ಹಿಂದೂ ವಿದ್ಯಾರ್ಥಿನಿಯೋರ್ವಳನ್ನು ರಿಕ್ಷಾದಲ್ಲಿ ಬಾಡಿಗೆಗೆ ಕರೆದುಕೊಂಡು ಹೋದ ವಿಚಾರದಲ್ಲಿ ಮುಸ್ಲಿಂ ಆಟೋ ಚಾಲಕನ ಮೇಲೆ ಅಪರಿಚಿತರ ತಂಡ ಹಲ್ಲೆ ಮಾಡಿ, ಅನೈತಿಕ ಪೊಲೀಸ್ಗಿರಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಧರ್ಮಸ್ಥಳ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಧರ್ಮಸ್ಥಳದ ನಿವಾಸಿಗಳಾದ ಅವಿನಾಶ್ (26), ನಂದೀಪ್ (20), ಪುತ್ತೂರು ತಾಲೂಕಿನ ಉಪ್ಪಿನಂಗಡಿ ನಿವಾಸಿ ಅಕ್ಷತ್ (22) ಬಂಧಿತ ಆರೋಪಿಗಳು.
ಈ ಮೂವರು ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮೂವರಿಗೂ ನ್ಯಾಯಂಗ ಬಂಧನ ವಿಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಧರ್ಮಸ್ಥಳ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಧರ್ಮಸ್ಥಳ ಬಸ್ ನಿಲ್ದಾಣಕ್ಕೆ ಯುವತಿಯನ್ನು ಡ್ರಾಪ್ ಮಾಡಲು ಬಾಡಿಗೆಗೆ ಹೋಗಿದ್ದ ವೇಳೆ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಅತ್ತಾಜೆ ನಿವಾಸಿ ಅಬ್ದುಲ್ ಹಮೀದ್ ಎಂಬವರ ಪುತ್ರ, ಆಟೋ ಚಾಲಕ ಮೊಹಮ್ಮದ್ ಆಶಿಕ್ (22) ಮೇಲೆ ಹಲ್ಲೆ ನಡೆಸಿದ್ದರು.
ಆ.2 ರಂದು ರಾತ್ರಿ ಸುಮಾರು 9 ಗಂಟೆಗೆ ಡ್ರಾಪ್ ಮಾಡಿ ಹೊರಡುವಾಗ ಯುವಕರ ತಂಡವೊಂದು “ನಿನಗೆ ಹಿಂದೂ ಯುವತಿಯರೆ ಬೇಕಾ” ಎಂದು ಬೆದರಿಕೆ ಹಾಕಿ, ಮಾರಣಾಂತಿಕ ಹಲ್ಲೆ ನಡೆಸಿದ್ದರು.
ಯುವಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.