಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಬೀದರ್ | ಜಾಗತಿಕ ಮಟ್ಟದಲ್ಲಿ ಬಸವ ಚಿಂತನೆ ತಲುಪಿಸುವುದು ಇಂದಿನ ತುರ್ತು : ಆರ್.ಕೆ.ಹುಡುಗಿ
ಕಾರ್ಯಕ್ರಮದಲ್ಲಿ ಪ್ರಮುಖರಾದ ಅಶೋಕ ಬೂದಿಹಾಳ, ಶೈಲಜಾ ಚಳಕಾಪೂರೆ, ಹೆಮಲತಾ ವೀರಶೆಟ್ಟೆ, ಕಲ್ಯಾಣರಾವ ಚಳಕಾಪೂರೆ, ಬಸವರಾಜ ಮಳಚಾಪೂರೆ, ಧೂಳಪ್ಪಾ, ಬಂಡೆಪ್ಪಾ ಎಕಲಾರೆ, ಶೀತಲ ಅಮೃತ ಚೌವ್ಹಾಣ, ಮಲ್ಲಿಕಾರ್ಜುನ ಮಾಯಕೊಡ, ರಾಜಕುಮಾರ ವರದಾ, ಶಂಕರ, ಸ್ವಪ್ನಾ, ಶಿವಕುಮಾರ ಮಠ, ಸರಸ್ವತಿ ಚನ್ನಬಸಪ್ಪಾ ಧತ್ತರಗಿ, ಬಸವರಾಜ ಸ್ವಾಮಿ, ಅನಂತರೆಡ್ಡಿ, ಸುವರ್ಣಾ ರಾಜಶೇಖರ ಮೀಸೆ, ನಾಗನಾಥ, ಬಸವರಾಜ, ಗುರುನಾಥ, ಗೌರಮ್ಮಾ ಸೇರಿದಂತೆ ಅನೇಕರಿದ್ದರು. ಬಸವರಾಜ ಮೂಲಗೆ ಸ್ವಾಗತಿಸಿದರು, ಉಮಾಕಾಂತ ಮೀಸೆ ನಿರೂಪಿಸಿದರು, ಸುನಿತಾ ಮೂಲಗೆ ವಂದಿಸಿದರು.