ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದ ಯುವಕನೋರ್ವ ಜಿಲೆಟಿನ್ ಸ್ಪೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯದ ನಾಗಮಂಗಲದ ಕಾಳೇನಹಳ್ಳಿಯಲ್ಲಿ ನಡೆದಿದೆ.
ನಾಗಮಂಗಲದ ಬಸವೇಶ್ವರ ನಗರ ನಿವಾಸಿ ರಾಮಚಂದ್ರ(21) ಮೃತಪಟ್ಟ ಯುವಕ. ಈತ ಕಳೆದ ರಾತ್ರಿ, ಕಲ್ಲು ಗಣಿಗಾರಿಕೆಗೆ ಬಳಸುವ ಜಿಲೆಟಿನ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮಚಂದ್ರ ಕಾಳೇನಹಳ್ಳಿಯ ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದ. ಕಳೆದ ವರ್ಷ ಇವರಿಬ್ಬರು ಮನೆ ತೊರೆದು ಓಡಿ ಹೋಗಿದ್ದರು. ಆ ವೇಳೆ ರಾಮಚಂದ್ರ ವಿರುದ್ದ ಪೋಕ್ಸೊ ಕಾಯ್ದೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರು ತಿಂಗಳು ಜೈಲು ಶಿಕ್ಷೆಯನ್ನೂ ಅನುಭವಿಸಿದ್ದ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಗಾಯಕಿ ಗೌರಿ ಗೋನಾಳಗೆ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ
ಬಳಿಕ 2 ಕುಟುಂಬಗಳ ರಾಜಿ ಸಂಧಾನ ಬಳಿಕ ಕೇಸ್ ಹಿಂಪಡೆದಿದ್ದರು. ಆ ಬಳಿಕ ಅಪ್ರಾಪ್ತೆ ಪ್ರಿಯತಮೆ ರಾಮಚಂದ್ರನ ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎನ್ನಲಾಗಿದೆ. ಇದರಿಂದ ಮನನೊಂದಿದ್ದ ರಾಮಚಂದ್ರ ಕಳೆದ ರಾತ್ರಿ ಯುವತಿಯ ಮನೆ ಬಳಿ ತೆರಳಿ ಬಂಡೆಗಳನ್ನು ಸಿಡಿಸುವ ಜಿಲೆಟಿನ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಸ್ಫೋಟದ ತೀವ್ರತೆಗೆ ರಾಮಚಂದ್ರನ ದೇಹ ಛಿದ್ರ-ಛಿದ್ರವಾಗಿದೆ.
ಈ ಬಗ್ಗೆ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.