ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ನಡೆಯಲಿರುವ ‘ಭಾರತೀಯ ಸಂಸ್ಕೃತಿ ಉತ್ಸವ ‘ವಿರೋಧಿಸಿ ʼಕಲ್ಯಾಣ ಕರ್ನಾಟಕದಲ್ಲಿ ನಾಗಪೂರದ ನಾಝಿ ವಿಷ ಸರ್ಪಗಳು ಬರುತ್ತಿವೆ ಎಚ್ಚರ’ ಎಂಬ ಘೋಷಣೆದೊಂದಿಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಮತ್ತು ಯಾದಗಿರಿ ಜಿಲ್ಲಾ ಸಮಿತಿಯಿಂದ ಸೋಮವಾರ ಕಲಬುರಗಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಜಗತ್ ವೃತ್ತವರೆಗೆ ʼಕೋಮುವಾದದ ಭೂತ ದಹನʼ ಹಾಗೂ ನಾಗಪುರ ನಾಝಿ ವಿಷ ಸರ್ಪಗಳ ಅಣಕು ಶವಯಾತ್ರೆ ನಡೆಸಿ ಜಗತ್ ವೃತ್ತದಲ್ಲಿ ದಹನ ಮಾಡಲಾಯಿತು.
ದಸಂಸ ಮುಖಂಡ ಅರ್ಜುನ್ ಭದ್ರೆ ಮಾತನಾಡಿ, ʼ12ನೇಯ ಶತಮಾನದಲ್ಲಿ ಸಾಮಾಜಿಕ ಸಮಾನತೆಗಾಗಿ ಕ್ರಾಂತಿಗೈದ ಶರಣರ ಕರ್ಮಭೂಮಿ ಕಲ್ಯಾಣ ಕರ್ನಾಟಕ. ಸೂಫಿ, ಶರಣರ, ಸಂತರ ನೆಲ. ಹಿಂಸೆಯನ್ನು ಅಹಿಂಸೆಯ ಮೂಲಕ ಗೆದ್ದ ಸಾಮ್ರಾಟ್ ಅಶೋಕ ನಡೆದಾಡಿದ ಈ ನೆಲದಲ್ಲಿ ನಾಗಪುರದ ನಾಝಿ ವಿಷ ಸರ್ಪಗಳು ವಿಷವನ್ನು ಹರಿಬಿಡಲು ಬರುತ್ತಿವೆ. ಅವುಗಳಿಂದ ನಾವು ಎಚ್ಚರ ವಹಿಸಬೇಕಾಗಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ʼಜ.29ರಿಂದ ಫೆ.9ರವರೆಗೆ ಸೇಡಂನಲ್ಲಿ ಆಯೋಜಿಸಿರುವ ‘ಭಾರತೀಯ ಸಂಸ್ಕೃತಿ ಉತ್ಸವ’ ಕಾರ್ಯಕ್ರಮ ಸಂಘ ಪರಿವಾರದ ಕಾರ್ಯಕ್ರಮ. ಈ ಕಾರ್ಯಕ್ರಮದ ಎಲ್ಲ ವಿಚಾರ ಗೋಷ್ಠಿಗಳು ಭಾರತೀಯ ಸಂಸ್ಕೃತಿ ಹೆಸರಿನಲ್ಲಿ, ಸನಾತನವಾದ, ವೈದಿಕ ಪರಂಪರೆಯ ವರ್ಣವ್ಯವಸ್ಥೆ ಕಾಪಾಡುವ ಮತ್ತು ಅದನ್ನು ಉಳಿಸಿಕೊಳ್ಳುವ ಹುನ್ನಾರಗಳು ಅಡಗಿವೆ. ತಮ್ಮದು ಸಾಂಸ್ಕೃತಿಕ ಸಂಘಟನೆ, ದೇಶಭಕ್ತರ ಕೂಟ ಎಂದೆಲ್ಲ ಹೇಳಿಕೊಳ್ಳುವ ಆರ್ಎಸ್ಎಸ್, ಅದರ ವಿವಿಧ ಅಂಗಗಳು ದೇಶದಲ್ಲಿ ಆಶಾಂತಿ ಮೂಡಿಸುತ್ತಾ ಬಂದಿವೆ. ಅದನ್ನು ಮುಂದುವರೆಸುವ ಭಾಗವೇ ಈ ಕಾರ್ಯಕ್ರಮʼ ಎಂದು ಆರೋಪಿಸಿದ್ದಾರೆ.
ʼಆರ್ಎಸ್ಎಸ್ ತನ್ನ ವಿಭಜನೆ ಮತ್ತು ಹಿಂಸಾತ್ಮಕ ಕಾರ್ಯಾಚರಣೆಗಳಿಂದ ದಲಿತ, ಅಲ್ಪಸಂಖ್ಯಾತರ, ಹಿಂದುಳಿದ, ಮಹಿಳೆಯರ ಮತ್ತು ಕಾರ್ಮಿಕ ವರ್ಗಗಳಲ್ಲಿ ಆತಂಕ ಮೂಡಿಸುವ ವಾತಾವರಣ ಸೃಷ್ಟಿಸುತ್ತಾ ಬಂದಿದೆ. ಆರ್ಎಸ್ಎಸ್ ಸ್ಥಾಪನೆಯ ಉದ್ದೇಶವೇ ಬ್ರಾಹ್ಮಣತ್ವದ ರಕ್ಷಣೆ ಎಂಬ ಸತ್ಯವನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಕಳೆದು ಹೋದ ಪೇಶ್ವೆ ಸರ್ಕಾರವನ್ನು ಮತ್ತೆ ರೂಪಿಸಿ ಚಿತ್ವಾನ್ ಅಧಿಪತ್ಯವನ್ನು ಪುನರ್ ಸ್ಥಾಪಿಸುವ ಉದ್ದೇಶದಿಂದ ಆರ್ಎಸ್ಎಸ್ ಪ್ರಾರಂಭಗೊಂಡಿದೆ. ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ಆಶಯಗಳ ವಿರುದ್ಧ ತಮ್ಮ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆʼ ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕೋಗಿಲೆ ಕಂಠದ ಪ್ರಕೃತಿಗೆ ಬೇಕಿದೆ ಪ್ರೋತ್ಸಾಹ
ಪ್ರತಿಭಟನೆಯಲ್ಲಿ ಕದಸಂಸ ರಾಜ್ಯ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ಸೇರಿದಂತೆ ಪ್ರಮುಖರಾದ ಕೆ.ನೀಲಾ, ಮೀನಾಕ್ಷಿ ಬಾಳಿ, ಆರ್.ಕೆ.ಹುಡಗಿ, ಅಶ್ವಿನಿ ಮದನಕರ್, ಮಹಾಂತೇಶ ಬಡದಾಳ, ಮಲ್ಲಿಕಾರ್ಜುನ ಖನ್ನಾ, ಸೂರ್ಯಕಾಂತ ಅಜಾದಪೂರ, ರಾಜಕುಮಾರ ನಿಂಬಾಳ, ಶಿವಕುಮಾರ ಕೋರಳ್ಳಿ, ಪ್ರೀತಮ್ ನಾಕಮನ, ಮಹೇಶ ಕೋಕಿಲೆ, ಸುಭಾಷ ಕಲ್ಮರಿ ಚಿತ್ತಾಪೂರ, ಮಹೇಶ ಸುಲೇಕರ, ಮರೆಪ್ಪ ಮಾತಾಳ, ಸಾಯಬಣ್ಣ ಕೋಟನೂರ, ದೊಡ್ಡೇಶ ಹಾಲು, ಪರಶುರಾಮ ರಾಜಾಪೂರ, ರಾಮಣ್ಣ ಪಾಸ್ವಾನ್, ರಾಜಶೇಖರ ಹೊಸಮನಿ, ಮಲ್ಲಿಕಾರ್ಜುನ ಹಾಸನಾಳ, ಮಲ್ಲಿಕಾರ್ಜುನ ಕುರಕುಂದಿ, ಮಲ್ಲಿಕಾರ್ಜುನ ಶಾಖಾನೂರ, ಅಜೀಜಸಾಬ್ ಐಕೂರ, ಶೇಖರ ಜೀವಣಗಿ, ಬಸವರಾಜ ಶೆಳ್ಳಗಿ, ಭೀಮಣ್ಣಾ ಖ್ಯಾತನಾಳ, ಹಯ್ಯಾಳಪ್ಪ ಗಂಗನಾಳ, ನಿಂಗಪ್ಪ ಯಾದಗಿರ, ಮರಲಿಂಗಪ್ಪ ನಾಟಿಕರ ಹುಣಸಗಿ, ಬಸವರಾಜ ಗೋನಳ, ಆಂಜನೇಯ ಎಲೇರಿ, ದೀಲಿಪ್ ಕಾಯಂಕರ್, ದಿಲ್ಸಾದ್, ಮೈಲಾರಿ ದೊಡ್ಡಮನಿ, ಶಿವಶಂಕರ್ ಹೊಸಮನಿ ಸುರಪುರ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.