ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ ಮರೀಗೌಡ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಮೈಸೂರು ನಗರದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ, “ಕೆಲವು ಮುಡಾ ಸಿಬ್ಬಂದಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಾರೆಂಬ ದೂರುಗಳು ಬಂದಿವೆ. ಇನ್ನು ಮುಂದೆ ಇಂತಹ ದೂರುಗಳು ಬಂದಲ್ಲಿ ನಾನು ಸಹಿಸುವುದಿಲ್ಲ” ಎಂದು ಹೇಳಿದರು.
“ಮುಡಾ ಆಸ್ತಿಗಳ ಅತಿಕ್ರಮಣವನ್ನು ತೆರವುಗೊಳಿಸುವ ಕಾರ್ಯಾಚರಣೆ ತೀವ್ರಗೊಳಿಸಿ ಅತಿಕ್ರಮಣದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
“ಕೆರೆಗಳ ಅತಿಕ್ರಮಣವನ್ನು ಆದ್ಯತೆಯ ಮೇರೆಗೆ ತೆರವುಗೊಳಿಸಬೇಕು ಮತ್ತು ಅವುಗಳ ಗಡಿಗಳನ್ನು ಗುರುತಿಸಿದ ಬಳಿಕ ಕೆರೆಗಳ ಸುತ್ತ ಬೇಲಿ ಹಾಕಿಸಬೇಕು. ತಮ್ಮ ಗಮನಕ್ಕೆ ತರದೆ ಕಡತಗಳನ್ನು ತೆರವುಗೊಳಿಸಬಾರದು” ಎಂದು ಅಧಿಕಾರಿಗಳಿಗೆ ತಿಳಿಸಿದರು.
“ಸಾರ್ವಜನಿಕರಿಂದ ಸ್ವೀಕರಿಸಿದ ದೂರುಗಳು ಮತ್ತು ಅರ್ಜಿಗಳ ಎಲ್ಲ ವಿವರಗಳನ್ನು ದಾಖಲಿಸಿ, ಗಣಕೀಕರಣಗೊಳಿಸಬೇಕು. ಯಾವುದೇ ಅನುಸರಣಾ ಕ್ರಮಗಳಿಲ್ಲದೆ ಮತ್ತು ಉನ್ನತ ನ್ಯಾಯಾಲಯಗಳಿಗೆ ಮೇಲ್ಮನವಿ ಸಲ್ಲಿಸಲು ವಿಳಂಬವಾದ ಹಲವಾರು ನ್ಯಾಯಾಲಯ ಪ್ರಕರಣಗಳಲ್ಲಿ ಮುಡಾ ತನ್ನ ಆಸ್ತಿಗಳನ್ನು ಕಳೆದುಕೊಂಡಿದೆ. ಅಂತಹ ಪ್ರಕರಣಗಳನ್ನು ಆದ್ಯತೆಯ ಮೇರೆಗೆ ನಿಯಮಿತವಾಗಿ ಅನುಸರಿಸಬೇಕು” ಎಂದು ಮರೀಗೌಡ ಅಧಿಕಾರಿಗಳಿಗೆ ಸೂಚಿಸಿದರು.
“ಆದಾಯ ಸಂಗ್ರಹವನ್ನು ಹೆಚ್ಚಿಸಲು ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲು ಕ್ರಮಗಳನ್ನು ಪ್ರಾರಂಭಿಸಬೇಕು” ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
“ಖಾಸಗಿ ಡೆವಲಪರ್ಗಳು ಮತ್ತು ಮನೆ ನಿರ್ಮಾಣ ಸಹಕಾರ ಸಂಘಗಳು ಭೂಮಾಲೀಕರೊಂದಿಗೆ 50:50 ಪಾಲುದಾರಿಕೆ ಆಧಾರದ ಮೇಲೆ ಪ್ರಾರಂಭಿಸುತ್ತಿರುವ ಹೊಸ ಲೇಔಟ್ಗಳಿಗೆ ಅನುಮತಿ ನೀಡುವಾಗ ಕಾನೂನುಗಳನ್ನು ಪಾಲಿಸಬೇಕು” ಎಂದು ಮುಡಾ ಅಧ್ಯಕ್ಷ ಮರೀಗೌಡ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಭಂಡಾರಮನೆ ಧ್ವಂಸ ಪ್ರಕರಣದ ಆರೋಪಿಗಳಿಗೆ ಜಾಮೀನು; ಧಾರ್ಮಿಕ ಮುಖಂಡರ ಆಕ್ರೋಶ
“ನಗರದ ಯೋಜಿತ ಬೆಳವಣಿಗೆಗಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವುದರ ಜತೆಗೆ ಮುಡಾ ಕೈಗೊಂಡಿರುವ ಎಲ್ಲ ಯೋಜನೆಗಳಿಗೆ ಹಣ ಪಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದು ಭರವಸೆ ನೀಡಿದರು.
ಸಭೆಯಲ್ಲಿ ಮುಡಾ ಕಾರ್ಯದರ್ಶಿ ಶೇಖರ್, ನಗರ ಯೋಜನಾ ಸದಸ್ಯ ಶೇಷ, ಅಧೀಕ್ಷಕ ಎಂಜಿನಿಯರ್ ಚನ್ನಕೇಶವ, ಮುಖ್ಯ ಲೆಕ್ಕಾಧಿಕಾರಿ ಕವಿತಾ ಸೇರಿದಂತೆ ಇತರರು ಇದ್ದರು.