- ಮನೆ ಮಗನ ಚುನಾವಣೆ ಎನ್ನುವಂತೆ ಕೆಲಸ ಮಾಡಿ ಗೆಲ್ಲಿಸಿದ್ದಕ್ಕೆ ಧನ್ಯವಾದ
- ಈ ಬಾರಿಯ ಚುನಾವಣೆ ಸಿದ್ದಾಂತಗಳ ನಡುವೆ ನಡೆದ ಚುನಾವಣೆಯಾಗಿತ್ತು
ಈ ಬಾರಿಯ ವಿಧಾನಸಭೆ ಚುನಾವಣೆ ಸಿದ್ದಾಂತಗಳ ನಡುವೆ ನಡೆದ ಚುನಾವಣೆಯಾಗಿತ್ತು. ಈ ಚುನಾವಣೆಯಲ್ಲಿ ಚಿತ್ತಾಪುರದ ಯುವಕರ ಭವಿಷ್ಯ ಅಡಗಿತ್ತು. ನೀವೆಲ್ಲ ನನ್ನನ್ನು ಗೆಲ್ಲಿಸುವ ಮೂಲಕ ಕ್ಷೇತ್ರದ ಭವಿಷ್ಯ ಕಾಪಾಡಿದ್ದೀರಿ ನಿಮಗೆ ಕೋಟಿ ನಮನಗಳು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನುಡಿದರು.
ಚಿತ್ತಾಪುರ ಪಟ್ಟಣದಲ್ಲಿ ನಡೆದ ಮತದಾರರಿಗೆ ಕೃತಜ್ಞತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ನನ್ನ ವೈಯಕ್ತಿಕ ಕಾರಣದಿಂದಾಗಿ ಹೆಚ್ಚುದಿನಗಳ ಕಾಲ ಪ್ರಚಾರ ಮಾಡಲು ಸಾಧ್ಯವಾಗಿರಲಿಲ್ಲ. ಆದರೂ ನೀವೆಲ್ಲ ನಿಮ್ಮ ಮನೆ ಮಗನ ಚುನಾವಣೆ ಎನ್ನುವಂತೆ ಕೆಲಸ ಮಾಡಿ ಗೆಲ್ಲಿಸಿದ್ದೀರಿ. ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆ ಎಂದು ಭಾವುಕರಾದರು.
ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬಂದು ಒಂದು ತಿಂಗಳ ಒಳಗಾಗಿಯೇ ನಾವು ನೀಡಿದ ಐದು ಗ್ಯಾರಂಟಿಗಳ ಪೈಕಿ ಒಂದನ್ನು ನೆರವೇರಿಸಿದ್ದೇವೆ. ಉಳಿದ ಗ್ಯಾರಂಟಿಗಳನ್ನು ಕೂಡಾ ಅನುಷ್ಠಾನಕ್ಕೆ ತರಲಿದ್ದೇವೆ. ಈ ಬಗ್ಗೆ ಬಿಜೆಪಿಗರಿಗೆ ಅನುಮಾನ ಬೇಡ ಎಂದರು.
ಕಾಂಗ್ರೆಸ್ ಕಡೆಯಿಂದ ಐದು ಮತ್ತು ನನ್ನ ಕಡೆಯಿಂದ ಆರನೆಯ ಗ್ಯಾರಂಟಿನೀಡಿದ್ದೆ. ಅದರಂತೆ ಈಗಾಗಲೇ ನನ್ನ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯಲ್ಲಿ ನಡೆದ ಅಕ್ರಮಗಳ ವಿರುದ್ಧ ತನಿಖೆ ನಿಶ್ಚಿತ ಎಂದು ಹೇಳಿದರು.
ಮಾಜಿ ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ, ಪ್ರಿಯಾಂಕ್ ಖರ್ಗೆ ಅವರ ಬುದ್ದಿಶಕ್ತಿಗೆ ಅನುಗುಣವಾಗಿ ಖಾತೆ ಸಿಕ್ಕಿವೆ. ಅವರು ತಮಗೆ ಕೊಟ್ಟಿರುವ ಇಲಾಖೆಯಲ್ಲಿ ಅಭಿವೃದ್ದಿ ಮಾಡಲಿದ್ದಾರೆ ಎಂದರು.
ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ ಮಾತನಾಡಿ, ಭ್ರಷ್ಟ ಬಿಜೆಪಿ ಸರ್ಕಾರವನ್ನು ಜನರು ಬೇರು ಸಮೇತ ಕಿತ್ತೊಗೆದಿದ್ದಾರೆ. ಕಲಬುರಗಿಗೆ ಪ್ರಧಾನಿ ಬಂದರೂ ಬಿಜೆಪಿ ಗೆಲ್ಲಲಿಲ್ಲ ಎಂದು ಕುಟುಕಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರವಿಂದ ಚವ್ಹಾಣ ಮಾತನಾಡಿ, ಚಿತ್ತಾಪುರ ಜನರ ಹಿತಾಸಕ್ತಿ ಕಾಪಾಡಲು ಪ್ರಿಯಾಂಕ್ ಖರ್ಗೆ ಅವರನ್ನು ನೀವೆಲ್ಲರೂ ಗೆಲ್ಲಿಸಿದ್ದೀರಿ. ರೌಡಿ ಶೀಟರ್ ನನ್ನು ಸೋಲಿಸಿರುವುದಕ್ಕೆ ಅಭಿನಂದನೆಗಳು ತಿಳಿಸಿದರು.
ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿ, ಪ್ರಿಯಾಂಕ್ ಖರ್ಗೆ ಅವರ ಗೆಲುವು ನಮಗೆ ಖಾತ್ರಿಯಾಗಿತ್ತು. ಬಿಜೆಪಿಗರು ಎಷ್ಟೇ ಪ್ರಯತ್ನ ಮಾಡಿದರೂ ಗೆಲ್ಲುವುದು ನಾವೇ ಎನ್ನುವುದನ್ನು ನೀವೆಲ್ಲ ನಿಮ್ಮ ಮತಗಳ ಮೂಲಕ ಸಾಬೀತುಪಡಿಸಿದ್ದೀರಿ ಎಂದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಆ್ಯಪ್ ಆಧಾರಿತ ಸಮೀಕ್ಷೆ ಕೈಬಿಡುವಂತೆ ಆಶಾ ಕಾರ್ಯಕರ್ತೆಯರ ಆಗ್ರಹ
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಸಚಿವ ಪ್ರಿಯಾಂಕ್ ಖರ್ಗೆ ಅವರು ನಾಗಾವಿ ಯಲ್ಲಮ್ಮದೇವಿಗೆ ವಿಶೇಷ ಪೂಜೆ ಸಲ್ಲಿಸಿ ಚಿತಾ ಷಾವಲಿ ದರ್ಗಾಕ್ಕೆ ಭೇಟಿ ನೀಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಸಚಿವರನ್ನು ಮೆರವಣಿಗೆ ಮೂಲಕ ಬಜಾಜ್ ಕಲ್ಯಾಣ ಮಂಟಪಕ್ಕೆ ಕರೆ ತರಲಾಯಿತು.
ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಭಾಗನಗೌಡ ಸಂಕನೂರು, ವಿಶ್ವನಾಥ ಪಾಟೀಲ ಹೆಬ್ಬಾಳ, ಬಸವರಾಜ ಪಾಟೀಲ ಹೇರೂರು, ಅಣ್ಣಾರಾವ್ ಪಾಟೀಲ ಇಂಗಳಗಿ, ಶಂಭುಲಿಂಗ ಗುಂಡಗುರ್ತಿ, ನಾಗರೆಡ್ಡಿ ಪಾಟೀಲ ಕರದಾಳ, ಶಿವಾನಂದ ಪಾಟೀಲ ಮರತೂರು, ತಿಪ್ಪಣ್ಣಪ್ಪ ಕಮಕನೂರು, ಶ್ರೀನಿವಾಸ ಸಗರ, ಅಜೀಜ ಸೇಠ ರಾವೂರು, ಅರವಿಂದ ಚವ್ಹಾಣ, ಶರಣಪ್ಪ ನಾಟೀಕಾರ್, ರಮೇಶ ಮರಗೋಳ, ಮಲ್ಲಿಕಾರ್ಜುನ ಕಾಳಗಿ, ಮುಕ್ತಾರ ಅಹಮದ್ ಪಟೇಲ, ಶಿವರುದ್ರ ಭೀಣಿ ಸೇರಿದಂತೆ ಹಲವಾರು ಜನ ಇದ್ದರು.
ಸುದ್ದಿ ಮಾಹಿತಿ: ವಿಕ್ರಮ್ ವಾಡಿ, ಮಾಸ್ ಮೀಡಿಯಾ ವಾಲೆಂಟಿಯರ್