ಸಂಕ್ರಾಂತಿ ಅಂದರೆ ಸಾಕು ಎಳ್ಳು- ಬೆಲ್ಲ ತಿಂದು ಒಳ್ಳೆಯದನ್ನು ಮಾತಾಡಿ ಎಂದು ಹೇಳುವ ಮಾತು ನೆನಪಾಗುತ್ತದೆ. ಮಕರ ಸಂಕ್ರಾಂತಿ ಹಬ್ಬವು ಜನವರಿ 14ರಂದು ಬರುತ್ತದೆ. ಮಕರ ಸಂಕ್ರಾಂತಿಯನ್ನು ಸುಗ್ಗಿಯ ಹಬ್ಬ ಎಂದೂ ಕರೆಯುತ್ತಾರೆ. ಮಕರ ಸಂಕ್ರಾಂತಿಯನ್ನು ಎರಡು ದಿನಗಳ ಕಾಲ ಬಹಳ ವಿಶೇಷವಾಗಿ ಆಚರಣೆ ಮಾಡುತ್ತಾರೆ. ಮೊದಲನೇ ದಿನ ಮಹಿಳೆಯರ ಸಡಗರ, ಎರಡನೇ ದಿನ ಪುರುಷರ ಸಡಗರವಿರುವ ಮುಖ್ಯ ಹಬ್ಬವೆಂದು ಆಚರಿಸುತ್ತಾರೆ.
ಸಂಕ್ರಾಂತಿ ಹಬ್ಬ ಬಂತೆಂದರೆ ಸಾಕು ನಮ್ಮ ಹಳ್ಳಿಗಳಲ್ಲಿ ಎಲಿಲ್ಲದ ಸಂಭ್ರಮ ಸಡಗರ. ಹೆಣ್ಣುಮಕ್ಕಳು ಹೊತ್ತಾರೆ ಎದ್ದು ಮನೆ ಅಂಗಳ ಗುಡಿಸಿ, ನೀರಿನ ಚಳಿ ಹೊಡೆದು, ದನಕರ ಹುಡುಕಿಕೊಂಡು ಹೋಗಿ ಹೆಂಡಿ(ಸಗಣಿ) ಹಿಡಿದು ತಂದು ಹೆಂಡಿರಾಡಿ ಮಾಡಿ ಅಂಗಳಕ್ಕೆ ಹೆಂಡಿ ಚಳಿ ಹೊಡೆದು ಅಂಗಳ, ಮನೆ ಚಂದಾಗಿ ನುಣ್ಣಗೆ ಸಾರಿಸಿ ಬಣ್ಣದ ರಂಗೋಲಿ ಹಾಕಿ ಅದರೊಳಗೆ 5 ಹೆಂಡಿ (ಸಗಣೆ) ಗುಳ್ಳೆಗಳನ್ನು ಮಾಡಿ, ಅದರೊಳಗೆ ಕುಸುಬಿ ಹೂವು ಇಟ್ಟು ಅವುಗಳಿಗೆ ಪೂಜೆ ಮಾಡುವುದು ವಿಶೇಷ ಎನ್ನಿಸುತ್ತದೆ.
ಎಣ್ಣೆ ಸ್ನಾನ ಮಾಡುವುದು ಇನ್ನಷ್ಟು ವಿಶೇಷ. ಈ ಸಂಕ್ರಾಂತಿ ಹಬ್ಬದಲ್ಲಿ ಶೀತ ಆಗಬಾರದೆಂದು ಕೊಬ್ರಿ ಎಣ್ಣೆಯಲ್ಲಿ ಬಳ್ಳುಳ್ಳಿ ಹಾಕಿ ಕಾಯಿಸಿ ತಲೆಗೆ ಚನ್ನಾಗಿ ಹಚ್ಚಿಕೊಳ್ಳುವುದು, ಸೇವೆಣ್ಣಿ (ಒಳ್ಳೆಣ್ಣೆ, ಅಡುಗೆ ಎಣ್ಣೆ) ಬಟ್ಟಲಲ್ಲಿ ಹಾಕಿ ಒಲೆಮೇಲೆ ಇಟ್ಟು ಕಾಯಿಸಿ, ಉಗುರು ಬೆಚ್ಚಗೆ ಇರುವಾಗ ಸ್ವಲ್ಪ ಅಳಿ (ಹತ್ತಿ)ತಗೊಂಡು ಎಣ್ಣೆಯಲ್ಲಿ ಅದ್ದಿ ಎರಡು ಕಿವಿಯಲ್ಲಿ ಎಣ್ಣೆ ಹಾಕಿಕೊಂಡು ಮೈತುಂಬಾ ಎಣ್ಣೆ ಹಚ್ಚಿಕೊಂಡು ಎಳ್ಳು ಕುಟ್ಟಿ ಅದರಲ್ಲಿ ಅರಿಶಿನ ಹಾಕಿ ಕಲಸಿ ಮೈಗೆ ಹಚ್ಚಿಕೊಂಡು ಸ್ನಾನ ಮಾಡುವುದರ ಜತೆಗೆ ಎರಡು ಬಾರೆ ಹಣ್ಣು ನೆತ್ತಿಮೇಲೆ ಇಟ್ಟುಕೊಂಡು ತಲೆಮೇಲೆ ನೀರು ಸುರಿದುಕೊಂಡು ಸ್ನಾನ ಮಾಡುವುದು ತುಂಬಾ ವಿಶೇಷವೇ ಹೌದು.
ಹೆಣ್ಮಕ್ಳಳು ಕಣ್ಣಿಗೆ ಕಾಡಿಗೆ ಹಚ್ಚಿಕೊಂಡು ಚಂದಾಗಿ ತೈಯಾರಾಗಿ ಹೊಸ ಬಟ್ಟೆ ಹಾಕಿಕೊಂಡು ಹೊಲದಿಂದ ತಂದ ಕಡ್ಲಿಕಾಯಿ(ಸುಲಗೈ ),ಕಬು, ಬಾರೆ ಹಣ್ಣು, ಖಜೂರು, ಗಾಣದುಂಡಿ ತಿಂದು
ಅವ್ವ ಮಾಡಿದ ಎಳ್ಳು ಹಚ್ಚಿದ ಸಜ್ಜಿರೊಟ್ಟಿ, ಎಳ್ಳು ಹಚ್ಚಿದ ಜೋಳದ ರೊಟ್ಟಿ, ಅವರೆಕಾಯಿ ಮೆಂತ್ಯೆಸೊಪ್ಪು ಎರಡೂ ಸೇರಿಸಿ ವಿಶೇಷ ಪಲ್ಯ ಮಾಡಿ, ಜತೆಗೆ ಬದನೇಕಾಯಿ ಪಲ್ಯ ಉಳಗಡಿ ಚಟ್ನಿ, ಪುಂಡಿಪಲ್ಯ ಹೀಗೆ ಎರಡು -ಮೂರು ದಿನಸಿನ ಪಲ್ಯಗಳ ಜತೆಗೆ ಊಟ ಮಾಡುವುವೇ ಒಂದು ವಿಶೇಷ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಅನಂತ ಕುಮಾರ್ ಹೇಳಿಕೆಯಿಂದ ಜಿಲ್ಲೆಯ ಜನ ತಲೆ ತಗ್ಗಿಸುವಂತಾಗಿದೆ: ಕಾಂಗ್ರೆಸ್ ಮುಖಂಡ ದೀಪಕ್
ಎರಡನೇ ದಿನ ಗಂಡಸರ ಸಡಗರ. ಅವರೂ ಕೂಡ ಈ ದಿನ ಎಣ್ಣೆ ಎಳ್ಳು ಮೈಗೆ ಹಚ್ಚಿಕೊಂಡು ಸ್ನಾನ ಮಾಡುತ್ತಾರೆ. ಮುಖ್ಯ ಹಬ್ಬದಂದು ಹೋಳಿಗೆ(ಒಬ್ಬಟ್ಟು )ಬಜ್ಜಿ, ಕುರುಡಿಗೆ, ಹಪ್ಫಳ, ಶೇಂಗಾ ಹೋಳಿಗೆ ಮಾಡಿ ಉಂಡು ಸಂಜೆ ವೇಳೆ ಆಯಿ-ಮುತ್ಯಾ, ಅಪ್ಪಾ-ಅವ್ವ, ದೊಡ್ಡಪ್ಪ-ದೊಡ್ಡವ್ವ, ಕಾಕಾ-ಸಣ್ಣವ್ವ, ಅಣ್ಣ-ವೈನಿ(ಅತ್ತಿಗೆ), ಅಕ್ಕ-ತಂಗಿ ಎಲ್ಲರಿಗೂ ಸೇರಿದಂತೆ ಅಕ್ಕ-ಪಕ್ಕದ ಮನೆಯವರಿಗೂ ಎಳ್ಳು-ಬೆಲ್ಲ, ಕುಸರಳ್ಳು ನಾವು ಅವರಿಗೆ ಅವರು ನಮಗೆ ಬಾಯಿಯಲ್ಲಿ ಹಾಕಿ, ಚಿಕ್ಕವರು ದೊಡ್ಡವರ ಕಾಲಿಗೆ ಬಿದ್ದು ನಮಸ್ಕರಿಸಿ ಅಲೈಯಿ-ಬಲಾಯಿ ತಗೊಂಡು ಖುಷಿಯಿಂದ, ಪ್ರೀತಿಯಿಂದ, ಸೌಹಾರ್ದತೆಯಿಂದ ಆಚರಿಸುವ ಹಬ್ಬವೇ ಮಕರ ಸಂಕ್ರಾಂತಿ.

ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.