ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕು ವಿಶ್ವ ಪ್ರಸಿದ್ಧ ಕೊಕ್ಕರೆ ಬೆಳ್ಳೂರಿನ ಶಾಲೆಯಲ್ಲಿ 2019-20 ನೇ ಸಾಲಿನಿಂದ ಇಂಗ್ಲಿಷ್ ಮಾಧ್ಯಮ ಅಂದರೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಾಗಿ ಪರಿವರ್ತನೆಯಾಗಿದೆ.
ಈ ಬಗ್ಗೆ ಈ ದಿನ.ಕಾಮ್ಗೆ ಮಾಹಿತಿ ನೀಡಿರುವ ಶಾಲೆಯ ಮುಖ್ಯ ಶಿಕ್ಷಕ ಪ್ರಭಾಕರ ಕೆ, “ನಮ್ಮಲ್ಲಿ ಎಂಟಿಪ್ ತರಬೇತಿ ಹೊಂದಿದ ಶಿಕ್ಷಕರು ಇರುವುದರಿಂದ ಜೊತೆಗೆ ದ್ವಿಭಾಷಾ ಪಠ್ಯ ಇರುವುದರಿಂದ ಬೋಧನೋಪಕರಣಗಳನ್ನು ಬಳಸಿಕೊಂಡು ಉತ್ತಮ ರೀತಿಯಲ್ಲಿ ಬೋಧನೆ ಮಾಡತಕ್ಕ ವಿಷಯವಾರು ಶಿಕ್ಷಕರು ಇದ್ದಾರೆ. ಇದರಿಂದ ಮಕ್ಕಳ ಕಲಿಕೆಗೆ ತುಂಬಾ ಅನುಕೂಲ ಆಗಿದೆ” ಎಂದರು.
“ಜೊತೆಗೆ ಸುತ್ತಮುತ್ತಲ ಮೂರು ಪಂಚಾಯಿತಿ ವ್ಯಾಪ್ತಿಯ ಕನ್ನಡ ಮಾಧ್ಯಮ ಶಾಲಾ ಮಕ್ಕಳು ಆರನೇ ತರಗತಿಗೆ ನಮ್ಮ ಶಾಲೆಗೆ ದಾಖಲಾಗುತ್ತಿದ್ದಾರೆ. ಅವರಿಗೆ ಪ್ರಾರಂಭದಲ್ಲಿ ಎದುರಾಗುವ ನುಡಿಯ ತೊಡಕನ್ನು, ಎರಡು ನುಡಿಯಲ್ಲಿ ಬೋಧಿಸುವ ಮೂಲಕ ಹೋಗಲಾಡಿಸುತ್ತೇವೆ. ಆರು ತಿಂಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ಮಕ್ಕಳಿಗೆ ಸರಿ ಸಮಾನವಾಗಿ ಉತ್ತಮ ರೀತಿಯಲ್ಲಿ ಕಲಿಕೆ ಪ್ರಾರಂಭಿಸುತ್ತಿದ್ದಾರೆ” ಎಂದು ಮಾಹಿತಿ ನೀಡಿದರು.
“ನಮ್ಮಲ್ಲಿ ಎಲ್ಲಾ ಜಿಪಿಟಿ ಪದವಿ ಪಡೆದ ವಿಷಯವಾರು ಶಿಕ್ಷಕರು ಇದ್ದಾರೆ. ನಮ್ಮ ಶಾಲೆಯಲ್ಲಿ ಪಠ್ಯಪೂರಕ ಚಟುವಟಿಕೆಗಳಿಗೆ ಹೆಚ್ಚಿನ ಹೊತ್ತು ಸಿಕ್ಕು, ರಾಷ್ಟ್ರಮಟ್ಟದಲ್ಲಿ ಮಕ್ಕಳು ಸಾಧನೆ ಮಾಡಿದ್ದಾರೆ ಎಂದು ಹೇಳಲು ಹೆಮ್ಮೆಯಾಗುತ್ತದೆ” ಎಂದು ಇಲ್ಲಿನ ದೈಹಿಕ ಶಿಕ್ಷಕರಾದ ಶಿವಲಿಂಗಯ್ಯ ಮಾಹಿತಿ ನೀಡಿದರು.
“2023-24ನೇ ಸಾಲಿನಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿನಿ ಹೆಚ್. ಎಮ್. ಲತಾ ಎನ್ಎಂಎಂಎಸ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ನಮ್ಮ ಶಾಲೆ ಹಾಗೂ ನಮ್ಮ ತಾಲೂಕಿಗೆ ಕೀರ್ತಿ ತಂದಿದ್ದಾಳೆ” ಎಂದು ವಿಜ್ಞಾನ ಶಿಕ್ಷಕಿ ಬಹಳ ಹೆಮ್ಮೆಯಿಂದ ಹೇಳಿಕೊಂಡರು.

“ನಮ್ಮಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಎರಡು ನುಡಿಯಲ್ಲೂ ಬೋಧನೆ ಮಾಡುತ್ತಿರುವುದರಿಂದ, ಇಂಗ್ಲಿಷ್ ಶಾಲೆಗಳಿಂದಾಗಿ ಕನ್ನಡ ನುಡಿ ಅಳಿಯುತ್ತದೆ ಎನ್ನುವ ಶಿಕ್ಷಣಾಸಕ್ತರ ಆರೋಪವನ್ನು ಸುಳ್ಳಾಗಿಸಿದ್ದೇವೆ. ಮಕ್ಕಳು ಎರಡು ನುಡಿಯಲ್ಲೂ ನಿರರ್ಗಳವಾಗಿ ಓದುತ್ತಾರೆ. ಇದರಿಂದ ನಮ್ಮ ಶಾಲೆಯ ಸುತ್ತಮುತ್ತಲಿನ ಖಾಸಗಿ ಇಂಗ್ಲಿಷ್ ಶಾಲೆಗಳಿಗೆ ಸರಿಸಮಾನವಾಗಿ ಪೈಪೋಟಿ ನೀಡಲು ಸಾಧ್ಯವಾಗಿದೆ. ಎಲ್ಲ ಸರ್ಕಾರಿ ಶಾಲೆಗಳಲ್ಲೂ ನಮ್ಮಲ್ಲಿಯಂತೆ ಎರಡು ನುಡಿಯಲ್ಲಿ ಬೋಧಿಸಲು ಅನುವು ಮಾಡಿಕೊಟ್ಟರೆ, ಅವುಗಳು ಮುಚ್ಚುವ ಅಪಾಯ ತಪ್ಪಿ, ಉಳಿದು ಬೆಳೆಯುತ್ತವೆ”. ಎಂದು ಗಣಿತ ಶಿಕ್ಷಕಿ ತಮ್ಮ ಅನುಭವವನ್ನು ಹಂಚಿಕೊಂಡರು.
ಶಿಕ್ಷಣಾಸಕ್ತ ಅರೆಕಲ್ದೊಡ್ಡಿ ಕುಳ್ಳೇಗೌಡ ಈ ದಿನ.ಕಾಮ್ ಜೊತೆಗೆ ಮಾತನಾಡುತ್ತ ” ಕೊಕ್ಕರೆ ಬೆಳ್ಳೂರಿನಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆ ತೆರೆದಿರುವುದರಿಂದ ಸುತ್ತಮುತ್ತಲ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆ ಆಗುತ್ತಿದೆ. ಇಲ್ಲಿ ಮಾತ್ರ ದಾಖಲಾತಿ ಹೆಚ್ಚಾಗಿದೆ. ಆದರೆ ಸುತ್ತಮುತ್ತಲ ಕೆಲವು ಶಾಲೆಗಳಲ್ಲಿ ಮೊದಲನೇ ತರಗತಿಗೆ ದಾಖಲಾತಿಯೇ ನಡೆದಿಲ್ಲ. ಪಕ್ಕದ ಅರೆತಿಪ್ಪೂರಿನ ಶಾಲೆ ಈ ವರ್ಷ ಬಾಗಿಲು ಹಾಕಿಕೊಂಡಿದೆ” ಇದರಿಂದ ಅಕ್ಕಪಕ್ಕದ ಶಾಲೆಗಳಿಗೆ ಅನ್ಯಾಯವಾಗುತ್ತದೆ. ಶಾಲೆಗಳು ಮುಚ್ಚುವ ಹಂತ ತಲುಪಿವೆ. ಇದರ ಪರಿಣಾಮವಾಗಿ ಉದ್ಯೋಗ ನಷ್ಟವಾಗುತ್ತವೆ. ಪ್ರತಿ ಸರಕಾರಿ ಶಾಲೆಯಲ್ಲಿ ದ್ವಿಭಾಷಾ ಮಾಧ್ಯಮ ತೆರೆದರೆ ಎಲ್ಲಾ ಶಾಲೆಗಳಿಗೂ ಅನುಕೂಲ ಆಗುತ್ತದೆ. ಆಯಾ ಊರಿನಲ್ಲೇ ಓದುತ್ತಾರೆ”. ಎಂದು ಸಲಹೆ ನೀಡಿದರು.
ವಿಶ್ವ ಪ್ರಸಿದ್ಧ ಗ್ರಾಮವಾದರೂ ಕೊಕ್ಕರೆ ಬೆಳ್ಳೂರು ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಪ್ರಸ್ತುತ ದ್ವಿಭಾಷಾ ನೀತಿ ಎಂಬ ಕಾರಣಕ್ಕೆ ಪರದಾಡಿಕೊಂಡು ಸುತ್ತಮುತ್ತಲ ಊರುಗಳಿಂದ ಮಕ್ಕಳು ಬರುತ್ತಿದ್ದಾರೆ. ಕೊಕ್ಕರೆ ಬೆಳ್ಳೂರಿನಂತ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರ ದ್ವಿಭಾಷಾ ಶಾಲೆ ತೆರೆಯದೆ, ಎಲ್ಪಿಎಸ್ ಶಾಲೆಯಾದರೂ ಎಲ್ಲಾ ಕಡೆ ದ್ವಿಭಾಷಾ ಮಾಧ್ಯಮ ತೆರೆದರೆ ತಮ್ಮ ಊರಿನಲ್ಲೇ ಓದುತ್ತಾರೆ. ಆಗ ಆ ಊರಿನ ಶಾಲೆ ಕೂಡ ಮುಚ್ಚಲ್ಲ ಎಂದರು.
“ಅಲ್ಲಿನ ಶಿಕ್ಷಕರಿಗೂ ಕೆಲಸ ಉಳಿಯುವುದರ ಜೊತೆಗೆ ಇನ್ನೂ ಹೆಚ್ಚಿನ ನೇಮಕಾತಿಗಳು ಆಗುತ್ತವೆ. ಶಾಲೆಗಳನ್ನು ಮುಚ್ಚುತ್ತಾ ಹೋದರೆ, ಓದಿದ ನಮ್ಮ ಮಕ್ಕಳು ನಿರುದ್ಯೋಗಿಗಳು ಆಗಬೇಕಾಗುತ್ತದೆ, ಇದನ್ನು ಹೋಗಲಾಡಿಸುವತ್ತ ಸರಕಾರಗಳು ತಮ್ಮ ನೀತಿಗಳನ್ನು ಬದಲಾಯಿಸಬೇಕು” ಎಂದು ಒತ್ತಾಯಿಸಿದರು.

I’m proud to say my village school is getting this much of Improvement. I have some memories in my summer vacation. Nima katya chatuvatikegalige nana thumbu hrudhayadha dhanyavadhagalu. Well done sir. Always stay like this only 🎉🎉