ಪದವಿ ಪರೀಕ್ಷೆ ಮುಂದೂಡುವಂತೆ ಹಾಗೂ ಪರೀಕ್ಷೆ ಶುಲ್ಕ ಏರಿಕೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಮೈಸೂರಿನ ಕ್ರಾಫರ್ಡ್ ಹಾಲ್ ಮುಂದೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಎಐಡಿಎಸ್ಓ ಮೈಸೂರು ಜಿಲ್ಲಾ ಅಧ್ಯಕ್ಷೆ ಚಂದ್ರಕಲಾ ಮಾತನಾಡಿ, “ಮೈಸೂರು ವಿಶ್ವವಿದ್ಯಾನಿಲಯದ ಯುಜಿ ವಿದ್ಯಾರ್ಥಿಗಳ ಪರೀಕ್ಷೆ ನೋಟಿಫಿಕೇಶನ್ ಪ್ರಕಾರ ನವೆಂಬರ್ 15ರಿಂದ ಪರೀಕ್ಷೆಗಳು ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ. ಆದರೆ, ಕಾಲೇಜುಗಳು ಆಗಸ್ಟ್ನಲ್ಲೇ ಪ್ರಾರಂಭವಾದರೂ ಅತಿಥಿ ಉಪನ್ಯಾಸಕರ ಕೊರತೆಯಿಂದಾಗಿ ಮತ್ತು ಅತಿಥಿ ಉಪನ್ಯಾಸಕರ ನೇಮಕವಾಗಿಲ್ಲದ ಕಾರಣ ತರಗತಿಗಳು ನಡೆದಿಲ್ಲ. ಒಂದುವರೆ ತಿಂಗಳಿನ ನಂತರ ತರಗತಿಗಳು ಪ್ರಾರಂಭವಾಗಿವೆ. ಇದರಿಂದ ಪಠ್ಯಕ್ರಮಗಳ ಬೋಧನೆ ಸಂಪೂರ್ಣವಾಗಿ ಮುಗಿದಿಲ್ಲ. ಪಠ್ಯಕ್ರಮ ಪೂರ್ಣಗೊಳ್ಳದೆ ಪರೀಕ್ಷೆ ನಡೆಸುವುದು ಅವೈಜ್ಞಾನಿಕ. ಅಲ್ಲದೆ, ಇದು ವಿದ್ಯಾರ್ಥಿಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಆದ್ದರಿಂದ ಪರೀಕ್ಷೆಗಳನ್ನು ಮುಂದೂಡಬೇಕು” ಎಂದು ಆಗ್ರಹಿಸಿದರು.

ಪದವಿ ಪರೀಕ್ಷೆ ಶುಲ್ಕ ಪ್ರತಿ ವರ್ಷ ಮನಸೋ ಇಚ್ಛೆ ಏರಿಕೆಯಾಗುತ್ತಿದೆ. ಸರ್ಕಾರಿ ಪದವಿ ಕಾಲೇಜುಗಳನ್ನು ಅರಸಿ ಬರುವವರು ಬಡ ವಿದ್ಯಾರ್ಥಿಗಳು, ಆದರೆ ಆ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕವನ್ನೇ 2,000 ರೂಪಾಯಿಯಂತೆ ಸಂಗ್ರಹ ಮಾಡುತ್ತಿದ್ದಾರೆ. ತೃತೀಯ ಸೆಮಿಸ್ಟರ್ ಓದುತ್ತಿರುವ ಮತ್ತು ಪದವಿಯನ್ನೇ ಮುಗಿಸಿರುವ ವಿದ್ಯಾರ್ಥಿಗಳಿಗೆ ಯಾವುದೇ ಸೆಮಿಸ್ಟರ್ ನ ಅಂಕಪಟ್ಟಿಯೇ ಸಿಕ್ಕಿಲ್ಲ ,ಆದರೂ ಅಂಕಪಟ್ಟಿಯ ಶುಲ್ಕವನ್ನು ಪ್ರತಿ ವರ್ಷ ಕಟ್ಟಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಪ್ರತಿ ವರ್ಷ ಏರಿಕೆ ಆಗುತ್ತಿದೆ. ಆದ್ದರಿಂದ, ಹೆಚ್ಚುವರಿ ಶುಲ್ಕವನ್ನು ಈ ಕೂಡಲೇ ಕೈ ಬಿಡಬೇಕು ಮತ್ತು ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಅಂಕಪಟ್ಟಿಗಳನ್ನು ವಿತರಿಸಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ತುಮಕೂರು | ಬಂಡೆಕಲ್ಲು, ನೀರಿನ ಮಧ್ಯೆ 12 ಗಂಟೆ ಕಳೆದಿದ್ದು ಹೇಗೆ? ಬದುಕುಳಿದ ವಿದ್ಯಾರ್ಥಿನಿ ಹೇಳಿದ್ದು ಹೀಗೆ..
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ನಿತಿನ್, ಉಪಾಧ್ಯಕ್ಷೆ ಸ್ವಾತಿ ಪದಾಧಿಕಾರಿಗಳಾದ ಹೇಮ, ಅಂಜಲಿ, ಅಭಿಷೇಕ್ ಮತ್ತು ಮಹಾರಾಜ, ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳಾದ ಗುರುರಾಜ್, ಸತೀಶ್, ಸಂತೋಷ್, ಜ್ಞಾನೇಶ್, ಹರ್ಫತ್, ಭೂಮಿಕ, ಅರ್ಚನಾ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

