ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸೀರತ್ ಅಭಿಯಾನದ ಪ್ರಯುಕ್ತ ಪ್ರವಾದಿ ಮುಹಮ್ಮದ್(ಸ) ಲೇಖನ ಸಂಕಲನ ಪುಸ್ತಕವನ್ನು ನಿರ್ಮಲಾನಂದ ಸ್ವಾಮೀಜಿಯವರು ಬಿಡುಗಡೆಗೊಳಿಸಿ, ವಿಚಾರ-ವಿನಿಮಯ ನಡೆಸಿದರು.
ದೇಶದಾದ್ಯಂತ ನೂರಾರು ಕಡೆಗಳಲ್ಲಿ ವ್ಯಾಪಿಸಿರುವ ಆದಿಚುಂಚನಗಿರಿ ಶಾಖಾ ಮಠಗಳ ಮೂಲ ಮಠದಲ್ಲಿ ಸೀರತ್ ಅಭಿಯಾನದ ಕೊನೆಯ ದಿನದ ಭಾಗವಾಗಿ ಜಮಾಅತೆ ಇಸ್ಲಾಮೀ ಹಿಂದ್ ಮೈಸೂರು ವಲಯ ಸ್ಥಾನೀಯ ಘಟಕದಿಂದ ಮಠದ ಸ್ವಾಮೀಜಿ ನಿರ್ಮಲಾನಂದ ಸ್ವಾಮೀಜಿಯವರನ್ನು ಸಂದರ್ಶಿಸಲಾಯಿತು.
ಸೀರತ್ ಅಭಿಯಾನ ಪ್ರಯುಕ್ತ ಶಾಂತಿ ಪ್ರಕಾಶನ ಹೊರತಂದಿರುವ “ಪ್ರವಾದಿ ಮುಹಮ್ಮದ್(ಸ) ಲೇಖನ ಸಂಕಲನ” ಪುಸ್ತಕವನ್ನು ನೀಡಿ ಮಾಹಿತಿ ನೀಡಲಾಯಿತು. ಬಳಿಕ ಸ್ವಾಮೀಜಿಯವರು ಪುಸ್ತಕ ಬಿಡುಗಡೆ ಮಾಡಿ ಶುಭ ಹಾರೈಸಿದರು.
ವಿವಿಧ ಪ್ರವಾದಿಗಳ ಬಗ್ಗೆ ಹಾಗೂ ವಿಶೇಷವಾಗಿ ಪ್ರವಾದಿ ಮುಹಮ್ಮದ್(ಸ)ರ ಕುರಿತು ಸುಮಾರು ಅರ್ಧ ಗಂಟೆಗಳ ಕಾಲ ತಮ್ಮ ಪೀಠದಲ್ಲಿ ಕುಳಿತುಕೊಂಡು ಸಂದರ್ಶಕರ ಸಮ್ಮುಖದಲ್ಲಿ ವಿಚಾರ ವಿನಿಮಯ ನಡೆಸಿದರು.
ಇದನ್ನು ಓದಿದ್ದೀರಾ? ಮಂಡ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಹಾವಳಿ: ಬಡ ಮಹಿಳೆಯರ ಬದುಕಿಗೆ ಬೆಂಕಿ
ಜಮಾಅತ್ ತಂಡದಲ್ಲಿ ಮೈಸೂರು ವಲಯ ಸಂಚಾಲಕ ಅಬ್ದುಸ್ಸಲಾಂ ಉಪ್ಪಿನಂಗಡಿ, ಮೈಸೂರು ಸ್ಥಾನೀಯ ಉಪಾಧ್ಯಕ್ಷ ಅಸಾದುಲ್ಲಾ, ಸದಸ್ಯರಾದ ಅಬ್ದುಲ್ ವಾಹಿದ್ ಅಲಿ, ಫಯಾಝ್ ಮಲಿಕ್ ಹಾಗೂ ಪತ್ರಕರ್ತ ಮೋಹನ್ ಮೈಸೂರು ಉಪಸ್ಥಿತರಿದ್ದರು.
