ಸಂಘಟನೆಗಳು ತಮ್ಮೆಲ್ಲ ಮಡಿವಂತಿಕೆ ಬಿಟ್ಟು ಹೋರಾಟ ಮಾಡಬೇಕಿದೆ. ಇಂದು ಸಾಂಕೇತಿಕವಾಗಿ ಹೋರಾಟ ಮಾಡದೆ ತೀವ್ರವಾಗಿ ಮಾಡಬೇಕು. ಆದ್ದರಿಂದ ನವೆಂಬರ್ 26ರಂದು ಡಿಸಿ ಕಚೇರಿಗೆ ಮುತ್ತಿಗೆ ಹಾಕೋಣ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಕರೆ ನೀಡಿದರು.
ಮಂಡ್ಯ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ನವೆಂಬರ್ 26ರಂದು ದೇಶವ್ಯಾಪ್ತಿ ನಡೆಯುವ ಒಕ್ಕೂಟ ಮತ್ತು ರಾಜ್ಯ ಸರ್ಕಾರದ ವಿರುದ್ದ ಧ್ವನಿ ಎತ್ತಲು ಸಂಯುಕ್ತ ಕಿಸಾನ್ ಮೋರ್ಚ ಮತ್ತು ಜೆಸಿಟಿಯು ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಎಚ್ಚರಿಕೆ ಜಾಥಾ ನಡೆಸುವ ಸಂಬಂಧ ಸಂಯುಕ್ತ ಹೋರಾಟ-ಕರ್ನಾಟಕ ಮಂಡ್ಯ ಜಿಲ್ಲಾ ಸಮನ್ವಯ ಸಮಿತಿ ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ರೈತ ವಿರೋಧಿ ಕಾನೂನು ತಂದ ಮೋದಿ ಸರ್ಕಾರ ಎದುರು ಕಳೆದ ಲೋಕಸಭಾ ಚುನಾವಣೆಯ ವೇಳೆ ಎಲ್ಲರೂ ಒಟ್ಟಾಗಿ ಹೋರಾಟ ಮಾಡಿದ್ದರಿಂದ ಅವರು 400 ಸೀಟು ಪಡೆಯಲಾಗಲಿಲ್ಲ. ರಾಜ್ಯದಲ್ಲಿ ಜನರ ಬೆಂಬಲದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು. ಆದರೂ ಜನರಿಗೆ ಏನೂ ಅನುಕೂಲ ಮಾಡಲಿಲ್ಲ. ಒಕ್ಕೂಟ ಮತ್ತು ರಾಜ್ಯ ಸರ್ಕಾರ ಎರಡರ ವಿರುದ್ಧ ಹೋರಾಟ ರೂಪಿಸಬೇಕು. ಎಲ್ಲ ಸಂಘಟನೆಗಳು ಒಂದಾಗಿ ನವೆಂಬರ್ 26ರ ಹೋರಾಟ ಯಶಸ್ವಿಯಾಗುವಂತೆ ಮಾಡೋಣ” ಎಂದರು.
ಮಹಿಳಾ ಮುನ್ನಡೆಯ ಪೂರ್ಣಿಮಾ ಮಾಡನಾಡಿ, “ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ಹೋರಾಟ ರೂಪಿಸಲು ಪ್ರಚಾರಾಂದೋಲನ ಮಾಡಬೇಕು. ರೈತ ವಿರೋಧಿ ಕಾನೂನುಗಳ ಬಗ್ಗೆ ಜನರಿಗೆ ವಿಚಾರ ತಲುಪಿಸಬೇಕಾಗಿದೆ. ನಮ್ಮ ಜಿಲ್ಲೆಯ ಸಮಸ್ಯೆಗಳನ್ನು ಒಳಗೊಂಡಂತೆ ಕರಪತ್ರ ಅಚ್ಚು ಹಾಕಿಸಿ ಪ್ರತಿ ಹಳ್ಳಿ ಹಳ್ಳಿಗೂ ಅರಿವಿನ ಅಭಿಯಾನ ತೆಗೆದುಕೊಂಡು ಹೋಗಬೇಕು. ಕರ್ನಾಟಕ ಜನಶಕ್ತಿ ಹಾಗೂ ಮಹಿಳಾ ಮುನ್ನಡೆಯಿಂದ ನಾವು ಭಾಗವಹಿಸುವ ಮೂಲಕ ಹೋರಾಟಕ್ಕೆ ಬೆಂಬಲ ನೀಡುತ್ತೇವೆ” ಎಂದರು.
ಸಿಪಿಐಎಂನ ಕುಮಾರಿ ಮಾತನಾಡಿ, “ನವೆಂಬರ್ 26 ಸಂವಿಧಾನ ದಿನ. ಹಾಗೆಯೇ ದೆಹಲಿಯಲ್ಲಿ ರೈತರು ಚಳುವಳಿ ಶುರು ಮಾಡಿದ ದಿನ. ತಿಂಗಳುಗಟ್ಟಲೆ ರೈತರು ದೆಹಲಿಯಲ್ಲಿ ಹೋರಾಟ ಮಾಡಿದ್ದರಿಂದ ಬಲ ಕಳೆದುಕೊಂಡಿರುವ ಮೋದಿ ಸರ್ಕಾರ ಕರಾಳ ಕಾಯ್ದೆಯನ್ನು ಬದಲಾಯಿಸಿಲ್ಲ. ಭತ್ತ, ಗೋದಿ ಮುಂತಾದ ಧಾನ್ಯಗಳನ್ನು ಕೊಳ್ಳಲು ಖರೀದಿ ಕೇಂದ್ರ ತೆಗೆದಿಲ್ಲ. ರೈತರು ಹೋರಾಟ ಮಾಡಿ ಮೋದಿ ಸರ್ಕಾರ ಮಂಡಿಯೂರುವಂತೆ ಮಾಡಿದ್ದರಿಂದ ಪ್ರತಿಕಾರವಾಗಿ ಮೋದಿ ಸರ್ಕಾರ ರೈತರ ಎದುರು ಪ್ರತಿಕಾರಕ್ಕೆ ನಿಂತಿದೆ. ಈ ನಡೆಯನ್ನು ಖಂಡಿಸಿ ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಿದೆ” ಎಂದರು.
ಮುಸ್ಲಿಂ ಸೌಹಾರ್ದ ವೇದಿಕೆಯ ಅಬ್ದುಲ್ ಸುಕೂರ್ ತರಿಪುರ ಮಾತನಾಡಿ, “ನಮ್ಮದು ಕೃಷಿ ಪ್ರಧಾನ ಒಕ್ಕೂಟ. ಇಲ್ಲಿ ರೈತರು ಬೆಳೆದ ಬೆಳೆಯ ಉತ್ಪಾದನೆಗೆ ತಕ್ಕಂತೆ ಆದಾಯ ಸಿಗುತ್ತಿಲ್ಲ. ವೈಜ್ಞಾನಿಕ ಬೆಂಬಲ ಬೆಲೆ ನೀಡುತ್ತೇವೆಂದು ಒಪ್ಪಿಕೊಂಡ ಮೋದಿ ಸರ್ಕಾರ ಮಾತಿಗೆ ತಪ್ಪಿದೆ. ಸಂಘಟನೆಗಳೆಲ್ಲ ರೈತರ ಪರವಾಗಿ ಧ್ವನಿ ಎತ್ತಲಿಲ್ಲವೆಂದರೆ ಮುಂದಿನ ದಿನಗಳಲ್ಲಿ ಕಷ್ಟವಾಗಲಿದೆ” ಎಂದು ಹೋರಾಟಕ್ಕೆ ತಮ್ಮ ಬೆಂಬಲ ಘೋಷಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಉದ್ದೇಶಪೂರ್ವಕವಾಗಿ ಅಭಿವೃದ್ಧಿ ವಿಚಾರಗಳ ನಿರ್ಲಕ್ಷ್ಯ; ಆಳುವ ಸರ್ಕಾರಗಳ ವಿರುದ್ಧ ಎಸ್ ವರಲಕ್ಷ್ಮಿ ಆರೋಪ
ಪ್ರಾಂತ ರೈತ ಕೂಲಿಕಾರರ ಸಂಘಟನೆಯ ನರಹಳ್ಳಿ ಸುರೇಂದ್ರ ಮಾತನಾಡಿ, “ರೈತ ಕೂಲಿಕಾರರು ಹೋರಾಟಕ್ಕೆ ಬರಬೇಕೆಂದರೆ ದಿನದ ಕೂಲಿ ಬಿಟ್ಟು ಬರಬೇಕು. ವಿದ್ಯಾರ್ಥಿಗಳು ಇಂದಿನ ಹೋರಾಟಗಳಿಗೆ ನಂಬಿಕೆಯಿಟ್ಟು ಯಾಕೆ ಬರುತ್ತಿಲ್ಲವೆಂದು ನಾವೆಲ್ಲ ವಿಮರ್ಶೆ ಮಾಡಿಕೊಳ್ಳಬೇಕಿದೆ. ಹೋರಾಟಗಾರರು ಹೋರಾಟ ಮಾಡುವುದರ ಜೊತೆಗೆ ನಮ್ಮಿಂದ ಗೆದ್ದು ಹೋದಂತಹ ಜನಪ್ರತಿನಿಧಿಗಳು ಸಂಸತ್ತಿನಲ್ಲಿ ಈ ಕರಾಳ ಕಾನೂನನ್ನು ಹಿಂಪಡೆಯಲು ಒತ್ತಾಯ ಮಾಡಬೇಕಿದೆ. ಮೋದಿ ಸರ್ಕಾರದ ಕರಾಳ ನಿರ್ಣಯದ ವಿರುದ್ಧ ಯೋಜಿತವಾಗಿ ಹೋರಾಟ ಮಾಡಬೇಕಿದೆ ಎಂದರು
ಈ ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗೋವಿಂದೇಗೌಡ, ಮಂಜು, ರಘು, ಕರ್ನಾಟಕ ಜನಶಕ್ತಿಯ ಸಿದ್ದರಾಜು, ಮಹಿಳಾ ಮುನ್ನಡೆಯ ಶಿಲ್ಪ, ಸಿಪಿಐಎಂನ ಭರತ್ ರಾಜು, ದೇವಿ, ಹನುಮೇಶ್, ಅಮಾಸೆಯ್ಯ, ಕಲಾವತಿ, ಮುಸ್ಲಿಂ ಸೌಹಾರ್ದ ವೇದಿಕೆಯ ಆಯೂಬ್ ಷರೀಫ್ ಇನ್ನೂ ಮಂತಾದವರು ಭಾಗವಹಿಸಿದ್ದರು.