ಅಂಬೇಡ್ಕರ್ ನಾಮಫಲಕ ನೆಡುವ ವಿಚಾರವಾಗಿ ಸೋಮವಾರ ಸಂಜೆ 7.30ರಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ಸಂಭವಿಸಿರುವುದಾಗಿ ವರದಿಯಾಗಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳ ನಡುವೆ ಘರ್ಷಣೆ ನಡೆದಿದೆ.
ದಲಿತ ಸಮುದಾಯ ಹಾಗೂ ನಾಯಕ ಸಮುದಾಯದ ನಡುವೆ ಅಂಬೇಡ್ಕರ್ ನಾಮಫಲಕ ಅಳವಡಿಸುವ ವಿಚಾರದಲ್ಲಿ ಘರ್ಷಣೆ ಉಂಟಾಗಿದ್ದು, ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ದಲಿತರ ಬೀದಿಯ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಉದ್ರಿಕ್ತ ಗುಂಪು ಧ್ವಂಸ ಮಾಡಿದ್ದಲ್ಲದೆ, ಕಲ್ಲು ತೂರಾಟ ಕೂಡ ನಡೆದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ನಂಜನಗೂಡು ಗ್ರಾಮಾಂತರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೊಲೀಸರ ಸಹಿತ 30ಕ್ಕೂ ಅಧಿಕ ಮಂದಿಗೆ ಗಾಯಗಳಾಗಿರುವುದಾಗಿ ವರದಿಯಾಗಿದೆ. ಈ ಪೈಕಿ ಎಂಟು ಮಂದಿಯನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಂಜನಗೂಡು ಸರ್ಕಲ್ ಇನ್ಸ್ಪೆಕ್ಟರ್ ಸುನಿಲ್, ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ಜಗದೀಶ್ ಹಾಗೂ ಸಿಬ್ಬಂದಿ ಗೋಪಾಲಕೃಷ್ಣ ಎಂಬುವವರಿಗೆ ಗಾಯಗಳಾಗಿವೆ.
ಘಟನೆಯ ಬಗ್ಗೆ ಮಾಹಿತಿ ಅರಿತ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಟ್ಕರ್, ಅಡಿಷನಲ್ ಎಸ್ ಪಿ ನಂದಿನಿ ಸಹಿತ ನೂರಾರು ಪೊಲೀಸರು ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ಘಟನೆ ಹಿನ್ನೆಲೆ
ಹಲ್ಲರೆ ಗ್ರಾಮದಿಂದ ಹುರ ಗ್ರಾಮದ ಕಡೆಗೆ ತೆರಳುವ ರಸ್ತೆಗೆ ಡಾ. ಬಿ ಆರ್ ಅಂಬೇಡ್ಕರ್ ಹೆಸರಿಡಲು ಪರಿಶಿಷ್ಟ ಸಮುದಾಯದ ಯುವಕರು ಸ್ಥಳೀಯ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಪಿಡಿಒ ಅವರಿಂದ ಅನುಮತಿ ಪಡೆದಿದ್ದರು. ಆದರೆ ‘ಬೀದಿಯ ಕೊನೆಯಲ್ಲಿ ನಮ್ಮ ಮನೆಗಳಿದ್ದು, ಇಲ್ಲಿ ಫಲಕ ಅಳವಡಿಸಬೇಡಿ’ ಎಂದು ನಾಯಕ ಸಮುದಾಯದವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಐದು ದಿನಗಳ ಹಿಂದೆ ನಾಮಫಲಕ ಅಳವಡಿಕೆ ಕಾರ್ಯಕ್ರಮ ಮುಂದೂಡಲಾಗಿತ್ತು.
ಸೋಮವಾರ ಸಂಜೆ ಪರಿಶಿಷ್ಟ ಜಾತಿಯ ಯುವಕರು ರಸ್ತೆಯಲ್ಲಿ ನಾಮಫಲಕ ಅಳವಡಿಸಲು ಮುಂದಾದಾಗ ಆರಂಭಗೊಂಡ ಜಗಳವು ಹೊಡೆದಾಟಕ್ಕೆ ತಿರುಗಿದ್ದು, ಪರಸ್ಪರ ಕಲ್ಲು ಹಾಗೂ ಒನಕೆಯಿಂದ ಹಲ್ಲೆ ನಡೆಸಿದ್ದಾರೆ. ಮಹಿಳೆಯರು, ಮಕ್ಕಳೂ ಕೂಡ ಘಟನೆಯಲ್ಲಿ ಗಾಯಗೊಂಡಿರುವುದಾಗಿ ವರದಿಯಾಗಿದೆ.